ಕೆಆರ್ ಎಸ್ ನಲ್ಲಿ ನಾಲ್ವಡಿಗೆ ಸರಿಸಮನಾದ ಎಂವಿ ಪ್ರತಿಮೆ ಏಕೆ ಬೇಡ?
ಮೈಸೂರು, ಜೂನ್ 15: ಕೆಆರ್ ಎಸ್ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪಕ್ಕದಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರ ಪ್ರತಿಮೆ ನಿರ್ಮಿಸುವುದು ಈಗ ವಿವಾದವಾಗಿ ಮಾರ್ಪಡುತ್ತಿದೆ. ಮೈಸೂರಿನಲ್ಲಿ ಹೊತ್ತಿರುವ ವಿರೋಧದ ಕಿಡಿ ನಿಧಾನವಾಗಿ ಹಳೆ ಮೈಸೂರು ವ್ಯಾಪ್ತಿಗೆ ವ್ಯಾಪಿಸುತ್ತಿದೆ.
Recommended Video
ಕೆಆರ್ ಎಸ್ ಜಲಾಶಯವನ್ನು ನಿರ್ಮಾಣ ಮಾಡಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಸರ್ ಎಂ. ವಿಶ್ವೇಶ್ವರಯ್ಯ ಎಂದು ಎಲ್ಲರೂ ತಿಳಿದುಕೊಂಡಿದ್ದಾರೆ. ಇವತ್ತಿಗೂ ಮಂಡ್ಯದ ಬಹಳಷ್ಟು ಮಂದಿ ವಿಶ್ವೇಶ್ವರಯ್ಯ ಅವರ ಭಾವಚಿತ್ರಗಳನ್ನಿಟ್ಟುಕೊಂಡು ನೆನೆಯುತ್ತಾರೆ. ಹೀಗಿರುವಾಗ ಇದೀಗ ಎದ್ದಿರುವ ವಿವಾದಗಳು ಆರೋಪ ಪ್ರತ್ಯಾರೋಪಗಳನ್ನು ಜನ ಅಚ್ಚರಿಯಿಂದ ನೋಡುವಂತೆ ಮಾಡಿದೆ.
ಕೆಆರ್ ಎಸ್ ಬಳಿ ಒಡೆಯರ್ ಸಮನಾಗಿ ಸರ್ ಎಂವಿ ಪ್ರತಿಮೆ ಸ್ಥಾಪನೆಗೆ ವಿರೋಧ
ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ಬೇಡ
ಸರ್ಕಾರ ಕೆಆರ್ ಎಸ್ ಜಲಾಶಯದಲ್ಲಿ ಪ್ರತಿಮೆ ನಿರ್ಮಾಣ ಮಾಡುತ್ತಿರುವಂತೆಯೇ ಇತಿಹಾಸ ತಜ್ಞ ಪಿ.ವಿ.ನಂಜರಾಜ ಅರಸು ಸೇರಿದಂತೆ ಒಂದಷ್ಟು ಮಂದಿ ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದರು. ವಿಶ್ವೇಶ್ವರಯ್ಯನವರ ಪ್ರತಿಮೆ ನಿರ್ಮಿಸಿ, ಆದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪಕ್ಕದಲ್ಲಿ ಮತ್ತು ಅವರಿಗೆ ಸರಿಸಮವಾಗಿ ಪ್ರತಿಮೆ ನಿರ್ಮಾಣ ಮಾಡಬಾರದು, ಬೇರೆ ಎಲ್ಲಿ ಬೇಕಾದರೂ ಪ್ರತಿಮೆ ನಿರ್ಮಾಣ ಮಾಡಿಕೊಳ್ಳಿ ಎಂಬುದು ಅವರ ಅಭಿಪ್ರಾಯವಾಗಿತ್ತು.
