ಪ್ರತಾಪ್ ಸಿಂಹ ಸಂದರ್ಶನ : ವಿಡಿಯೋ ವೈರಲ್ ಮಾಡಿದ್ದು ರವಿ ಚೆನ್ನಣ್ಣನವರ್
ಮೈಸೂರು, ಡಿಸೆಂಬರ್ 4 : ಹನುಮಜಯಂತಿ ಅಂಗವಾಗಿ ಹುಣಸೂರಿನಲ್ಲಿ ನಡೆದ ಗಲಭೆಯ ಕೇಂದ್ರ ಬಿಂದು ಪ್ರತಾಪ್ ಸಿಂಹ. ಘಟನೆ ನಡೆದ ಕ್ಷಣದಿಂದಲೂ ಬಂಧನವಾಗಿ, ಬಿಡುಗಡೆಯೂ ಆಗಿ ಹೊರಬಂದ ಸಂಸದ ಪ್ರತಾಪ್ ಸಿಂಹರ ನಿಲುವೇನು? ಅಲ್ಲಿ ನಡೆದಿದ್ದು ಏನು? ತಪ್ಪು ಯಾರದ್ದು? ಈ ಎಲ್ಲ ಪ್ರಶ್ನೆಗಳಿಗೆ ಖುದ್ದು ಪ್ರತಾಪ್ ಸಿಂಹರೇ ಉತ್ತರಿಸಿದ್ದಾರೆ. ಇಲ್ಲಿದೆ ಪ್ರತಾಪ್ ಸಿಂಹ ಅವರ ಒನ್ ಇಂಡಿಯಾಗೆ ಜೊತೆಗಿನ ಸಂದರ್ಶನ.
ಪ್ರತಾಪ್ ಸಿಂಹ ಮೇಲ್ಕಂಡ ಎಲ್ಲ ಪ್ರಶ್ನೆಗಳಿಗೆ ಒನ್ ಇಂಡಿಯಾದ ಜೊತೆ ಮಾತನಾಡಿ ಉತ್ತರ ನೀಡಿದ್ದಾರೆ. ಘಟನೆ ನಡೆಯಲು ಜಿಲ್ಲಾಡಳಿತದ ವೈಫಲ್ಯ ಕಾರಣ ಎಂದಿರುವ ಪ್ರತಾಪ್ ಸಿಂಹ, ತಮ್ಮ ಮೇಲೆ ನಡೆಯುತ್ತಿರುವ ಪಿತೂರಿ, ಸರ್ಕಾರದ ಏಕ ಧರ್ಮ ಸಂತುಷ್ಟೀಕರಣ ನೀತಿ, ಕಾನೂನಾತ್ಮಕವಾಗಿ ತಮ್ಮ ನಡೆ ಹೇಗೆ ಸರಿ ಎಲ್ಲವನ್ನೂ ಉತ್ತರಿಸಿದ್ದಾರೆ. ಇಲ್ಲಿದೆ ಪ್ರತಾಪ್ ಸಿಂಹ ಅವರ ಒನ್ ಇಂಡಿಯಾಗೆ ಜೊತೆಗಿನ ಸಂದರ್ಶನ.

ಘಟನೆ ಆಗಿದ್ದು ಹೇಗೆ, ನಡೆದಿದ್ದಾರೂ ಏನು?
