ವರುಣನ ಆರ್ಭಟಕ್ಕೆ ತತ್ತರಿಸಿದ ಸಾಂಸ್ಕೃತಿಕ ನಗರಿ ಮೈಸೂರು
Recommended Video
ಮೈಸೂರು, ಜೂನ್ 4 : ಮೈಸೂರಿನ ರಸ್ತೆಗಳ ಮೇಲೆ ಎತ್ತ ನೋಡಿದರತ್ತ ನೀರು..ನೀರು..ನೀರು. ರಸ್ತೆ ಯಾವುದು, ಫುಟ್ಪಾತ್ ಯಾವುದು, ಎಲ್ಲಿ ಹಳ್ಳ ಇದೆ, ಎಲ್ಲಿ ಮ್ಯಾನ್ ಹೋಲ್ ಬಾಯಿ ತೆರೆದಿರಬಹುದು ಎಂಬುದಾವುದೂ ಅರಿವಿಗೆ ಬಾರದಂತಹ ಸ್ಥಿತಿಯಲ್ಲಿ ಕುರುಡು ಕುರುಡಾಗಿ ವಾಹನ ಚಲಾಯಿಸುವಂತೆ ಮಾಡಿದ, ಎತ್ತ ಕಾಲು ಹಾಕಿದರೆ ಏನಾದೀತೊ ಎಂದು ಪಾದಚಾರಿಗಳು ಭಯಪಡುವಂತೆ ಮಾಡಿ ಬಿಟ್ಟಿದೆ ಈ ಭಾರಿ ಮಳೆ.
ಕಳೆದ 15 ದಿನಗಳಿಂದ ಪೂರ್ವ ಮುಂಗಾರಿನಲ್ಲಿ ಮಿಂದಿದ್ದ ಸಾಂಸ್ಕೃತಿಕ ನಗರಿ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡು ಅಕ್ಷರಶಃ ಮಡಿಕೇರಿ ಮಳೆಯ ವಾತಾವರಣವನ್ನು ನಿರ್ಮಿಸಿತ್ತು. ತಗ್ಗು ಪದೇಶಗಳು ಜಲಾವೃತಗೊಂಡು ಸಾರ್ವಜನಿಕರು ಪರದಾಡುವಂತಾಯಿತು. ಹಲವು ಮನೆ, ಅಂಗಡಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ರಸ್ತೆಗಳಲ್ಲಿ ಮಳೆ ನೀರು ಕೆರೆಯಂತೆ ನಿಂತು ವಾಹನಗಳು ತೇಲಾಡಿದವು , ದ್ವಿಚಕವಾಹನ ಸವಾರರಂತು ನೀರಿನಲ್ಲಿ ಸಿಲುಕಿ ತಮ್ಮ ವಾಹನವನ್ನು ರಸ್ತೆಯಲ್ಲಿಯೇ ಬಿಟ್ಟು ರಕ್ಷಣೆಗಾಗಿ ಸಮೀಪದಲ್ಲಿದ್ದ ಕಟ್ಟಡಗಳತ್ತ ತೆರಳಿದರು. ಅದೃಷ್ಠವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ರಾಜ್ಯದೆಲ್ಲಡೆ ಮುಂಗಾರು ಆರಂಭ: ಜೂ.6ರಿಂದ ಮತ್ತಷ್ಟು ಚುರುಕು
ಪೂರ್ವ ಮುಂಗಾರಿನಲ್ಲಿ ತುಂತುರು ಮಳೆಯಿಂದ ಆರಂಭವಾಗಿ ಅರ್ಧಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಜೋರಾದ ಮಳೆ ಸುರಿದು ನಿಲ್ಲುತ್ತಿತ್ತು. ಆದರೆ ಇಂದು ಮಧ್ಯಾಹ್ನ 2.45ರ ಸಮಯಕ್ಕೆ ಬಿರುಗಾಳಿ ಸಹಿತ ಜೋರಾಗಿ ಆರಂಭವಾದ ಮಳೆ ಇಳೆಗೆ ತಂಪು ಎರೆದು ಮುಂಗಾರಿನ ಆಗಮನಕ್ಕೆ ನಾಂದಿ ಹಾಡಿತು.