ವಿರೋಧದ ಹೇಳಿಕೆಗಳು ಹೊರಬರಲು ಆರಂಭವಾಗಿ ಕೆಲವೇ ದಿನಗಳು ಕಳೆದು ಹೋಗಿವೆ. ಈ ಬಗ್ಗೆ ಸರ್ಕಾರದ ಕಡೆಯಿಂದ ಯಾವ ಸ್ಪಷ್ಟನೆಯೂ ಬರುತ್ತಿಲ್ಲ. ಒಡೆಯರ್ ಮನೆತನದ ಕಡೆಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಪಕ್ಕದಲ್ಲಿಯಾಗಲೀ, ಅವರಿಗೆ ಸರಿಸಮವಾಗಿ ನಿರ್ಮಾಣ ಮಾಡುತ್ತಿರುವ ಬಗ್ಗೆ ಯಾವುದೇ ವಿರೋಧವೂ ಇದುವರೆಗೆ ಬಂದಿಲ್ಲ.
ಸಮಾನಮನಸ್ಕರಿಂದ ವಿರೋಧ ಆರಂಭ
ಕೆಆರ್ಎಸ್ ಜಲಾಶಯದ ದ್ವಾರದ ಬಳಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಾಣ ಮಾಡುವಂತೆ 2018ರಲ್ಲಿಯೇ ಜನ ಪತ್ರ ಚಳವಳಿ ಮಾಡಿ ಸರ್ಕಾರದ ಗಮನ ಸೆಳೆದಿದ್ದರು. ಸರ್ಕಾರ ಇದೀಗ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯನವರ ಪ್ರತಿಮೆ ನಿರ್ಮಾಣ ಕಾಮಗಾರಿ ಆರಂಭಿಸುತ್ತಿದ್ದಂತೆಯೇ ಇತಿಹಾಸ ತಜ್ಞ ಪಿ.ವಿ.ನಂಜರಾಜ ಅರಸು ಸೇರಿದಂತೆ ಕೆಲವರು ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಮೈಸೂರಿನಲ್ಲಿ ಸಭೆ ನಡೆಸಿ ವಿರೋಧ ವ್ಯಕ್ತಪಡಿಸಿರುವ ಸಮಾನ ಮನಸ್ಕರು ಯಾವುದೇ ಕಾರಣಕ್ಕೂ ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಗುಟುರ್ ಹಾಕಿದ್ದಾರೆ. ಇಷ್ಟಕ್ಕೂ ಏಕೆ ನಿರ್ಮಾಣ ಮಾಡಬಾರದು ಎಂಬುದಕ್ಕೆ ಇತಿಹಾಸ ತಜ್ಞ ಪಿ.ವಿ.ನಂಜರಾಜ ಅರಸು ನೀಡುತ್ತಿರುವ ಕಾರಣಗಳ ದೊಡ್ಡ ಪಟ್ಟಿಯೇ ಇದೆ. ಅದೇನೆಂದರೆ...
ಕೆಆರ್ ಎಸ್ ವಿಶ್ವೇಶ್ವರಯ್ಯನವರ ಪರಿಕಲ್ಪನೆಯಲ್ಲ
ಕೃಷ್ಣರಾಜಸಾಗರ ಜಲಾಶಯ ಸರ್ ಎಂ.ವಿಶ್ವೇಶ್ವರಯ್ಯನವರ ಪರಿಕಲ್ಪನೆಯಲ್ಲ. ಅದು ಚೀಫ್ ಇಂಜಿನಿಯರ್ ಕ್ಯಾಪ್ಟನ್ ನಿಕೋಲಸ್ ಡಾಸ್ ಪರಿಕಲ್ಪನೆ. ಕೆಆರ್ ಎಸ್ ಮೂಲ ಯೋಜನೆಯನ್ನು 1908ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಚೀಫ್ ಇಂಜಿನಿಯರ್ ಆಗಿದ್ದ ಕ್ಯಾಪ್ಟನ್ ನಿಕೋಲಸ್ ಡಾಸ್ ರೂಪಿಸಿದ್ದು, ಕೆಆರ್ ಎಸ್ ಕಟ್ಟಲು ಮದ್ರಾಸ್ ಸರ್ಕಾರ ಆಕ್ಷೇಪವೆತ್ತಿದ ಕಾರಣ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿಲ್ಲ.