ಹುಣಸೂರಿನ ಹನುಮಜಯಂತಿಗೆ ಅದರದ್ದೇ ಆದ ಹಿನ್ನೆಲೆ ಇದೆ. ಕಳೆದೆರಡು ವರುಷದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ಮೆರವಣಿಗೆಗೆ ಅವಕಾಶ ಮಾಡಿಕೊಡುತ್ತೇವೆ ಎಂದು ಎಸ್ಪಿ ಹೇಳಿದ್ದರು. ಅವರ ಮಾತಿಗೆ ಒಪ್ಪಿ ನಾವು ಕಳೆದ ವರ್ಷ ಅವರು ಹೇಳಿದಂತೆ ನಡೆದುಕೊಂಡಿದ್ದೆವು. ಈ ಬಾರಿ ನಾವು ಸಂಪ್ರದಾಯದ ಪ್ರಕಾರ ರಂಗನಾಥ ಬಡಾವಣೆಯಿಂದಲೇ ಮೆರವಣಿಗೆ ಮಾಡುತ್ತೇವೆ ಎಂದು ಒಂದು ತಿಂಗಳ ಹಿಂದೆಯೇ ಸುದ್ದಿಗೋಷ್ಠಿ ಮಾಡಿ ಹೇಳಿದ್ದೆ. ಆದರೆ ಈ ಮಧ್ಯೆ ನವೆಂಬರ್ 27 ರಂದು ಜಿಎಲ್ಬಿ ರಸ್ತೆ, ಕಾರ್ಖಾನೆ ರಸ್ತೆ, ರಂಗನಾಥ ಬಡಾವಣೆಯಲ್ಲಿ ಮೆರವಣಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ನವೆಂಬರ್ 5ರಂದೇ ಈ ಆದೇಶ ಪ್ರಕಟವಾಗಿದ್ದರೂ ಯಾರಿಗೂ ಈ ವಿಚಾರ ತಿಳಿಸಲೇ ಇಲ್ಲ. ಅಷ್ಟೇ ಅಲ್ಲದೇ ಯಾವುದಾದರೂ ಮಾಧ್ಯಮಗಳಲ್ಲಿ ನಿರ್ಬಂಧ ವಿಧಿಸಿರುವ ವಿಚಾರವನ್ನು ತಿಳಿಸಿರಲಿಲ್ಲ. ಈ ವಿಚಾರ ತಿಳಿದು ನಾನು ಎಸ್ಪಿ ಅವರ ಜೊತೆ ಮಾತನಾಡಿ ರಂಗನಾಥ ಸ್ವಾಮಿ ಬಡಾವಣೆಯಿಂದ ನಾವು ಮೆರವಣಿಗೆ ಹೋಗುತ್ತೇವೆ ಇದಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದೆ.
ನವೆಂಬರ್ 5ರಂದು ನಿರ್ಬಂಧ ವಿಧಿಸಿರುವುದು ಗೊತ್ತಾಗಿದ್ದರೆ ನಾವು ನ್ಯಾಯಾಂಗ ಹೋರಾಟ ಮಾಡುತ್ತಿದ್ದೆವು. ಆ ವಿಚಾರವನ್ನು ಮುಚ್ಚಿಟ್ಟು ನವೆಂಬರ್ 27ಕ್ಕೆ ತಿಳಿಸಿದ್ದು ಯಾಕೆ? ಅಷ್ಟೇ ಅಲ್ಲದೇ ಕಳೆದ ವರ್ಷ ಅನುಮತಿ ನೀಡುತ್ತೇವೆ ಎಂದು ಹೇಳಿ ಈ ವರ್ಷ ಅನುಮತಿ ನೀಡದ್ದು ಯಾಕೆ? . ಈ ಘಟನೆಯಲ್ಲಿ ಜಿಲ್ಲಾಡಳಿತದ್ದೇ ತಪ್ಪು.

ನೀವು ಕಾನೂನು ಉಲ್ಲಂಘಿಸಿದ್ದು ನಿಜವೇ ಅಲ್ಲವೇ ?
