ಮೈಸೂರಿನಲ್ಲಿ ರಂಜಾನ್ ಮಾಸಾಚರಣೆ ಆರಂಭ;ತಯಾರಿ ಹೇಗಿದೆ ಗೊತ್ತಾ?
ಮೈಸೂರು, ಮೇ 7:ಸೋಮವಾರ ಬಾನಂಗಳದಲ್ಲಿ ಚಂದ್ರ ದರ್ಶನವಾಗುತ್ತಿದ್ದಂತೆ ಮೈಸೂರು ನಗರವೂ ಸೇರಿದಂತೆ ಪಟ್ಟಣ, ಗ್ರಾಮೀಣ ಪ್ರದೇಶದ ಮುಸ್ಲಿಮರ ಮನೆಗಳು, ಮಸೀದಿಗಳಲ್ಲಿ ರಂಜಾನ್ ಮಾಸಾಚರಣೆ ಅಧಿಕೃತವಾಗಿ ಚಾಲನೆ ಪಡೆಯಿತು.
ಈ ಬಾರಿ ಕಡು ಬೇಸಿಗೆಯಲ್ಲೇ ಬಂದಿದ್ದು, ಒಂದು ತಿಂಗಳ ವ್ರತಾಚರಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಮಸೀದಿಗಳು ಕೂಡ ಸಜ್ಜಾಗಿವೆ. ಸೂರ್ಯೋದಯಕ್ಕಿಂತ ಮುನ್ನ, ಸೂರ್ಯಾಸ್ತದ ನಂತರ ಆಹಾರ ಸೇವನೆ ಮಾಡಲಾಗುತ್ತದೆ. ಏಳು ವರ್ಷದೊಳಗಿನ ಮಕ್ಕಳು, ಅನಾರೋಗ್ಯ ಪೀಡಿತರು, ಅಶಕ್ತರಿಗೆ ಮಾತ್ರ ಉಪವಾಸದಿಂದ ವಿನಾಯಿತಿ ಇರುತ್ತದೆ.
ಇಂದು ಮಂಗಳವಾರ ನಸುಕಿನಂದು 4.32ಕ್ಕೆ ಜಿಲ್ಲೆಯಾದ್ಯಂತ ಮೊದಲ ಸಹರಿ ಆರಂಭಗೊಂಡಿತು. ಮೊದಲ ದಿನದ ಇಫ್ತಾರ್ ಸಮಯ ಸಂಜೆ 6.48ಕ್ಕೆ ಇದೆ. ಇಂದು ಮುಂಜಾನೆ ಆಝಾನ್ಗೆ ಮುನ್ನವೇ ಅತ್ತಾಳ ಸೇವಿಸಿ, ಬಳಿಕ ಉಪವಾಸ ಆರಂಭಿಸಲಾಗಿದೆ.
ಸಂಜೆಯ ಸೂರ್ಯಾಸ್ತದ ಆಝಾನ್ ಕೇಳಿದ ಬಳಿಕ ಇಫ್ತಾರ್ನೊಂದಿಗೆ ಉಪವಾಸವನ್ನ ಅಂತ್ಯಗೊಳಿಸಲಾಗುತ್ತದೆ. ನಿತ್ಯ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ವಿವಿಧೆಡೆ ಇಫ್ತಾರ್ ಕೂಟಗಳನ್ನು ಏರ್ಪಡಿಸಲಾಗುತ್ತದೆ.
ಮೈಸೂರಿನಲ್ಲಿ ಒಟ್ಟು 500ಕ್ಕೂ ಹೆಚ್ಚು ಮಸೀದಿಗಳಿದ್ದು, ರಂಜಾನ್ ಮಾಸಾಚರಣೆಗಾಗಿ ಸಜ್ಜುಗೊಂಡಿವೆ. ಸುಣ್ಣ-ಬಣ್ಣದಿಂದ ಅಲಂಕೃತಗೊಂಡಿವೆ. ಪ್ರಾರ್ಥನೆಗಾಗಿ ವಿವಿಧೆಡೆಯಿಂದ ಬರುವವರ ಅನುಕೂಲಕ್ಕಾಗಿ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಲಾಗಿದೆ. ಹೊಸ ಜಮಾಖಾನಗಳ ಖರೀದಿ, ಹಳೆಯ ಜಮಾಖಾನಗಳನ್ನು ಒಗೆದು ಸ್ವಚ್ಛಗೊಳಿಸುವ ಕಾರ್ಯ ಪೂರ್ಣ ಗೊಂಡಿದೆ. ಇಫ್ತಾರ್ ಆಯೋಜನೆಯ ಸಿದ್ಧತೆಗಳು ಬಿರುಸಿನಿಂದ ನಡೆದಿವೆ. ಸಹರಿ, ಇಫ್ತಾರ್ನ ಕ್ಯಾಲೆಂಡರ್ ಪ್ರಕಟಗೊಂಡಿದೆ.

