ಮೈಸೂರಿನಲ್ಲಿ ದಸರಾ ಸಿದ್ಧತೆಗೆ ಅಡ್ಡಿಯಾದ ಮಳೆ
ಮೈಸೂರು, ಅಕ್ಟೋಬರ್ 8: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಆಚರಣೆಗೆ ಸಿದ್ಧತೆ ನಡೆಯುತ್ತಿದ್ದು, ಸುರಿಯುತ್ತಿರುವ ಮಳೆಯಿಂದಾಗಿ ಸಿದ್ಧತೆಗೆ ಅಡಚಣೆ ಉಂಟಾಗಿದೆ.
ಕಳೆದ ಐದು ದಿನಗಳಿಂದಲೂ ಎಡಬಿಡದೆ ಮೈಸೂರಿನಲ್ಲಿ ಮಳೆಯಾಗುತ್ತಿದೆ. ಮಳೆಯಿಂದಾಗಿ ನಗರದ ಜನಜೀವನ ಅಸ್ತವ್ಯಸ್ತವಾಗಿದೆ. ಈ ವರ್ಷ ಸರಳ ಹಾಗೂ ಸಾಂಪ್ರದಾಯಿಕ ದಸರಾ ನಡೆಸಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ, ಈಗಾಗಲೇ ಜಂಬೂಸವಾರಿಗಾಗಿ ಆನೆಗಳ ತಾಲೀಮೂ ಆರಂಭಗೊಂಡಿದೆ. ಆದರೆ ಮಳೆಯ ಅಬ್ಬರ ಜೋರಾದ ಹಿನ್ನೆಲೆಯಲ್ಲಿ ಕೆಲವು ಕಾಮಗಾರಿಗಳು ಸ್ಥಗಿತಗೊಂಡಿವೆ. ದಸರಾ ಉತ್ಸವದ ಸಿದ್ಧತೆಯಲ್ಲಿ ಗುಂಡಿ ಬಿದ್ದ ರಸ್ತೆಗಳಿಗೆ ಮಣ್ಣು ಹಾಕಲಾಗಿದ್ದು, ವರುಣನ ಅಬ್ಬರಕ್ಕೆ ಮಣ್ಣು ಕೊಚ್ಚಿಕೊಂಡು ಹೋಗಿದೆ.
ಮುಂದಿನ 24 ಗಂಟೆಯಲ್ಲಿ ಕರ್ನಾಟಕದ ಹಲವೆಡೆ ಭಾರಿ ಮಳೆ
ದಸರಾ ಹಬ್ಬದ ಪ್ರಮುಖ ಆಕರ್ಷಣೆಯಾಗಿರುವ ದೀಪಾಲಂಕಾರ ಕಾರ್ಯಕ್ಕೂ ಮಳೆಯಿಂದಾಗಿ ತೊಡಕು ಉಂಟಾಗಿದೆ. ಉತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಸಿದ್ಧತಾ ಕಾರ್ಯವನ್ನು ಬಹುಬೇಗ ಪೂರೈಸಲೇಬೇಕಿದೆ. ಈ ನಡುವೆ ಮಳೆ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿದೆ.
ಇದಲ್ಲದೆ ಮುಂದಿನ ಮೂರು ದಿನ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ನೀಡಿದೆ. ಹೀಗಾಗಿ ಅಕ್ಟೋಬರ್ 11 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.