ಜೆಡಿಎಸ್ ಬಿಟ್ಟೆ ಎಂದು ಏನೂ ಬದಲಾಗಲ್ಲ; ಬಿಜೆಪಿ ನನ್ನ ಶಕ್ತಿ ಹೆಚ್ಚಿಸಿದೆ ಎಂದ ಪುಟ್ಟಣ್ಣ
ಮೈಸೂರು, ನವೆಂಬರ್ 26: "ನಾನು ಶೀಘ್ರದಲ್ಲೇ ಬಿಜೆಪಿ ಸೇರುತ್ತೇನೆ. ಟಿಕೇಟ್ ಘೋಷಣೆ ಮಾಡಿದ್ದು ಸಂತೋಷ ತಂದಿದೆ" ಎಂದು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನನಗೆ ಈ ಚುನಾವಣೆಯಲ್ಲಿ ಯಾವುದೇ ಫೈಟ್ ಇರಲ್ಲ. ನಾನು ವೈಯಕ್ತಿಕ ವರ್ಚಸ್ಸಿನಿಂದ ಮೂರು ಬಾರಿ ಗೆದ್ದಿದ್ದೇನೆ. ಜೆಡಿಎಸ್ ಬಿಟ್ಟ ಮಾತ್ರಕ್ಕೆ ಈ ಚುನಾವಣೆಯಲ್ಲಿ ಬೇರೆ ಪರಿಣಾಮ ಉಂಟಾಗಲ್ಲ. ಬಿಜೆಪಿ ಅಭ್ಯರ್ಥಿ ಆಗಿರೋದರಿಂದ ನನ್ನ ಶಕ್ತಿ ಹೆಚ್ಚಿದೆ. ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಯಾಗುತ್ತೇನೆ" ಎಂದು ತಿಳಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಗೆ ಪುಟ್ಟಣ್ಣ ಬಿಜೆಪಿ ಅಭ್ಯರ್ಥಿ: ಯಡಿಯೂರಪ್ಪ
ಉಪಚುನಾವಣೆ ಫಲಿತಾಂಶದ ನಂತರ ಜೆಡಿಎಸ್ ನ ಇನ್ನೂ ಕೆಲವರು ಬಿಜೆಪಿಗೆ ಬರಬಹುದು. ಬರುತ್ತೇವೆ ಎಂದು ಹಿಂದೆ ಕೆಲವರು ಹೇಳಿದ್ದರು. ಚುನಾವಣೆ ಫಲಿತಾಂಶದ ನಂತರ ಅವರು ನಿರ್ಧಾರ ಕೈಗೊಳ್ಳುತ್ತಾರೆ ಎಂದರಲ್ಲದೇ ಉಪಚುನಾವಣೆ ಫಲಿತಾಂಶದ ನಂತರ ವಲಸೆ ಶುರು ಎಂಬ ಸೂಚನೆ ನೀಡಿದರು.
ಇಂದು ಮೈಸೂರಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, "ಪುಟ್ಟಣ್ಣ ಅವರು ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಮೂರು ಬಾರಿ ಜೆಡಿಎಸ್ನಿಂದ ಪ್ರತಿನಿಧಿಸಿದ್ದರು. ಅವರು ಗೆಲ್ಲುವ ಅಭ್ಯರ್ಥಿ ಈ ಬಾರಿ ಬಿಜೆಪಿಯಿಂದ ಪ್ರತಿನಿಧಿಸಲಿದ್ದಾರೆ ಎಂದು ತಿಳಿಸಿದ್ದರು. ಈ ಹೇಳಿಕೆ ಬೆನ್ನಲ್ಲೇ ಪುಟ್ಟಣ್ಣ ಸಂತಸದಿಂದ ಬಿಜೆಪಿ ಸೇರುವುದಾಗಿ ಹೇಳಿಕೊಂಡಿದ್ದಾರೆ.