ಚಾಮುಂಡೇಶ್ವರಿ ಬೆಟ್ಟದ ನಂದಿಯ ಬಣ್ಣ ಬದಲಾಗಿದ್ದರ ಅಸಲಿಯತ್ತು
ಮೈಸೂರು, ಅಕ್ಟೋಬರ್ 10 : ಚಾಮುಂಡಿ ಬೆಟ್ಟದ ಏಕಶಿಲಾ ಬೃಹತ್ ನಂದಿ ವಿಗ್ರಹ ಬಣ್ಣ ಬದಲಾಗಿದೆ. ರಾಸಾಯನಿಕದಿಂದ ಬಣ್ಣ ಪರಿವರ್ತನೆಗೊಂಡಿದೆ ಎಂಬ ಮಾಹಿತಿಯೇ ಕಳೆದೊಂದು ವಾರದಿಂದ ಎಲ್ಲ ಮಾಧ್ಯಮದಲ್ಲೂ ಪ್ರಸಾರಗೊಂಡಿದ್ದು, ನಿಮಗೂ ತಿಳಿದಿದೆ. ಆದರೆ ನಂದಿಯು ಬೆಳ್ಳಗೆ ಆಗಿದ್ದು ರಾಸಾಯನಿಕದಿಂದ ಅಲ್ಲ ಎಂಬ ಮಾತನ್ನು ಸ್ವತಃ ಪುರಾತತ್ವ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹೌದು, ಮುನ್ನೂರು ವರ್ಷಕ್ಕೂ ಹೆಚ್ಚು ಹಳೆಯ, ಏಕಶಿಲೆಯಲ್ಲಿ ಕೆತ್ತನೆ ಮಾಡಿರುವ ಈ ನಂದಿ ಮೂರ್ತಿಯನ್ನು ಇದುವರೆಗೆ ಕಪ್ಪು ಬಣ್ಣದಿಂದ ನೋಡಿದ್ದ ಮಂದಿಗೆ ಈಗ ಬಿಳಿ ಬಣ್ಣದ ನಂದಿ ಅಚ್ಚರಿ ಉಂಟು ಮಾಡಿದೆ. ಅಂದಹಾಗೆ ಮೂರ್ತಿ ಬಣ್ಣ ಬದಲಾವಣೆಗೆ ಯಾವುದೇ ಜಾದೂ ನಡೆದಿಲ್ಲ. ಬದಲಾಗಿ ಪುರಾತತ್ವ ಇಲಾಖೆಯು ನಂದಿ ಮೂರ್ತಿಯನ್ನು ಸ್ವಚ್ಛ ಮಾಡಿದೆ ಅಷ್ಟೆ. ಇದು ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.
ಬದಲಾವಣೆಯ ಕುರಿತಾಗಿ ಪುರಾತತ್ವ ಇಲಾಖೆಯ ಅಧಿಕಾರಿಗಳು ಮಾತನಾಡಿದ್ದು, ನಂದಿ ವಿಗ್ರಹಕ್ಕೆ ಯಾವುದೇ ಬಣ್ಣ ಬಳಿದಿಲ್ಲ. ರಾಸಾಯನಿಕ ವಸ್ತುಗಳನ್ನು ಬಳಸಿಲ್ಲ. ನಂದಿ ಮೂರ್ತಿಯನ್ನು ಸ್ವಚ್ಛಗೊಳಿಸಲು ಪುರಾತತ್ವ ಇಲಾಖೆ ನೂತನ ತಂತ್ರಜ್ಞಾನ ಬಳಸಿದೆ, ಅಷ್ಟೇ. ಅಧಿಕ ಒತ್ತಡದಲ್ಲಿ ವಾಟರ್ ಜೆಟ್ ತಂತ್ರಜ್ಞಾನ ಬಳಸಿ ಮೂರ್ತಿಯನ್ನು ಸ್ವಚ್ಛಗೊಳಿಸಿದ್ದಾರೆ.

ವಾಟರ್ ಜೆಟ್ ಬಳಕೆ
ರಭಸವಾಗಿ ಚಿಮ್ಮುವ ನೀರಿನಿಂದ ನಂದಿಯ ಮೇಲಿದ್ದ ಜಿಡ್ಡು, ಕೊಳೆ, ಕಸವನ್ನು ಕಿತ್ತೊಗೆಯಲಾಗಿದೆ. ಸಾಮಾನ್ಯವಾಗಿ ಕಲ್ಲುಗಳನ್ನು ಸ್ವಚ್ಛಗೊಳಿಸಲು ವಾಟರ್ ಜೆಟ್ ಬಳಸಲಾಗುತ್ತದೆ. ಹಾಗೆಯೇ ಇಲ್ಲಿಯೂ ಅದೇ ವಿಧಾನವನ್ನು ಬಳಸಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

