ಕಳವನ್ನೇ ಉದ್ಯೋಗ ಮಾಡಿಕೊಂಡಿದ್ದ ಪ್ರೊಫೆಷನಲ್ ಕಳ್ಳರು ಕಂಬಿ ಹಿಂದೆ
ಮೈಸೂರು, ಜೂನ್ 15 : ಮೈಸೂರು ಹಾಗೂ ಚಾಮರಾಜನಗರ ಸೇರಿದಂತೆ ಹಲವೆಡೆ ವಾಹನ ಕಳ್ಳತನ ಮತ್ತು ಮನೆ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ಕಳ್ಳರನ್ನು ಬಂಧಿಸಿರುವ ಪೊಲೀಸರು ಏಳು ದ್ವಿಚಕ್ರ ವಾಹನ ಮತ್ತು 43,270 ರುಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ಕಡಕೊಳ ನಿವಾಸಿ ರಂಗಸ್ವಾಮಿ ಅಲಿಯಾಸ್ ರಂಗ (23), ತಮಿಳುನಾಡಿನ ತಾಳವಾಡಿ ಗ್ರಾಮದ ಶಿವಣ್ಣ ಅಲಿಯಾಸ್ ಶಿವ, ಬೆಂಗಳೂರಿನ ಕುಂಬಳಗೂಡಿನ ಸೇವಾ ಭಾರತಿ ಆಶ್ರಮದಲ್ಲಿ ಕೆಲಸ ಮಾಡುವ ಹರೀಶ್ (24) ಬಂಧಿತರು.
ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಇವರು, ಸರಗೂರು ಪೊಲೀಸ್ ಠಾಣೆ ಸರಹದ್ದಿನಲ್ಲಿ 1 ಮೋಟಾರ್ ಸೈಕಲ್, ಟಿ.ಎನ್.ಪುರ ಪೊಲೀಸ್ ಠಾಣೆಯಲ್ಲಿ 1 ಮೋಟಾರ್ ಸೈಕಲ್, ಮೈಸೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನಲ್ಲಿ 1 ಮೋಟಾರ್ ಸೈಕಲ್, ನಂಜನಗೂಡು ಗ್ರಾಮಾಂತರ ಹಾಗೂ ಟೌನ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ತಲಾ 1 ಮೋಟಾರ್ ಸೈಕಲ್ ಕದ್ದಿದ್ದರು.

ಬೆಂಗಳೂರು ನಗರದ ಬಾಣಸವಾಡಿ ಪೊಲೀಸ್ ಠಾಣಾ ಸರಹದ್ದಿನಲ್ಲಿ 1 ಮೋಟಾರ್ ಸೈಕಲ್ ಹಾಗೂ ಇತರೆ ಕಡೆಗಳಲ್ಲಿ 1 ಮೋಟಾರ್ ಸೈಕಲ್ ಸೇರಿದಂತೆ ಒಟ್ಟು 7 ಮೋಟಾರ್ ಸೈಕಲ್ ಗಳನ್ನು ಹಾಗೂ ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ 5 ಕಡೆ ಮನೆಗೆ ಕನ್ನ ಹಾಕಿ ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
ಎಚ್.ಡಿ.ಕೋಟೆ ಮತ್ತು ಸರಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸುತ್ತಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದು, ವಿಚಾರಣೆ ನಡೆಸಿದಾಗ ಕಳವು ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications