ಮೈಸೂರು ವಿವಿಗೆ ಜ.27ಕ್ಕೆ ರಾಷ್ಟ್ರಪತಿ ಬರ್ತಾರೆ
ಮೈಸೂರು, ಜ. 2 : ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ಆಚರಣೆಗೆ ಸಿದ್ಧತೆಗಳು ಆರಂಭವಾಗಿವೆ. ಶತಮಾನೋತ್ಸವ ಕಾರ್ಯಕ್ರಮವನ್ನು ಜ. 27ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉದ್ಘಾಟಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವ ಬಗ್ಗೆ ವಿವಿ ಚಿಂತನೆ ನಡೆಸಿದೆ.
ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರು, ಜ.27ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು. ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ವಜೂಭಾಯಿ ವಾಲಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. [ವಿವಿಯಲ್ಲಿ ಧಮ್ ಹೊಡೆದ್ರೆ ಪರೀಕ್ಷೆ ಬರೆಯುವಂತಿಲ್ಲ]

ಉದ್ಘಾಟನಾ ಸಮಾರಂಭದಲ್ಲಿ ಸಮಾಜ ಶಾಸ್ತ್ರ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ 'ಭಾರತರತ್ನ ಎಸ್.ರಾಧಾಕೃಷ್ಣನ್ ಶತಮಾನೋತ್ಸವ ಪ್ರಶಸ್ತಿ', ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ 'ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಶತಮಾನೋತ್ಸವ ಪ್ರಶಸ್ತಿ' ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ 'ಭಾರತರತ್ನ ಪ್ರೊ. ಸಿಎನ್ಆರ್ ರಾವ್ ಶತಮಾನೋತ್ಸವ ಪ್ರಶಸ್ತಿ'ಗಳನ್ನು ನೀಡಲಾಗುತ್ತದೆ ಎಂದು ಪ್ರೊ.ಕೆ.ಎಸ್.ರಂಗಪ್ಪ ಮಾಹಿತಿ ನೀಡಿದರು.
ಶತಮಾನೋತ್ಸವದ ಅಂಗವಾಗಿ ಮೈಸೂರು ವಿವಿಯ ದಾಖಲೆಗಳುಳ್ಳ ಇಂಟರ್ಯಾಕ್ಟಿವ್ ಮ್ಯೂಸಿಯಂ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಅನುದಾನಕ್ಕಾಗಿ ಮನವಿ ಮಾಡಲಾಗಿದೆ. ಈ ಭವನಕ್ಕೆ ಅಂದಾಜು 60 ಕೋಟಿ ರೂ. ವೆಚ್ಚವಾಗುವ ಸಾಧ್ಯತೆ ಇದೆ. ಶತಮಾನೋತ್ಸವ ಸಾಕ್ಷ್ಯಚಿತ್ರ ತಯಾರಿಕೆಯೂ ನಡೆಯುತ್ತಿದೆ ಎಂದು ಕುಲಪತಿಗಳು ತಿಳಿಸಿದರು. [ಮೈಸೂರು-ವಾರಣಾಸಿ-ಮೈಸೂರು ರೈಲು ವೇಳಾಪಟ್ಟಿ]
ಮಾರ್ಚ್ ವಿವಿ ಅಂತ್ಯಕ್ಕೆ ಘಟಿಕೋತ್ಸವ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು, ಟಿಬೇಟಿಯನ್ ಧರ್ಮಗುರು ದಲಾಯಿ ಲಾಮಾ, ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರಿಗೆ ಘಟಿಕೋತ್ಸವದಲ್ಲಿ ಭಾಗವಹಿಸುವಂತೆ ಪತ್ರ ಬರೆಯಲಾಗಿದೆ ಎಂದರು.












Click it and Unblock the Notifications