ಜಲಾಶಯದ 70 ಅಡಿಯವರೆಗಿನ ಕಲ್ಪನೆ ನಿಕೋಲಸ್ ಡಾಸ್ ಅವರದ್ದಾಗಿದ್ದು, ಅಲ್ಲಿಂದ 124 ಅಡಿಯವರೆಗಿನ ಪರಿಷ್ಕೃತ ಯೋಜನೆಯಷ್ಟೇ ವಿಶ್ವೇಶ್ವರಯ್ಯನವರದು. ಅಣೆಕಟ್ಟೆ ನಿರ್ಮಾಣಕ್ಕೆ ಜಾಗ ಗುರುತು ಮಾಡಿದ್ದು ಕೂಡ ಡಾಸ್. ವಿಶ್ವೇಶ್ವರಯ್ಯನವರು ಕೆಆರ್ ಎಸ್ಗಾಗಿ ಸೇವೆ ಸಲ್ಲಿಸಿದ್ದು ಒಂದು ವರ್ಷ ಮಾತ್ರ. ಆ ನಂತರ 1911 ರಿಂದ 32ರವರೆಗೆ ನಡೆದ ಕೆಆರ್ ಎಸ್ ಕಾಮಗಾರಿಯಲ್ಲಿ ಕರ್ಪೂರ ಶ್ರೀನಿವಾಸರಾವ್, ಬಿ.ಸುಬ್ಬರಾವ್, ಕೃಷ್ಣ ಐಯ್ಯಂಗಾರ್, ಜಾನ್ಬೋರ್, ಕೆ.ಆರ್.ಶೇಷಾಚಾರ್ ಮತ್ತು ಎಸ್.ಶ್ರೀನಿವಾಸ ಐಯ್ಯರ್ ಎಂಬ 7 ಮುಖ್ಯ ಇಂಜಿನಿಯರ್ ಗಳು ಕೆಲಸ ಮಾಡಿದ್ದಾರೆ.
ಐದು ದಿವಾನರ ಪ್ರತಿಮೆ ನಿರ್ಮಿಸಿ
1918ರಲ್ಲಿ ನೇಮಿಸಿದ ಮಿಲ್ಲರ್ ಆಯೋಗಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಿಶ್ವೇಶ್ವರಯ್ಯನವರು ದಿವಾನ್ ಹುದ್ದೆಗೆ ರಾಜೀನಾಮೆ ನೀಡಿದರು. ಆ ನಂತರ ಸರ್ ಎಂ.ಕಾಂತರಾಜ ಅರಸ್, ಸರ್ ಎ.ಆರ್.ಬ್ಯಾನರ್ಜಿ, ಸರ್ ಮಿರ್ಜಾ ಇಸ್ಮಾಯಿಲ್ ಅವರು ಮೈಸೂರು ದಿವಾನರಾಗಿ ಸೇವೆ ಸಲ್ಲಿಸಿದ್ದಾರೆ. ಕೆಆರ್ ಎಸ್ ಆರಂಭದ ದಿನಗಳಲ್ಲಿ ಆನಂದರಾವ್ ಕೂಡ ದಿವಾನರಾಗಿ ಸೇವೆ ಸಲ್ಲಿಸಿದ್ದು, ಇವರೆಲ್ಲರೂ ಸರ್ ಎಂವಿ ಅವರಂತೆಯೇ ಪ್ರಾಮಾಣಿಕರು, ಶ್ರಮ ಜೀವಿಗಳಾಗಿದ್ದಾರೆ. ವಿಶ್ವೇಶ್ವರಯ್ಯನವರಿಗೆ ಎಷ್ಟು ಗೌರವ ಸಲ್ಲಬೇಕೋ ಅದು ಇವರಿಗೂ ಸಲ್ಲಬೇಕು.