ಯಾವುದೇ ರಾಸಾಯನಿಕ ಬಳಸಿಲ್ಲ
ನಂದಿ ಮೂರ್ತಿಯನ್ನು ಸ್ವಚ್ಛ ಮಾಡುವುದಕ್ಕೆ ರಾಸಾಯನಿಕ ವಸ್ತು ಬಳಸಲಾಗಿದೆ, ಪಾಲಿಷ್ ಮಾಡಲಾಗಿದೆ ಎಂಬ ಮಾತು ಕೇಳಿ ಬಂದಿದೆ. ಇನ್ನೂ ಮುಂದುವರಿದು, ಅಕ್ಕಿ ಹಿಟ್ಟನ್ನು ನಂದಿ ಮೂರ್ತಿಗೆ ಲೇಪನ ಮಾಡಿ, ನಂತರ ರಭಸವಾಗಿ ಚಿಮ್ಮುವ ನೀರಿನಿಂದ ತೊಳೆಯಲಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಈ ಎಲ್ಲ ಊಹಾಪೋಹಗಳನ್ನು ಪುರಾತತ್ವ ಇಲಾಖೆ ಅಧಿಕಾರಿಗಳು ಅಲ್ಲಗಳೆದಿದ್ದಾರೆ.

ಕೊಬ್ಬರಿಯನ್ನು ಉಜ್ಜಿ ರಕ್ಷಣೆ
ಮೈಸೂರು ರಾಜರ ಆಳ್ವಿಕೆಯ ಕಾಲದಲ್ಲಿ ಕೆತ್ತಲಾದ ನಂದಿ ಮೂರ್ತಿ ಮಳೆ, ಗಾಳಿ, ಬಿಸಿಲಿನಿಂದ ಬಿರುಕು ಬಿಡಬಹುದು ಎಂಬ ಕಾರಣದಿಂದ ಹಾಗೂ ಮುಂದಾಲೋಚನೆಯಿಂದ ನಂದಿ ಮೂರ್ತಿಗೆ ಶತಮಾನಗಳ ಹಿಂದೆಯೇ ಕೊಬ್ಬರಿಯನ್ನು ಉಜ್ಜಿ ರಕ್ಷಣೆ ನೀಡುವ ಪ್ರಯತ್ನ ಮಾಡಲಾಗಿತ್ತು.

ಮಜ್ಜನ, ಅಭಿಷೇಕದಿಂದ ಮಡ್ಡಿ ಸಂಗ್ರಹ
ಕಾಲ ಕ್ರಮೇಣ ಮೂರ್ತಿಗೆ ಎಣ್ಣೆಯ ಮಜ್ಜನ ಮಾಡಿಸಲಾಗುತ್ತಿತ್ತು. ಇದರೊಂದಿಗೆ ಅಭಿಷೇಕವೂ ನಡೆಯುವುದರಿಂದ ನಂದಿ ಮೂರ್ತಿಯ ಮೇಲೆ ದಪ್ಪದಾದ ಮಡ್ಡಿ ಸಂಗ್ರಹವಾಗಿ ಕಪ್ಪು ಬಣ್ಣಕ್ಕೆ ತಿರುಗಿತ್ತು. ಆದರೆ ಇದೀಗ ಸ್ವಚ್ಛಗೊಳಿಸಿದ್ದರಿಂದ ಮೂರ್ತಿಯ ಸ್ವರೂಪವೇ ಬದಲಾಗಿದೆ. ಇದಕ್ಕೆ ಯಾವುದೇ ರಾಸಾಯನಿಕ ಸಿಂಪಡಣೆ ಮಾಡಿಲ್ಲ. ಹೀಗೆ ಮಾಡಿದಲ್ಲಿ ಮೂರ್ತಿ ಬಾಳಿಕೆಯಿರುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ.

ಕುಂಕುಮ– ಅರಿಶಿನ ಬಳಸುವಂತಿಲ್ಲ
ಭಕ್ತರು ತರುವ ಕುಂಕುಮ- ಅರಿಶಿನದಿಂದಲೂ ನಂದಿಮೂರ್ತಿಗೆ ಧಕ್ಕೆಯಾಗುವ ಆತಂಕವಿದೆ. ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಅರಿಶಿನ - ಕುಂಕುಮ ಆಕರ್ಷಕವಾದ ಬಣ್ಣದಿಂದ ಕೂಡಿವೆ. ರಾಸಾಯನಿಕ ವಸ್ತುಗಳಿಂದ ತಯಾರಿಸುವ ಅವುಗಳನ್ನು ಹಚ್ಚುವುದರಿಂದ ಮೂರ್ತಿಗಳು ಬಿರುಕು ಬಿಡುವ ಆತಂಕವೂ ಇರುವುದರಿಂದ ಅರಿಶಿನ-ಕುಂಕುಮ ಹಚ್ಚದಂತೆ ಸಲಹೆ ನೀಡಿದ್ದಾರೆ.












Click it and Unblock the Notifications