ಕ್ಯಾನ್ಸರ್ ಗೆ ಔಷಧ ಕಂಡುಹಿಡಿದ ಮೈಸೂರಿನ ಪ್ರೊ.ರಂಗಪ್ಪ ನೇತೃತ್ವದ ತಂಡ
ಮೈಸೂರು, ಮೇ 9: ಕ್ಯಾನ್ಸರ್ ರೋಗಕ್ಕೆ ಔಷಧ ಕಂಡು ಹಿಡಿಯುವ ಗೋಜಿಗೆ ಅನೇಕರು ಹೋಗಿದ್ದರೂ ಅಷ್ಟರ ಮಟ್ಟಿಗೆ ಫಲ ಲಭಿಸಿರಲಿಲ್ಲ. ಆದರೆ ಈ ಕ್ಯಾನ್ಸರ್ ತಡೆಗೆ ಔಷಧಿ ಈಗ ವಿನ್ಯಾಸಗೊಂಡಿದ್ದು, ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ರಂಗಪ್ಪ ನೇತೃತ್ವದ ಸಂಶೋಧನಾ ತಂಡ ಯಶಸ್ವಿಯಾಗಿದೆ.
ಅವರ ಈ ಸಾಧನೆಗೆ ವಿಶ್ವ ಮಾನ್ಯತೆ ಕೂಡ ಲಭಿಸಿದೆ. ಈ ತಂಡದ ಹೊಸ ಸಂಶೋಧನಾ ಲೇಖನ ವಿಶ್ವದ ಪ್ರಸಿದ್ಧ ನಿಯತಕಾಲಿಕೆ 'ಐ ಸೈನ್ಸ್' ನಲ್ಲಿ ಪ್ರಕಟವಾಗಿದ್ದು, ಇದು ಇಡೀ ದೇಶ ಹೆಮ್ಮೆ ಪಡುವ ವಿಚಾರವಾಗಿದೆ.
ವಿಶ್ವದ ಅತ್ಯುನ್ನತ ಮೂರು ಉನ್ನತ ಕ್ಯಾನ್ಸರ್ ತಜ್ಞರು ಈ ಸಂಶೋಧನಾ ಲೇಖನಗಳನ್ನು ಮೌಲ್ಯಮಾಪನ ಮಾಡಿ ಅದರ ಪ್ರಕಟಣೆಗಾಗಿ ಶಿಫಾರಸ್ಸು ಮಾಡಿದ್ದಾರೆ. ಮೈಸೂರು ವಿವಿಯಿಂದ ಪ್ರೊ. ರಂಗಪ್ಪ ಮತ್ತು ಪ್ರೊ.ಇಸ್ರೇಲ್ ವ್ಲೊಡಾ ವ್ಸ್ಕಿ ನಡುವಿನ ಅಂತಾರಾಷ್ಟ್ರೀಯ ಸಹಭಾಗಿತ್ವದ ಫಲಿತಾಂಶ ಇದಾಗಿದೆ.

ಪ್ರೊ.ರಂಗಪ್ಪ ಈಗಾಗಲೇ ಫಿಲಿಫೈನ್ಸ್ ನ ಯೂನಿವರ್ಸಿಟಿ ಆಫ್ ಸಾಂಟೋ ಥಾಮಸ್ ನಲ್ಲಿ 'ಕ್ಯಾನ್ಸರ್ ರೀಸರ್ಚ್ ಇನ್ಸ್ಟಿಟ್ಯೂಟ್'ಗೆ ಭೇಟಿ ನೀಡಿ ಅದರ ನಿರ್ದೇಶಕರೊಂದಿಗೆ ಚರ್ಚೆ ಮಾಡಿದ್ದಾರೆ. ಮುಂದೆ ಚೈನಾಗೂ ತೆರಳಲಿದ್ದು, ಅಲ್ಲಿಯೂ ಕ್ಯಾನ್ಸರ್ ತಡೆ ಕುರಿತ ಔಷಧಿಗಳ ಕುರಿತು ವಿಸ್ತ್ರತವಾಗಿ ಚರ್ಚಿಸಲಿದ್ದಾರೆ.
2016ರಿಂದ ಮೂರು ವರ್ಷದ ಅವಧಿಗೆ ಅಂತಾರಾಷ್ಟ್ರೀಯ ಸಹಯೋಗದ ಸಂಶೋಧನಾ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಮೈಸೂರು ವಿವಿ ತಂಡದ ನೇತೃತ್ವವನ್ನು ಪ್ರೊ. ರಂಗಪ್ಪ ವಹಿಸಿದ್ದರು. ಡಾ. ಮೋಹನ್ ಡಾ. ಆರ್ ಶೋಭಿತ್ , ಡಾ. ಚಂದ್ರನಾಯಕ್ , ಡಾ. ಬಸಪ್ಪ ಮೈಸೂರು ಸಂಶೋಧನಾ ತಂಡದಲ್ಲಿ ಇದ್ದಾರೆ.
ಇನ್ನು ಕ್ಯಾನ್ಸರ್ ಬಂದಿರುವ ಅಂಗಕ್ಕೆ ಈ ಚಿಕಿತ್ಸೆಯನ್ನು ನೀಡಿದರೆ ಸಾಕು ಗುಣಮುಖವಾಗುತ್ತದೆ. ಒಟ್ಟು 40 ಲಕ್ಷ ರೂ.ವೆಚ್ಚದಲ್ಲಿ ಸಂಶೋಧನೆ ಮಾಡಿದ್ದು, ಸತತ ಮೂರು ವರ್ಷಗಳ ಅವಧಿ ಸಂಶೋಧನೆ ಬಳಿಕ ಅನೇಕ ಪ್ರಯೋಗವನ್ನು ನಡೆಸಿ ಅಂತಿಮವಾಗಿ ಈ ಸೂತ್ರವನ್ನು ಕಂಡು ಹಿಡಿದಿದ್ದಾರೆ

ಪ್ರೊ.ಕೆ.ಎಸ್.ರಂಗಪ್ಪ ಅವರ ಹಲವಾರು ರಾಸಾಯನಿಕಗಳು ವಿಭಿನ್ನ ರೀತಿಯ ಕ್ಯಾನ್ಸರ್ ಗಳ ವಿರುದ್ಧ ಮಾನವ ಪ್ರಾಯೋಗಿಕ ಹಂತದಲ್ಲಿವೆ. ಐಸೈನ್ಸ್ ನಿಯತ ಕಾಲಿಕೆಯಲ್ಲಿ ಸಂಶೋಧನಾ ಲೇಖನ ಪ್ರಕಟವಾದ ನಂತರ, ಫಿನ್ಲ್ಯಾಂಡ್, ಚೀನಾ, ಫಿಲಿಪೈನ್ಸ್ನ ಪ್ರಮುಖ ವಿಜ್ಞಾನಿಗಳು, ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಔಷಧೀಯ ರಾಸಾಯನಿಕಗಳ ಅಭಿವೃದ್ಧಿ ಬಗ್ಗೆ ಚರ್ಚಿಸಲು ಮತ್ತು ಅಂತಾರಾಷ್ಟ್ರೀಯ ದ್ವಿಪಕ್ಷೀಯ ಸಹಭಾಗಿತ್ವವನ್ನು ಹೆಚ್ಚಿಸಲು ಆಹ್ವಾನ ನೀಡಿದ್ದಾರೆ.











Click it and Unblock the Notifications