ರಾಜಕಾರಣಿಗಳ ಕೈ ದಾರ, ಪುರೋಹಿತರ ಯಾಗಕ್ಕೆ ಭಗವಾನ್ 'ಪಂಚ್'
ಮೈಸೂರು, ಜುಲೈ 26 : "ಅದ್ಯಾರು ಯಾಗ -ಹೋಮ ಪೂಜೆ ಅಂತಾ ಬಡ್ಕೊಳ್ಳೋರು ? ಜನರೂ ಅದರಲ್ಲೂ ರಾಜಕಾರಣಿಗಳು ಪೂಜೆ ಮಾಡಿ ಅದೇನೋ ಕೈಗೆ ದಾರ ಕಟ್ಟಿಕೊಳ್ಳುತ್ತಾರೆ. ನಿಜವಾಗಿಯೂ ಆ ದಾರಕ್ಕೆ ಶಕ್ತಿ ಇದೆಯಾ?" ಎಂದು ವಿಚಾರವಾದಿ ಕೆ.ಎಸ್. ಭಗವಾನ್ ಎಂದು ಪ್ರಶ್ನೆ ಮಾಡಿದ್ದಾರೆ.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಗವಾನ್, ಯಜ್ಞ- ಯಾಗಾದಿಗಳ ಬಗ್ಗೆ ಕೂಡ ಇಂಥದೇ ಪ್ರಶ್ನೆ ಮಾಡಿದರು. ಜನರೂ ಅದರಲ್ಲೂ ರಾಜಕಾರಣಿಗಳು ಕೈಗೆ ದಾರ ಕಟ್ಟಿಕೊಳ್ಳುತ್ತಾರೆ. ನಿಜವಾಗಿಯೂ ಆ ದಾರಕ್ಕೆ ಶಕ್ತಿ ಇದೆಯಾ. ದಾರಕ್ಕೆ ಶಕ್ತಿ ಇದೆ ಅಂತಾದರೆ ಪಾಕಿಸ್ತಾನ ಹಾಗೂ ಚೀನಾದ ಗಡಿಗೆ ಹೋಗಿ ಎಂದರು.
ನಂಗೆ ಮಾಟ ಮಾಡಿದ್ರೆ, ಉಲ್ಟಾ ಹೊಡೆಯುತ್ತೆ: ಸಚಿವ ರೇವಣ್ಣ ಹೇಳಿದ್ದು ಯಾರಿಗೆ?
ಅಲ್ಲಿ ನಿಮ್ಮ ದಾರ ಪ್ರದರ್ಶನ ಮಾಡಿ. ಶತ್ರುಗಳು ಓಡಿ ಹೋಗ್ತಾರಾ? ಓಡಿ ಹೋಗುವುದಾದರೆ ಗಡಿಯಲ್ಲೇ ಹೋಮ ಮಾಡಿ. ಅಲ್ಲಿಯೇ ಕುಳಿತು ಯಜ್ಞ- ಯಾಗಾದಿಗಳನ್ನು ಮಾಡಿ. ಇವೆಲ್ಲವೂ ಕೇವಲ ಮೂಢನಂಬಿಕೆ. ನಮ್ಮ ದೇಶವನ್ನು ಇಂದು ಪಂಚಾಂಗ ಆಳುತ್ತಿದೆ. ಮೊದಲು ಇದನ್ನು ತಡೆಯಯವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಮೊದಲು ನಾನೇ ಯಾಗ ಆರಂಭಿಸುತ್ತೇನೆ
ದಾರ, ಹೋಮದಿಂದ ಎಲ್ಲವೂ ಸಾಧ್ಯವಾದರೆ ನಾನೇ ಮೊದಲು ಯಾಗ ಆರಂಭಿಸುತ್ತೇನೆ. ಹೋಮ -ಹವನದಿಂದ ಶತ್ರುಗಳು ಓಡಿ ಹೋದರೆ ನಾನೇ ಯಾಗ ಮಾಡುತ್ತೇನೆ. ಮಿಲಿಟರಿಗೆ ಕೊಡುವ ಹಣವೆಲ್ಲ ಯಾಗಕ್ಕೆ ಖರ್ಚು ಮಾಡಲಿ. ಯೋಧರೆಲ್ಲ ವಾಪಸ್ ಬರಲಿ. ಯಜ್ಞದ ಮೂಲಕವೇ ಶತ್ರುಗಳನ್ನು ಸದೆ ಬಡಿಯೋಣ ಎಂದು ಭಗವಾನ್ ಕುಟುಕಿದರು.
