ಅರಣ್ಯ ರಕ್ಷಕರಿಗೆ ಬುಲೆಟ್ ಪ್ರೂಫ್ ಜಾಕೆಟ್, ಆಯುಧ ನೀಡಲು ಸುಪ್ರೀಂ ಕೋರ್ಟ್ ಸೂಚನೆ
ನವದೆಹಲಿ, ಜನವರಿ 9: ವಿಶ್ವದಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿಯೇ ಅತ್ಯಂತ ಹೆಚ್ಚು ಅರಣ್ಯ ಇಲಾಖೆಯ ಅಧಿಕಾರಿಗಳು ಕರ್ತವ್ಯದಲ್ಲಿರುವಾಗ ಹತ್ಯೆಗೀಡಾಗುತ್ತಿದ್ದಾರೆ ಎಂದು ಹೇಳಿದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರವು ಅರಣ್ಯ ಅಧಿಕಾರಿಗಳಿಗೆ ಗುಂಡು ನಿರೋಧಕ ಜಾಕೆಟ್ ಮತ್ತು ಸೂಕ್ತ ಶಸ್ತ್ರಾಸ್ತ್ರಗಳನ್ನು ಒದಗಿಸುವಂತೆ ಸೂಚಿಸಿದೆ.
ಶುಕ್ರವಾರ ವಿಚಾರಣೆಯೊಂದರ ಸಂಬಂಧ ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ ಎ. ಬೊಬ್ಡೆ ನೇತೃತ್ವದ ನ್ಯಾಯಪೀಠದ ಮುಂದೆ ಹಾಜರಾದ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು, ವಿಶ್ವದ ಅರಣ್ಯ ಇಲಾಖೆ ಸಿಬ್ಬಂದಿಗಳಲ್ಲಿ ಭಾರತದ ಅರಣ್ಯ ಸಿಬ್ಬಂದಿಗಳ ಸಾವು-ನೋವಿನ ಪಾಲು ಶೇ.30 ಇದೆ ಎಂದು ತಿಳಿಸಿದರು.
ಮೈಸೂರಿನ ಕೂರ್ಗಲ್ಲು ಗ್ರಾಮದಲ್ಲಿ ಸಿಕ್ತು ಶಿಲಾಯುಗದ ಕಲ್ಲಿನ ಕೊಡಲಿ!
ಆಗ ನ್ಯಾಯಮೂರ್ತಿ ಎಸ್.ಎ ಬೊಬ್ಡೆ ಅವರು, ಅರಣ್ಯ ಅಧಿಕಾರಿಗಳು ಅತ್ಯಂತ ಪ್ರಭಾವಿ ಶಕ್ತಿಗಳ ವಿರುದ್ಧ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರಲ್ಲದೆ, ಅರಣ್ಯ ಅಪರಾಧಗಳ ಮೌಲ್ಯ ಮಿಲಿಯನ್ ಗಳಲ್ಲಿದೆ. ಇದು ಅಂತರರಾಷ್ಟ್ರೀಯ ಅಪರಾಧ ಆಗಿದೆ. ಪ್ಯಾಂಗೊಲಿನ್ ಚರ್ಮದ ವ್ಯಾಪಾರವು ಚೀನಾಕ್ಕೆ ವಿಸ್ತರಿಸಿದೆ ಎಂದು ಇತ್ತೀಚೆಗೆ ನನಗೆ ತಿಳಿಸಲಾಯಿತು. ಏಕೆಂದರೆ ಪಾಂಗೋಲಿನ್ ಚರ್ಮವು ಕೆಲವು ವಿಷಯಗಳಿಗೆ ಒಳ್ಳೆಯದು ಎಂದು ಜನರು ನಂಬುತ್ತಾರೆ ಎಂದು ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಹೇಳಿದರು. ಅಲ್ಲದೆ ಅರಣ್ಯ ಸಿಬ್ಬಂದಿಗೆ ಸಹಾಯ ಮಾಡಲು ಸಿಬಿಐನಂತಹ ಪ್ರಮುಖ ಸಂಸ್ಥೆಗಳನ್ನು ಬಳಸಿಕೊಳ್ಳಲು ಕೇಂದ್ರವು ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಪ್ರತ್ಯೇಕ ವಿಭಾಗವು ಅವಶ್ಯಕ ಎಂದ ಮುಖ್ಯ ನ್ಯಾಯಮೂರ್ತಿ
"ಕಳ್ಳ ಬೇಟೆಗಾರರ ಅಪರಾಧಗಳು ಮತ್ತು ಅವರ ಅಪರಾಧಗಳ ಆದಾಯಗಳನ್ನು ಪತ್ತೆಹಚ್ಚಲು ಮತ್ತು ತನಿಖೆ ಮಾಡಲು ಪ್ರಾಮಾಣಿಕ ಅಧಿಕಾರಿಗಳೊಂದಿಗೆ ಜಾರಿ ನಿರ್ದೇಶನಾಲಯದಲ್ಲಿ ಪ್ರತ್ಯೇಕ ವಿಭಾಗ ಅಥವಾ ವನ್ಯಜೀವಿ ವಿಭಾಗ ಇರಬೇಕು. ಅರಣ್ಯ ಅಪರಾಧಗಳಲ್ಲಿ ಒಳಗೊಂಡಿರುವ ಮೊತ್ತವು ದೊಡ್ಡದಾಗಿರುವುದರಿಂದ ಪ್ರತ್ಯೇಕ ವಿಭಾಗವು ಅವಶ್ಯಕ ಎಂದು ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಅವರು ಕೇಂದ್ರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಉದ್ದೇಶಿಸಿ ಮಾತನಾಡಿದರು.