ನೀರಲ್ಲಿ ತೇಲಿದ ದ್ವಿಚಕ್ರವಾಹನ
ನಗರದ ಅಗ್ರಹಾರ ವೃತ್ತದ ತ್ಯಾಗರಾಜ ರಸ್ತೆ ಜಲಾವೃತವಾಗಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಬೈಕ್ಗಳು ನೀರಿನಲ್ಲಿ ತೇಲುತ್ತಿದ್ದ ದೃಶ್ಯ ನೋಡುತ್ತಿದ್ದ ಬೈಕ್ ಸವಾರರು ಮಳೆಯನ್ನು ಲೆಕ್ಕಿಸದೇ ಅವುಗಳನ್ನು ಹಿಡಿಯಲು ಸಾಹಸಪಟ್ಟರು. ಎಂ.ಜಿ.ರಸ್ತೆಯ ಗಾಳಿ ಆಂಜನೇಯ ದೇವಸ್ಥಾನ ಮುಂಭಾಗದ ವೃತ್ತದ ರಸ್ತೆಯಲ್ಲಿ ಮೂರು ಅಡಿಗೂ ಹೆಚ್ಚು ಎತ್ತರ ಮಳೆ ನೀರು ನಿಂತಿದ್ದರಿಂದ ಬೈಕ್ ಸವಾರರು ವಾಹನ ಸವಾರಿ ಮಾಡಲು ಸಾಧ್ಯವಾಗದೆ ತಳ್ಳಿಕೊಂಡು ಹೋಗುತ್ತಿದ್ದ ದೃಶ್ಯಗಳು ಕಾಣುತ್ತಿತ್ತು.
ಮಧ್ಯಾಹ್ನವೇ ಕತ್ತಲಾದ ಅನುಭವ
ಅಲ್ಲದೇ ಸಾರಿಗೆ ಹಾಗೂ ಶಾಲಾ ಬಸ್, ಕಾರು, ಆಟೋ ಚಾಲಕರು ರಸ್ತೆಗಳಲ್ಲಿ ಹಳ್ಳಕೊಳ್ಳ ಗಳಿಂದ ಯಾವುದೇ ಅಪಾಯ ಎದುರಾಗದಂತೆ ನಿಧಾನವಾಗಿ ವಾಹನ ಚಲಾಯಿಸಿದರು. ಕೆಲವು ಕಡೆ ಮನೆಗಳಿಗೆ ಮಳೆ ನೀರು ನುಗ್ಗಿ ಆತಂಕ ಸೃಷ್ಟಿ ಮಾಡಿತು. ಹಲವು ತಗ್ಗು ಪದೇಶಗಳಲ್ಲಿ ರಸ್ತೆಯ ಮೂಲಕ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ನೀರು ತೆಗೆದು ಹಾಕಲು ಸಾಕಷ್ಟು ಹರಸಾಹಸ ಪಟ್ಟರು. ಇನ್ನು ಮಧ್ಯಾಹ್ನ 4 ಗಂಟೆಯಾದರೂ ಸಂಜೆ ವೇಳೆಯಲ್ಲಿಯೇ ಕಗ್ಗತ್ತಲು ಕವಿದ ವಾತಾವರಣವನ್ನು ಮಳೆ ನಿರ್ಮಿಸಿತು.