ಯಡಿಯೂರಪ್ಪ ಮಾಡಿಸಿದ ಯಾಗದಿಂದ ಏನೂ ಉಪಯೋಗವಿಲ್ಲ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉಡುಪಿಯಲ್ಲಿ ಮಾಡಿದ ಶತಚಂಡಿಕಾ ಯಾಗದಿಂದ ಯಾವುದೇ ಪ್ರಯೋಜನವಿಲ್ಲ. ಹೋಮ- ಯಜ್ಞಗಳೆಲ್ಲ ಸುಳ್ಳೆಂದು ಶತಮಾನಗಳ ಹಿಂದೆಯೇ ಕ್ರಾಂತಿಯೋಗಿ ಬಸವಣ್ಣನವರು ಹೇಳಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರದಲ್ಲಿ ಸಚಿವರಾದ ಜಿಟಿಡಿ ಹಾಗೂ ಎನ್.ಮಹೇಶ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅದನ್ನೇ ಮುಂದುವರಿಸಿಕೊಂಡು ಹೋಗಬೇಕು ಎಂದು ಅಭಿಪ್ರಾಯಪಟ್ಟರು.
ಖಾತೆ ನಿರ್ವಹಿಸಲು ಬುದ್ಧಿವಂತಿಕೆ ಸಾಕು
ಆರಂಭದಲ್ಲಿ ಜಿ.ಟಿ. ದೇವೇಗೌಡರು ತಮಗೆ ದೊರೆತ ಖಾತೆ ನಿಭಾಯಿಸಲು ಸಾಕಷ್ಟು ವಿದ್ಯಾಭ್ಯಾಸವಿಲ್ಲ ಎಂದು ಹಿಂಜರಿಯುತ್ತಿದ್ದರು. ಆದರೆ ಆ ಖಾತೆ ನಿಭಾಯಿಸಲು ಸ್ನಾತಕೋತ್ತರ ಪದವಿ ಏನೂ ಬೇಕಾಗಿಲ್ಲ. ಕೇವಲ ಸಮಸ್ಯೆ ಅರಿತು ಬಗೆಹರಿಸುವ ಬುದ್ಧಿವಂತಿಕೆ ಇದ್ದರೆ ಸಾಕು. ಇನ್ನು ಸಚಿವ ಮಹೇಶ್ ಅವರು ಪುಸ್ತಕ ನೋಡಿಕೊಂಡೇ ಪರೀಕ್ಷೆ ಬರೆಯುವ ಪದ್ಧತಿ ತರಬೇಕು ಎನ್ನುತ್ತಿರುವುದು ಸ್ವಾಗತಾರ್ಹ ಎಂದು ಭಗವಾನ್ ಹೇಳಿದರು.
ಪಠ್ಯ ಓದುವ ಪ್ರವೃತ್ತಿ ಹೆಚ್ಚುತ್ತದೆ
ಈಗಿನ ಬಹುತೇಕ ವಿದ್ಯಾರ್ಥಿಗಳು ಕೇವಲ ಗೈಡ್ ಮೊದಲಾದವನ್ನಷ್ಟೇ ಓದುತ್ತಿದ್ದು, ಪಠ್ಯ ಪುಸ್ತಕಗಳನ್ನು ಮುಟ್ಟುವುದಿಲ್ಲ. ಒಮ್ಮೆ ಸಚಿವರು ತಿಳಿಸಿದ ಪದ್ಧತಿ ಜಾರಿಗೆ ತಂದರೆ ಎಲ್ಲರೂ ಕಡ್ಡಾಯವಾಗಿ ಪುಸ್ತಕಗಳನ್ನು ಓದುತ್ತಾರೆ. ಜತೆಗೆ ಇದರಿಂದ ಭಾಷಾ ಜ್ಞಾನ, ವಿಷಯ ಜ್ಞಾನವೂ ಹೆಚ್ಚುವ ಜೊತೆಗೆ ಯಾವ ಪುಟದಲ್ಲಿ ಯಾವ ಉತ್ತರ ಇದೆ ಎಂಬ ತಿಳಿವಳಿಕೆ ದೊರೆಯುವ ಕಾರಣ ಎಲ್ಲರೂ ಪಠ್ಯ ಓದಿಯೇ ಓದುತ್ತಾರೆ ಎಂದರು.