ನಾಲ್ವಡಿ ಕೃಷ್ಣರಾಜ ಒಡೆಯರ್ ಪಕ್ಕದಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರ ಪ್ರತಿಮೆ ನಿರ್ಮಿಸುವುದು ಮಹಾರಾಜರಿಗೆ ಮಾಡುವ ದೊಡ್ಡ ಅವಮಾನ. ವಿಶ್ವೇಶ್ವರಯ್ಯನವರು ಅತ್ಯುತ್ತಮ ತಾಂತ್ರಿಕ ತಜ್ಞರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರಿಗೆ ಭಾರತರತ್ನವಷ್ಟೇ ಸಾಲದು. ವಿಶ್ವರತ್ನ ಕೊಡಲಿ, ನೊಬೆಲ್ ಪ್ರಶಸ್ತಿಗೂ ಶಿಫಾರಸು ಮಾಡಲಿ. ಅದನ್ನು ನಾವು ಬೆಂಬಲಿಸುತ್ತೇವೆ. ಕೆಆರ್ ಎಸ್ ಬಿಟ್ಟು ಬೇರೆಲ್ಲಾದರೂ ಸರ್ದಾರ್ ವಲ್ಲಭಬಾಯಿ ಪಟೇಲರಿಗಿಂತ ಎತ್ತರದ ಪ್ರತಿಮೆ ಸ್ಥಾಪಿಸಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಕೆಆರ್ ಎಸ್ನಲ್ಲಿ ಮಾತ್ರ ಅವರ ಪ್ರತಿಮೆ ಬೇಡ. ಸರ್ಎಂವಿ ಪ್ರತಿಮೆ ಸ್ಥಾಪಿಸುವುದಾದರೆ ಅವರ ಜೊತೆಗೆ ಕೆಆರ್ ಎಸ್ಗೆ ದುಡಿದ ಐದು ದಿವಾನರ ಚಿಕ್ಕ ಪ್ರತಿಮೆಗಳನ್ನು ಸ್ಥಾಪಿಸಲಿ.
ಸತ್ಯವನ್ನು ಮರೆ ಮಾಚಲಾಗುತ್ತಿದೆ
ಸರ್ ಎಂ.ವಿಶ್ವೇಶ್ವರಯ್ಯನವರ ಕೊಡುಗೆ ಬಗ್ಗೆ ಅಭಿಮಾನ ಮತ್ತು ಗೌರವವಿದೆ. ಆದರೆ, ಕೆಆರ್ ಎಸ್ ನಿರ್ಮಾಣದಲ್ಲಿ ಅವರ ಪಾತ್ರದ ಬಗ್ಗೆ ಸುಳ್ಳು ಹೇಳುತ್ತಾ ಸತ್ಯವನ್ನು ಮರೆ ಮಾಚಲಾಗುತ್ತಿರುವುದಾಗಿ ಇತಿಹಾಸ ತಜ್ಞ ಪಿ.ವಿ.ನಂಜರಾಜ ಅರಸು ಹೇಳುತ್ತಿದ್ದಾರೆ. ಮೈಸೂರು-ಮಂಡ್ಯಗಳಲ್ಲಿ ಜನರ ಮುಂದೆ ಹೋಗುತ್ತಿರುವ ಇವರು ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಾಣದ ಕುರಿತಂತೆ ಮಾತನಾಡುತ್ತಾ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಿಧಾನವಾಗಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪ-ಪ್ರತ್ಯಾರೋಪಗಳು ಆರಂಭವಾಗಿದೆ. ಇದು ಮುಂದುವರೆಯುವ ಮುನ್ನ ಸರ್ಕಾರ ಒಂದು ತೀರ್ಮಾನಕ್ಕೆ ಬಂದು ವಿವಾದಕ್ಕೆ ತೆರೆ ಎಳೆಯಬೇಕಾಗಿದೆ.