ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಚಂಪಾ ಆಯ್ಕೆ: ಮೈಸೂರಲ್ಲಿ ಪ್ರತಿಭಟನೆ
ಮೈಸೂರು, ಅಕ್ಟೋಬರ್ 6 : ಮೈಸೂರಿನಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಚಂದ್ರಶೇಖರ ಪಾಟೀಲ್ ರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿರುವುದನ್ನು ಖಂಡಿಸಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನ್ಯಾಯಾಲಯ ಮುಂಭಾಗದ ಗಾಂಧಿ ಪ್ರತಿಮೆಯ ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರು ವಿವಿಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಜಿಲ್ಲಾ ಬ್ರಾಹ್ಮಣ ಯುವವೇದಿಕೆ ಉಪಾಧ್ಯಕ್ಷ ಹೆಚ್.ಎನ್ ಶ್ರೀಧರಮೂರ್ತಿ ಮಾತನಾಡಿ, ದೇಶದಲ್ಲಿ ಅಸಹಿಷ್ಣುತೆಗೆ ಬ್ರಾಹ್ಮಣರೇ ಕಾರಣರು, ಬ್ರಾಹ್ಮಣರು ಭಾರತದ ಮೂಲನಿವಾಸಿಗಳಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಚಂಪಾ ವಿದ್ಯಾವಂತರೇ ಎಂಬುದು ಪ್ರಶ್ನೆಯಾಗಿದೆ.

ಚಂಪಾ ಮಾತನಾಡುವ ವೇಳೆ ನೈತಿಕ ಪೊಲೀಸ್ ಗಿರಿ ಮತ್ತು ಆಕ್ರಮಣಗಳಿಗೆ ಮೂಲ ಕಾರಣಕರ್ತರು ಬ್ರಾಹ್ಮಣರು. ಪುರೋಹಿತ ಶಾಹಿಗಳು ಕಮಿಷನ್ ಏಜೆಂಟ್ಗಳು ಎನ್ನುವ ಮೂಲಕ ಹಿಂದೂ ಸನಾತನ ಧರ್ಮಕ್ಕೆ ನೋವುಂಟಾಗಿದೆ. ಚಂಪಾ ಹೇಳಿಕೆಗಳು ಸಮಾಜಕ್ಕೆ ಯಾವ ಸಂದೇಶ ನೀಡುತ್ತವೆ ಎಂಬುದು ಸರ್ಕಾರ ಮತ್ತು ಗುಪ್ತಚರ ಇಲಾಖೆ ಅರಿಯಬೇಕು. ಮುಂದಿನ ದಿನಗಳಲ್ಲಿ ಶಾಂತಿಯುತ ಪಾರಂಪರಿಕ ಮೈಸೂರಿನಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಂಪಾ ಬಂದರೆ ಕೋಮುಗಲಭೆಗೆ ಕಾರಣರಾಗುತ್ತಾರೆ. ರಾಜ್ಯಸರ್ಕಾರ ಇವೆಲ್ಲವನ್ನು ಪರಿಗಣಿಸಿ ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಂಪಾ ಅವರನ್ನು ಅಧ್ಯಕರನ್ನಾಗಿ ಮಾಡಿರುವುದನ್ನು ಹಿಂಪಡೆದು ನಾಡಹಬ್ಬ ದಸರಾ ಮಹೋತ್ಸವಕ್ಕೆ ಉದ್ಘಾಟಕರಾಗಿ ನಿಸಾರ್ ಅಹಮದ್ ಅವರಂತಹ ಅತ್ಯುತ್ತಮ ಜಾತ್ಯಾತೀತ ಸಾಹಿತಿಗಳನ್ನು ಆಯ್ಕೆ ಮಾಡಿದ ಮಾದರಿಯಲ್ಲೇ ಮಾಡಬೇಕು. ಇಲ್ಲವಾದಲ್ಲಿ ಜನಸಾಮಾನ್ಯರ ಆಯ್ಕೆಗೆ ಬಿಡಬೇಕು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕನ್ನಡ ಸಾಹಿತ್ಯ ಸಮ್ಮೆಳನ ಆಯೋಜಿಸಬೇಕು. ಇಲ್ಲವಾದಲ್ಲಿ ರಾಜಾಳ್ವಿಕೆಯ ಆಸ್ಥಾನದ ಮಾದರಿಯಲ್ಲೆ ದೇಶದ ಉನ್ನತ ಶ್ರೇಣಿಯ ಪಂಡಿತರನ್ನು, ವಿದ್ವಾಂಸರನ್ನು ಕರೆಸಿ ಬ್ರಾಹ್ಮಣ ಸಮುದಾಯದಿಂದ ಪ್ರತ್ಯೇಕ ಕನ್ನಡ ಸಮ್ಮೇಳನವನ್ನು ಆಯೋಜಿಸಲು ಮುಂದಾಗುತ್ತೇವೆ ಎಂದು ಎಚ್ಚರಿಸಿದರು.
ಕಳಪೆ ಕಾಮಗಾರಿ ವಿರೋಧಿಸಿ ಬೀದಿಗಿಳಿದ ಬಿಜೆಪಿ ಮುಖಂಡರು
ಗುಣಮಟ್ಟದ ರಸ್ತೆ ಕಾಮಗಾರಿ ನಡೆಸದೇ ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ಆರೋಪಿಸಿ ಮಾಜಿ ಸಚಿವ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಜೆ.ಎಸ್.ಎಸ್.ಆಸ್ಪತ್ರೆಯಿಂದ ಸುಯೇಜ್ ಫಾರಂವರೆಗೆ ಪಾದಯಾತ್ರೆಯ ಮೂಲಕ ಪ್ರತಿಭಟನೆ ನಡೆಯಿತು.

ಶುಕ್ರವಾರ ಬೆಳಿಗ್ಗೆ ಮಾಜಿ ಸಚಿವ ಸ್.ಎ.ರಾಮದಾಸ್ ನೇತೃತ್ವದಲ್ಲಿ ಬಿಜೆಪಿ ಕೃಷ್ಣರಾಜ ಕ್ಷೇತ್ರ ಮೈಸೂರು ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಜೆ.ಎಸ್.ಎಸ್.ಆಸ್ಪತ್ರೆಯಿಂದ ಸುಯೇಜ್ ಫಾರಂವರೆಗೆ ಪಾದಯಾತ್ರೆಯ ಮೂಲಕ ಸಾಗಿದ ಪ್ರತಿಭಟನಾಕಾರರು ಭೂತಾಳ ಮೈದಾನದಲ್ಲಿ ಜಮಾಯಿಸಿ ಮಾತನಾಡಿ ರಸ್ತೆ ಕಾಮಗಾರಿ ಅತ್ಯಂತ ಕಳಪೆ ಮಟ್ಟದ್ದಾಗಿದೆ. ಈಗಾಗಲೇ ಕೆಲವು ಕಡೆ ಹೊಂಡ ಗುಂಡಿಗಳೆದ್ದಿವೆ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರವೇ ತಾಂಡವವಾಡುತ್ತಿದೆ. ಹಣ ಬಿಡುಗಡೆಯಾದ ರೀತಿಯಲ್ಲಿ ಕಾಮಗಾರಿ ನಡೆಸುತ್ತಿಲ್ಲ. ಗುಳುಂ ಮಾಡಿರುವುದೇ ಜಾಸ್ತಿ ಎಂದು ಆರೋಪಿಸಿದರು.












Click it and Unblock the Notifications