ಕಾಳಸಂತೆಯಲ್ಲಿ ಮಾರಾಟವಾಯ್ತಾ ಮೈಸೂರು ದಸರಾ ಟಿಕೆಟ್?
ಮೈಸೂರು, ಅಕ್ಟೋಬರ್. 17 : ವೈಭವದ ಜಂಬೂ ಸವಾರಿಗೆ ಕೇವಲ 48 ಗಂಟೆಗಳಷ್ಟೇ ಬಾಕಿಯಿದ್ದು, ಇನ್ನು ಜಿಲ್ಲಾಡಳಿತದ ವತಿಯಿಂದ ಪಾಸ್ ವಿತರಿಸುವ ಗೊಂದಲಕ್ಕೆ ತೆರೆ ಎಳೆದಿಲ್ಲ.
ಅ. 19ರಂದು ಜಂಬೂ ಸವಾರಿ ಹಾಗೂ ಪಂಜಿನ ಕವಾಯಿತು ಕಾರ್ಯಕ್ರಮಗಳ ಟಿಕೆಟ್ ಆನ್ ಲೈನ್ ಲ್ಲಿ ಸೋಲ್ಡ್ ಔಟ್ ಆಗಿರುವುದರಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಟಿಕೆಟ್ ಪಡೆದುಕೊಳ್ಳಲು ಸಾರ್ವಜನಿಕರು ಕಾದುಕುಳಿತರು. ಆದರೆ ಇಲ್ಲಿಯೂ ಟಿಕೇಟ್ ಸಿಗದೆ ಇದ್ದುದ್ದರಿಂದ ಕುಪಿತಗೊಂಡು ಪ್ರತಿಭಟನೆಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಂಬೂಸವಾರಿ ವೀಕ್ಷಣೆಗೆ 1000, 500 ರೂ. ಹಾಗೂ ಬನ್ನಿಮಂಟಪದಲ್ಲಿ ನಡೆಯಲಿರುವ ಪಂಜಿನ ಕವಾಯಿತು ಕಾರ್ಯಕ್ರಮ ವೀಕ್ಷಣೆಗೆ 500, 250ರೂ. ಟಿಕೆಟ್ ದರವನ್ನು ನಿಗದಿ ಮಾಡಲಾಗಿದೆ. ಆದರೆ ಎರಡು ದಿನ ಇರುವಾಗಲೇ ಆನ್ಲೈನ್ ಹಾಗೂ ಟಿಕೆಟ್ ಕೌಂಟರ್ಗಳಲ್ಲಿ ಟಿಕೆಟ್ ಸೋಲ್ಡ್ ಆಗಿದೆ ಎಂದು ಬೋರ್ಡ್ ಹಾಕಲಾಗಿದೆ.

ಇಂದು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸಾರ್ವಜನಿಕರು ಬೆಳಗ್ಗೆಯಿಂದ ಟಿಕೆಟ್ಗಾಗಿ ಕಾದಿದ್ದಾರೆ. ಆದರೆ 10.30 ಕ್ಕೆ ಕಚೇರಿಗೆ ಆಗಮಿಸಿದ ಸಿಬ್ಬಂದಿ ಟಿಕೆಟ್ ಖಾಲಿಯಾಗಿವೆ ಎಂದು ಹೇಳುತ್ತಿದ್ದಂತೆ ರೊಚ್ಚಿಗೆದ್ದ ಸಾರ್ವಜನಿಕರು ಟಿಕೆಟ್ ನೀಡುವಂತೆ ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆಯಿಂದ ಸಿಟ್ಟಿಗೆದ್ದ ಸಾರ್ವಜನಿಕರು ಟಿಕೆಟ್ ಕಾಳಸಂತೆಯಲ್ಲಿ ಮಾರಾಟವಾಗಿದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ಪರಿಸ್ಥಿತಿ ಕೈಮೀರುವುದನ್ನು ಅರಿತ ಜಿಲ್ಲಾಡಳಿತದ ಸಿಬ್ಬಂದಿ ಕೇವಲ ಸಾವಿರ ಟಿಕೆಟ್ ಗಳು ಮಾತ್ರ ಉಳಿದಿವೆ ಎಂದು ಸಬೂಬು ಹೇಳಿದ್ದಾರೆ. ಇದೇ ವೇಳೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಟಿಕೆಟ್ ಮಾರಾಟಕ್ಕೆ ಮುಂದಾಗಿದ್ದಾರೆ.












Click it and Unblock the Notifications