ಮೈಸೂರಿಗೆ ಮೋದಿ; ನಗರದಲ್ಲಿನ ಭದ್ರತೆ ಹೇಗಿದೆ?
ಮೈಸೂರು, ಜೂನ್ 18; ಯೋಗ ದಿನಾಚರಣೆ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಮೈಸೂರು ಪ್ರವಾಸ ಕೈಗೊಳ್ಳುತ್ತಿದ್ದಾರೆ. ಸೋಮವಾರ ಸಂಜೆ ಅವರು ಮೈಸೂರಿಗೆ ಆಗಮಿಸುತ್ತಿದ್ದಾರೆ.
ಪ್ರಧಾನಿಗಳ ಆಗಮನದ ಹಿನ್ನಲೆಯಲ್ಲಿ ಒಂದೆಡೆ ನಗರದಲ್ಲಿ ಗುಂಡಿಬಿದ್ದ ರಸ್ತೆಗಳು ಡಾಂಬರ್ನಿಂದ ಸುಂದರವಾಗಿ ಕಂಗೊಳಿಸುತ್ತಿದ್ದರೆ, ಮತ್ತೊಂದೆಡೆ ದಸರಾ ಮಾದರಿಯಲ್ಲಿ ಅಲಂಕಾರಕ್ಕೆ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇದೆಲ್ಲದರ ನಡುವೆ ಇಡೀ ನಗರದಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ (2019) ಮೈಸೂರಿಗೆ ಆಗಮಿಸಿದ್ದರಾದರೂ ಅವರು ಚುನಾವಣಾ ಪ್ರಚಾರದ ಹಿನ್ನಲೆಯಲ್ಲಿ ಬಂದಿದ್ದರು. ಆದರೆ ಈ ಬಾರಿ ಸರ್ಕಾರಿ ಕ್ರಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಈಗಾಗಲೇ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಮೈಸೂರು ನಗರಕ್ಕೆ ಆಗಮಿಸುವ ರಸ್ತೆಗಳನ್ನು ದುರಸ್ತಿ ಮಾಡಿದ್ದಲ್ಲದೆ, ಬಣ್ಣ ಬಳಿದು ಸಿಂಗರಿಸಲಾಗಿದೆ. ಈ ನಡುವೆ ಚಾಮುಂಡಿಬೆಟ್ಟಕ್ಕೂ ತೆರಳುವ ಹಿನ್ನಲೆಯಲ್ಲಿ ರಸ್ತೆ ಹಾಗೂ ದೇವಸ್ಥಾನದ ಸುತ್ತಮುತ್ತ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ಸಮಾರೋಪಾದಿಯಲ್ಲಿ ಸಾಗಿದೆ.

ಮೈಸೂರಿಗೆ ವಿಶೇಷ ಭದ್ರತಾ ಪಡೆ ಆಗಮನ
ಈಗಾಗಲೇ ಬಿಗಿ ಭದ್ರತೆ ಕೈಗೊಳ್ಳುವ ಸಲುವಾಗಿ ವಿಶೇಷ ಭದ್ರತಾ ಪಡೆ (ಎಸ್ಪಿಜಿ) ಮತ್ತು ಪೊಲೀಸ್ ಅಧಿಕಾರಿಗಳು ನಗರಕ್ಕೆ ಆಗಮಿಸಿದ್ದು, ವಿವಿಧ ಸ್ಥಳಗಳಲ್ಲಿ ಭದ್ರತಾ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಭದ್ರತಾ ಪಡೆಯ ತಂಡದಲ್ಲಿ ಅಡಿಷನಲ್ ಇನ್ಸ್ಪೆಕ್ಟರ್ ಜನರಲ್ ತಂಡದ 7 ಸಿಬ್ಬಂದಿ ಮತ್ತು ಎಸ್ಪಿಜಿ ಟೀಂ ಇದ್ದು, ಈ ತಂಡವು ಮೈಸೂರು ಅರಮನೆಗೆ ಭೇಟಿ ನೀಡಿ ಅರಮನೆ ಆವರಣದಲ್ಲಿ ವೇದಿಕೆ ನಿರ್ಮಾಣ, ಆವರಣದಲ್ಲಿ ಯೋಗ ಕಾರ್ಯಕ್ರಮಕ್ಕೆ ಕೈಗೊಂಡಿರುವ ಸಿದ್ಧತೆಗಳನ್ನು ವೀಕ್ಷಿಸಿ, ಪರಿಶೀಲನೆ ನಡೆಸಿದ್ದಾರೆ.

ಭದ್ರತೆಯಲ್ಲಿ ಲೋಪವಾಗಬಾರದು
ಮೈಸೂರು ನಗರ, ಗ್ರಾಮಾಂತರ ವಿಭಾಗಗಳ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮೈಸೂರು ಭೇಟಿ ವೇಳೆ ಯಾವುದೇ ಲೋಪವಾಗದಂತೆ ಕ್ರಮ ವಹಿಸಬೇಕು, ಕಾರ್ಯಕ್ರಮಗಳಲ್ಲಿ ಹೆಚ್ಚಿನ ಭದ್ರತೆ ಮಾಡಬೇಕು, ಪ್ರಧಾನಿ ಸಂಚರಿಸುವ ರಸ್ತೆಗಳಲ್ಲಿ ಕಟ್ಟೆಚ್ಚರ ವಹಿಸಬೇಕು., ಪ್ರಧಾನಿಯವರು ನಗರದಿಂದ ತೆರಳುವ ತನಕ ಭದ್ರತೆಗೆ ವಿಶೇಷ ನಿಗಾವಹಿಸಬೇಕು ಎಂಬುದಾಗಿ ಸೂಚನೆಗಳನ್ನು ನೀಡಲಾಗಿದೆ.