ಕೊಡಗಿನಲ್ಲಿ ಭರ್ಜರಿ ಮಳೆ, ಮಂಡ್ಯದ ಕೆಆರ್ ಎಸ್ ನಲ್ಲಿ ಹೆಚ್ಚಿದ ನೀರು
ಹುಣಸೂರಿನಲ್ಲೂ ಜೋರು ಮಳೆಯ ಆರ್ಭಟ
ಜೋರು ಮಳೆಗೆ ಹುಣಸೂರು, ಎಚ್.ಡಿ.ಕೋಟೆ ಭಾಗಗಳ ರೈತರು ಬೆಳೆ ಕಳೆದುಕೊಳ್ಳುವ ಆತಂಕದಲ್ಲಿರುವುದು ಒಂದೆಡೆಯಾದರೆ ಹಲವೆಡೆ ಮನೆಗಳು, ಅಂಗಡಿ- ಮುಂಗಟ್ಟುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ತಾಲ್ಲೂಕಿನ ವಿವಿಧೆಡೆ ಸುರಿದ ಭಾರೀ ಮಳೆಯಿಂದಾಗಿ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಜಲಾವೃತವಾಗಿದ್ದು, ಕೆಲವೆಡೆ ಕೊಚ್ಚಿ ಹೋಗಿದೆ. ಇನ್ನು ಹತ್ತಕ್ಕೂ ಹೆಚ್ಚು ಕೆರೆಗಳು ಬಹುತೇಕ ಭರ್ತಿಯಾಗಿವೆ. ತಾಲ್ಲೂಕಿನ ಹಿಂಡಗುಡ್ಲು, ದಾಸನಪುರ, ಕಿರಂಗೂರು, ದೊಡ್ಡಹೆಜ್ಜೂರು, ಭಾರತವಾಡಿ, ಮಾದಹಳ್ಳಿ, ಹರಳಹಳ್ಳಿ, ಮತ್ತಿತರ ಗ್ರಾಮಗಳಲ್ಲಿ ಸುರಿದ ಭಾರೀ ಮಳೆಗೆ ಸಾಕಷ್ಟು ಹಾನಿ ಸಂಭವಿಸಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಮುಸುಕಿನ ಜೋಳ, ತಂಬಾಕು, ಶುಂಠಿ, ಮೆಣಸಿನ ಕಾಯಿ, ಬಾಳೆ ಬೆಳೆ ಸೇರಿದಂತೆ ಇತರೆ ಬೆಳೆಗಳು ಕೊಚ್ಚಿ ಹೋಗಿವೆ. ಕೆಲವು ಜಮೀನಿನಲ್ಲಿ ಸಾಕಷ್ಟು ನೀರು ನಿಂತು ಬೆಳೆ ಹಾನಿ ಸಂಭವಿಸಿದೆ.
ಹಿಡಿ ಶಾಪ ಹಾಕಿದ ರೈತರು
ತಾಲ್ಲೂಕಿನ ಗಡಿ ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅನೇಕ ಮನೆಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ಹಾನಿಯಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಎನ್.ಬೇಗೂರು ಮತ್ತು ಬಿದರಹಳ್ಳಿ ಗ್ರಾಪಂ ವ್ಯಾಪ್ತಿಯ ಸುಮಾರು ಮೂವತ್ತು ಗ್ರಾಮಗಳ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಗೆ ಮೂರು ಬಾಂದ್ ಮತ್ತು ಕನಕನ ತಿಟ್ಟು ಗ್ರಾಮದಲ್ಲಿನ ಜಮೀಲ್, ಪಾಷ, ಷರೀಫ್, ಮಾರಪ್ಪ, ಸೈಯದ್ ಎಂಬವರಿಗೆ ಸೇರಿದ ಮನೆಗಳು, ಅಂಗಡಿ ಹಾಗೂ ಅಂಗನವಾಡಿ ಕೇಂದ್ರಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ನಂಜನಗೂಡಲ್ಲೂ ಮಳೆ ಜೋರು
ಕಳೆದೆರಡು ದಿನದ ಧಾರಾಕಾರ ಮಳೆಗೆ ನಗರದ ಸಂಚಾರ ಅಸ್ತವ್ಯಸ್ತವಾಗಿ ಜನ ಪರದಾಡುವಂತಾಯಿತು. ಇತ್ತೀಚೆಗೆ ಕಾಯಕಲ್ಪಗೊಂಡ ನಗರದ ಮಹಾತ್ಮಗಾಂಧಿ ರಸ್ತೆಯ ಅಲ್ಲಲ್ಲಿ ನೀರು ನಿಂತು ಕಾಮಗಾರಿಯ ಗುಣಮಟ್ಟಕ್ಕೆ ಕನ್ನಡಿ ಹಿಡಿದರೆ, ಬೇಕಾಬಿಟ್ಟಿಯಾಗಿ ಅಗೆದಿರುವ ರಾಷ್ಟ್ರಪತಿ ರಸ್ತೆಯ ಅವಸ್ಥೆಯಂತೂ ಹೇಳತೀರದ್ದಾಗಿತ್ತು. ರಥಬೀದಿಯಲ್ಲಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ಜನರು ಫಜೀತಿ ಅನುಭವಿಸಿದರು. ಜಿಟಿಜಿಟಿ ಮಳೆ ನಗರವನ್ನು ರಾಡಿ ಮಾಡಿಟ್ಟು ಅವಾಂತರ ಸೃಷ್ಟಿಸಿತು.