ಮಹಾರಾಷ್ಟ್ರದ ಅರಣ್ಯ ಅಧಿಕಾರಿಗಳು ಏಕೆ ಶಸ್ತ್ರಸಜ್ಜಿತರಾಗಿಲ್ಲ
ಅಲ್ಲದೆ ಬೊಬ್ಡೆ ಅವರು ಅಸ್ಸಾಂನ ಅರಣ್ಯ ರೇಂಜರ್ಗಳು ಶಸ್ತ್ರಸಜ್ಜಿತರಾಗಿದ್ದು, ಯಾರೂ ಅವರ ಹತ್ತಿರ ಬರುವ ಧೈರ್ಯ ಮಾಡುವುದಿಲ್ಲ ಎಂದೂ ಹೇಳಿದರು. ಆದರೆ ಮಧ್ಯಪ್ರದೇಶದಂತಹ ರಾಜ್ಯದಲ್ಲಿ ಅವರು ಲಾಠಿಗಳನ್ನು ಹೊಂದಿರುತ್ತಾರೆ. ಕರ್ನಾಟಕದಲ್ಲಿ ಅರಣ್ಯ ವಾಚರ್ಗಳು ಚಪ್ಪಲಿ ಧರಿಸಿದ್ದು, ಕೇವಲ ಲಾಠಿಗಳನ್ನು ಹೊಂದಿದ್ದಾರೆ ಎಂದೂ ಬೊಬ್ಡೆ ಉಲ್ಲೇಖಿಸಿದರು. ಅವರು ವಕೀಲ ರಾಹುಲ್ ಚಿಟ್ನಿಸ್ ಅವರನ್ನು ಮಹಾರಾಷ್ಟ್ರದ ಅರಣ್ಯ ಅಧಿಕಾರಿಗಳು ಏಕೆ ಶಸ್ತ್ರಸಜ್ಜಿತರಾಗಿಲ್ಲ ಎಂದು ಕೇಳಿದರು.
ಈ ಅಸಮಾನ ಪರಿಸ್ಥಿತಿ ಏಕೆ ಇದೆ?
ರಾಜ್ಯದಿಂದ ರಾಜ್ಯಕ್ಕೆ ಅರಣ್ಯ ಅಧಿಕಾರಿಗಳಲ್ಲಿ ಈ ಅಸಮಾನ ಪರಿಸ್ಥಿತಿ ಏಕೆ ಇದೆ? ನಗರಗಳಲ್ಲಿನ ಪೊಲೀಸ್ ಅಧಿಕಾರಿಗಳಿಗಿಂತ ಅರಣ್ಯ ಅಧಿಕಾರಿಗಳಿಗೆ ದೊಡ್ಡ ಜವಾಬ್ದಾರಿಗಳಿವೆ. ಅವರು ಜನವಸತಿಯಿಲ್ಲದ ಕಾಡುಗಳ ದೊಡ್ಡ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಾರೆ. ಅರಣ್ಯ ಸಿಬ್ಬಂದಿಯೊಬ್ಬರು ತಮ್ಮ ಕರ್ತವ್ಯದಲ್ಲಿ ಏಕಾಂಗಿಯಾಗಿರುತ್ತಾರೆ. ನಗರದ ಪೊಲೀಸ್ ಅಧಿಕಾರಿಯು ನೆರವಿಗಾಗಿ ಕೂಡಲೇ ಕರೆ ಮಾಡಬಹುದು ಎಂದು ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಹೇಳಿದರು.