ವಿವಿಧೆಡೆಗೆ ತೆರಳಿ ಪರಿಶೀಲನೆ
ಮೋದಿ ಭಾಗವಹಿಸುವ ಕಾರ್ಯಕ್ರಮದ ವೇದಿಕೆ ಸೇರಿದಂತೆ ಸುತ್ತಮುತ್ತಲಿನ ಸ್ಥಳವನ್ನು ಎಸ್ಪಿಜಿ ಸಿಬ್ಬಂದಿ ತಮ್ಮ ವಶಕ್ಕೆ ಪಡೆಯಲಿದ್ದು, ಬಳಿಕ ಸ್ಯಾನಿಟೈಸೇಷನ್, ಶ್ವಾನದಳ, ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿ ತಪಾಸಣೆ ಮಾಡಲಿದ್ದಾರೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಸಂಚರಿಸಲಿರುವ ಸ್ಥಳಗಳಲ್ಲೂ ಪರಿಶೀಲನೆ ಮಾಡಲಿದ್ದಾರೆ. ಇನ್ನು ಪ್ರಧಾನಿ ಭದ್ರತೆಗೆ 20 ಎಸ್ಪಿಜಿ, ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್ಜಿ) ಸಿಬ್ಬಂದಿ ಸೇರಿ ಒಟ್ಟು 47 ಸಿಬ್ಬಂದಿ ನಿಯೋಜಿಸಲಾಗಿದೆ. ಶೀಘ್ರದಲ್ಲಿ ಎಸ್ಪಿಜಿ 20 ಸಿಬ್ಬಂದಿಗೆ ಮೈಸೂರಿಗೆ ಭೇಟಿ ನೀಡಲಿದ್ದಾರೆ.

ಪೊಲೀಸರಿಂದ ವಿವರಣೆ
ಈಗಾಗಲೇ ನಗರಕ್ಕೆ ಆಗಮಿಸಿರುವ ವಿಶೇಷ ಭದ್ರತಾ ಪಡೆ ಪ್ರಧಾನಿ ಭೇಟಿ ನೀಡಲಿರುವ ಮಂಡಕಳ್ಳಿ ವಿಮಾನ ನಿಲ್ದಾಣ, ರ್ಯಾಡಿಸನ್ ಬ್ಲೂ ಪ್ಲಾಜಾ, ಚಾಮುಂಡಿ ಬೆಟ್ಟ, ದಸರಾ ವಸ್ತು ಪ್ರದರ್ಶನದ ಆವರಣ, ಮಹಾರಾಜ ಕಾಲೇಜು, ಆಯುಷ್ ಕೇಂದ್ರಕ್ಕೆ ತೆರಳಿ ಪರಿಶೀಲಿಸಿದ್ದಾರೆ. ವಿಶೇಷ ಭದ್ರತಾ ಪಡೆಯ ಅಧಿಕಾರಿಗಳಿಗೆ ಈಗಾಗಲೇ ಕೈಗೊಂಡಿರುವ ಭದ್ರತಾ ಕ್ರಮಗಳ ಕುರಿತಂತೆ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ವಿವರಿಸಿದ್ದಾರೆ. ಆದರೆ ಎಸ್ಪಿಜಿ ತಂಡ ತನ್ನ ಮಾರ್ಗಸೂಚಿಗಳ ಅನ್ವಯ ಭದ್ರತೆಗಳನ್ನು ಒದಗಿಸಲಿದೆ, ತಂಡ ನೀಡುವ ಸೂಚನೆಯನ್ನು ಸ್ಥಳೀಯ ಪೊಲೀಸರು ಪಾಲಿಸಬೇಕಿದೆ.

ಭದ್ರತೆ ಕುರಿತು ಅಧಿಕಾರಿಗಳಿಂದ ಸಭೆ
ಇನ್ನು ಭದ್ರತೆ ಕುರಿತಂತೆ ಎಸ್ಪಿಜಿ ಅಧಿಕಾರಿಗಳು, ಗುಪ್ತಚರ ಇಲಾಖೆ, ರಾಜ್ಯ ಪೊಲೀಸರು, ಜಿಲ್ಲಾಡಳಿತದ ಅಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್, ಡಿಸಿಪಿಗಳಾದ ಪ್ರದೀಪ್ ಗುಂಟಿ, ಎಂ. ಎಸ್. ಗೀತಾ ಪ್ರಸನ್ನ, ಅಗ್ನಿಶಾಮಕ ದಳ, ನಗರ ಪಾಲಿಕೆ, ಮುಡಾ, ಸೆಸ್ಕ್, ಕೃಷಿ ಮತ್ತು ಲೋಕೋಪಯೋಗಿ ಇಲಾಖೆಗಳ ಅಧಿಕಾರಿಗಳು ಸಭೆ ನಡೆಸಿ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.












Click it and Unblock the Notifications