ಮಸೀದಿಗಳಲ್ಲಿ ಕುರಾನ್ ಪಠಣ
ಮಸೀದಿಗಳು, ಮನೆಗಳು ಸೇರಿದಂತೆ ಪ್ರತಿಯೊಬ್ಬ ಮುಸ್ಲಿಮರ ಮನ ಮನವೂ ಪವಿತ್ರ ಕ್ಷಣಕ್ಕಾಗಿ ಕಾತರದಿಂದ ಕಾದಿದ್ದು, ರೋಜಾ ಆಚರಣೆಗೆ ಚಾಲನೆ ನೀಡಿದ್ದಾರೆ. ಈ ಪವಿತ್ರ ಮಾಸದಲ್ಲಿ 30 ದಿನವೂ ರಾತ್ರಿ ವೇಳೆ ಮಸೀದಿಗಳಲ್ಲಿ ನಡೆಯುವ ವಿಶೇಷ ಪ್ರಾರ್ಥನೆ ಸಂದರ್ಭ ಕುರಾನ್ ಪಠಣ ನಡೆಯಲಿದೆ.

ಬೀಡುಬಿಟ್ಟ ಹಫೀಜ್ಗಳು
ಈ ಹಫೀಜ್ಗಳು ದೇಶದ ವಿವಿಧೆಡೆಯ ಮದರಸಾಗಳಲ್ಲಿ ಕುರಾನ್ ಧರ್ಮಗ್ರಂಥದ ಕುರಿತು ಆಳ ಅಧ್ಯಯನ ನಡೆಸಿದವರು. ಅಲ್ಲಾಹುನ ಸಂದೇಶಗಳನ್ನು ಬಾಯಿ ಪಾಠ ಮಾಡಿದವರು. ಈಗಾಗಲೇ ಯಾವ್ಯಾವ ಮಸೀದಿ ಎಂಬುದನ್ನು ನಿಗದಿಪಡಿಸಿಕೊಂಡು ಬೀಡು ಬಿಟ್ಟಿದ್ದಾರೆ.

ಅಧಿಕ ಲಾಭ ನೀಡುವ ಮಾಸ
ರಂಜಾನ್ ಮಾಸಾಚರಣೆಗೆ ಚಾಲನೆ ದೊರಕುತ್ತಿದ್ದಂತೆ, ವ್ಯಾಪಾರಿಗಳು ಸಹ ಭರ್ಜರಿ ವ್ಯಾಪಾರ ನಡೆಸಲು ಮಸೀದಿಗಳ ಸುತ್ತಲೂ ಆಯಕಟ್ಟಿನ ಜಾಗ ಹಿಡಿದಿದ್ದಾರೆ. ರೋಜಾ ಮುಗಿದ ನಂತರ ಮಸೀದಿಗಳಲ್ಲಿ ನಡೆಯುವ ಸಾಮೂಹಿಕ ಇಫ್ತಾರ್ನಲ್ಲಿ ಹಣ್ಣು, ಖರ್ಜೂರ ಸೇರಿದಂತೆ ಒಣ ಹಣ್ಣುಗಳನ್ನು ತಿನ್ನುವ ಮೂಲಕ ಉಪವಾಸ ಬಿಡುವವರೇ ಹೆಚ್ಚು. 30 ದಿನ ಭರ್ಜರಿ ವಹಿವಾಟು ನಡೆಯಲಿದೆ. ಇಡೀ ದಿನ ನಡೆಯುವ ವಹಿವಾಟು ಒಂದು ತಾಸಿನಲ್ಲಿ ನಡೆಯುತ್ತದೆ. "ನಮ್ಮ ಪಾಲಿಗೆ ರಂಜಾನ್ ಅಧಿಕ ಲಾಭ ನೀಡುವ ಮಾಸ" ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಆಸೀಫ್ ಬಾಗವಾನ.

ಖರ್ಜೂರದ ಮಾರಾಟ ಜೋರು
ಇದರೊಟ್ಟಿಗೆ ಉಪವಾಸ ಹಿನ್ನೆಲೆಯಲ್ಲಿ ಬಗೆಬಗೆಯ ಖರ್ಜೂರದ ಮಾರಾಟ ಜೋರಾಗಿದೆ. ಮುಸ್ಲಿಂ ಸಮುದಾಯದವರು ಸೋಮವಾರ ಮೀನಾ ಬಜಾರ್, ಮಂಡಿ ಮೊಹಲ್ಲಾ, ದೇವರಾಜ ಅರಸು ರಸ್ತೆಯ ಅಂಗಡಿಗಳಲ್ಲಿ ಒಣ ಹಣ್ಣು, ಹಣ್ಣು ಹಾಗೂ ಸಿಹಿ ತಿಂಡಿ ಖರೀದಿ ಭರಾಟೆಯಲ್ಲಿ ತೊಡಗಿದ್ದರು. ಮಾರುಕಟ್ಟೆಯಲ್ಲಿ ಖರ್ಜೂರದ ರಾಶಿ ಕಂಡು ಬರುತ್ತಿದೆ. ಕುಂಬಳಕಾಯಿ ಪೇಡ, ಒಣ ಹಣ್ಣು, ಪಾನೀಯ, ಬಾದಾಮ್ ಹಾಲು ಮತ್ತು ಫಲುದಾವನ್ನು ವಿಶೇಷ ತಿನಿಸುಗಳಾಗಿ ಬಳಸುತ್ತಾರೆ.












Click it and Unblock the Notifications