ಅಮಿಕಸ್ ಕ್ಯೂರಿ ಎ.ಡಿ.ಎನ್ ರಾವ್ ಅವರು ಅರಣ್ಯ ಪಡೆಗಳನ್ನು ಶಸ್ತ್ರಸಜ್ಜಿತಗೊಳಿಸಲು ರಾಜ್ಯಗಳು ಹಣವನ್ನು ಬಳಸಿಕೊಂಡಿಲ್ಲ ಎಂದು ಹೇಳಿದರು. ಕಳ್ಳ ಬೇಟೆಗಾರರ ಹಿಂದೆ ಕಾರ್ಯನಿರ್ವಹಿಸುತ್ತಿರುವ ಬಲಶಾಲಿ ಜನರು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾಗ ಧೈರ್ಯದಿಂದ ಕ್ರಮ ಕೈಗೊಳ್ಳುವ ಅರಣ್ಯ ಅಧಿಕಾರಿಗಳಿಗೆ ಎದುರೇಟು ನೀಡುತ್ತಿದ್ದಾರೆ ಎಂದು ಶ್ಯಾಮ್ ದಿವಾನ್ ಅಭಿಪ್ರಾಯಪಟ್ಟರು.
ಕಳ್ಳ ಬೇಟೆಗಾರರು ದುಷ್ಕೃತ್ಯಗಳನ್ನು ಮಾಡುತ್ತಾರೆ
ನಿರ್ದಿಷ್ಟ ಶ್ರೇಣಿಯ ಮೇಲಿರುವ ಅರಣ್ಯ ಅಧಿಕಾರಿಗಳಿಗೆ ಸ್ವರಕ್ಷಣೆಗಾಗಿ ಬುಲೆಟ್ ಪ್ರೂಫ್ ಜಾಕೆಟ್, ಹೆಲ್ಮೆಟ್, ಶಸ್ತ್ರಾಸ್ತ್ರ ಮತ್ತು ವಾಹನಗಳನ್ನು ಒದಗಿಸಬೇಕಿದ್ದು, ಏಕೆಂದರೆ ಪರಿಸ್ಥಿತಿ ಗಂಭೀರವಾಗಿದೆ. ಅರಣ್ಯ ಪಡೆ ಸಿಬ್ಬಂದಿಗಳು ಅಸಹಾಯಕರಾಗಿದ್ದಾರೆ ಮತ್ತು ಅಪಾಯದಲ್ಲಿದ್ದಾರೆ. ಆದರೆ ಕಳ್ಳ ಬೇಟೆಗಾರರು ದುಷ್ಕೃತ್ಯಗಳನ್ನು ಮಾಡಿ ಲಾಭವನ್ನು ಪಡೆದುಕೊಳ್ಳುತ್ತಾರೆ. ಭಾರಿ ಶಸ್ತ್ರಸಜ್ಜಿತ ಕಳ್ಳ ಬೇಟೆಗಾರರ ವಿರುದ್ಧ ನಿರಾಯುಧರಾಗಿರುವ ಅರಣ್ಯ ಸಿಬ್ಬಂದಿಯು ಯಾವುದೇ ಕಾನೂನನ್ನು ಹೇಗೆ ಜಾರಿಗೊಳಿಸಬಹುದು ಎಂದು ಊಹಿಸಿಕೊಳ್ಳುವುದು ಕಷ್ಟ ಎಂದೂ SA ಬೊಬ್ಡೆ ತಿಳಿಸಿದರು.
ನ್ಯಾಯಾಲಯವು ಸಾಲಿಸಿಟರ್ ಜನರಲ್ ರಾವ್ ಮತ್ತು ಶ್ಯಾಮ್ ದಿವಾನ್ ಅವರನ್ನು ಅರಣ್ಯ ಸಿಬ್ಬಂದಿಯು ಭಯವಿಲ್ಲದೆ ತಮ್ಮ ಕರ್ತವ್ಯವನ್ನು ಹೇಗೆ ಮಾಡಬಹುದು ಎಂಬ ಕ್ರಮಗಳ ಬಗ್ಗೆ ಜಂಟಿ ವರದಿ ಸಲ್ಲಿಸುವಂತೆ ಸೂಚಿಸಿ ಪ್ರಕರಣವನ್ನು ನಾಲ್ಕು ವಾರಗಳ ಕಾಲ ಮುಂದೂಡಿತು.