ಹುಣಸೂರಿನಲ್ಲಿ ಶಾಂತಿಯುತವಾಗಿ ಭಾಗವಹಿಸಿದ್ದ ಜನರ ಮೇಲೆ ಲಾಠಿ ಚಾರ್ಜ್ ಮಾಡಿದ್ದು ಗೊತ್ತಾಗಿ ಅಲ್ಲಿ ನಾನು ತೆರಳಲು ಹೋಗುತ್ತಿದ್ದಾಗ ಬಿಳಿಕೆರೆ ಬಳಿ ಎಲ್ಲ ವಾಹನಗಳನ್ನು ತಡೆದು ನಿಲ್ಲಿಸಿ ಪೊಲೀಸರು ತಪಾಸಣೆ ಮಾಡುತ್ತಿದ್ದರು. ಆ ಪ್ರದೇಶದಲ್ಲಿ ಯಾವುದೇ ನಿರ್ಬಂಧ ವಿಧಿಸಲಾಗಲಿಲ್ಲ. ಅಷ್ಟೇ ಅಲ್ಲದೇ ಬ್ಯಾರಿಕೇಡ್ ಹಾಕಿರಲಿಲ್ಲ. ಈ ವಿಚಾರ ತಿಳಿದು ಯಾಕೆ ವಾಹನಗಳನ್ನು ತಡೆಯುತ್ತಿದ್ದೀರಿ ಎಂದು ನಾನು ಕಾರು ನಿಲ್ಲಿಸಿ ಪೊಲೀಸರನ್ನು ಪ್ರಶ್ನಿಸಲು ಮುಂದಾಗುತ್ತಿದ್ದಾಗ ನಾನು ಮುಂದೆ ಹೋಗಬಾರದು ಎನ್ನುವುದಕ್ಕೆ ಬ್ಯಾರಿಕೇಡ್ ಹಾಕಿದ್ದಾರೆ. ಹೀಗಾಗಿ ನಾನು ಕಾರನ್ನು ಚಲಾಯಿಸಿದ್ದೇನೆ. ಕಾರಿನ ಮುಂಭಾಗಕ್ಕೆ ಬ್ಯಾರಿಕೇಡ್ ತಾಗಿದೆ ಬೇರೆ ಏನೂ ಆಗಿಲ್ಲ

ಎಸ್ಪಿ ರವಿ ಚನ್ನಣ್ಣವರ್ ಮೇಲೆ ಆರೋಪ ಏಕೆ ?
ನಾನು ಇದೂವರೆಗೂ ಪೊಲೀಸರಿಗೆ ಏಕವಚನದಲ್ಲಿ ಬೈದಿಲ್ಲ. ಕೊಪ್ಪಳದಲ್ಲಿ ಸಿಎಂ ಬೈದಿದ್ದು ಗೊತ್ತಿದೆ. ಅಧಿಕಾರಿಗಳ ಹತ್ಯೆಯಲ್ಲಿ ಭಾಗಿಯಾದವರನ್ನು ಸಂಪುಟದಲ್ಲಿ ಇಟ್ಟುಕೊಂಡು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕೆಲವರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಿಂತಲೂ ಪ್ರತಿಷ್ಟೆ ಅಹಂ ದೊಡ್ಡದಾಗಿದೆ. ನನ್ನ ಮೇಲೆ ನೂರು ಕೇಸ್ ಹಾಕಬಹುದು. ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ ಎನ್ನುವ ವಿಶ್ವಾಸವಿದೆ. ಈದ್ ಮಿಲಾದ್, ಟಿಪ್ಪು ಸುಲ್ತಾನ್ ಜಯಂತಿಯ ಮೆರವಣಿಗೆ ಅವಕಾಶ ನೀಡಲಾಗುತ್ತದೆ. ಆದರೆ ಹಿಂದೂಗಳ ಹಬ್ಬಕ್ಕೆ ನಿರ್ಬಂಧ ಯಾಕೆ? ಯಾವುದೇ ಧರ್ಮದ ಆಚರಣೆಗೆ ಅಡ್ಡಿ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಈ ಹಿಂದೆಯೇ ತೀರ್ಪು ನೀಡಿದೆ. ಆದರೆ ಸರ್ಕಾರ 25 ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಸಂಪ್ರದಾಯಕ್ಕೆ ಅನುಮತಿ ನೀಡದ್ದು ಎಷ್ಟು ಸರಿ ಎಂದು.

ನೀವು ಹೇಳಿಕೆ ನೀಡಿದ್ದು ವಿಡಿಯೋ ವೈರಲ್ ಆಗಿರೋದು ಏಕೆ ?
ಮೇಡಂ, ಈ ವಿಡಿಯೋವನ್ನು ಲೀಕ್ ಮಾಡಿದ್ದು ಬೇರಾರೂ ಅಲ್ಲ. ರವಿ ಚನ್ನಣ್ಣನವರ್. ಅವರು ಸರಕಾರದ ದಾಸರಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲರಲ್ಲೂ ನಮ್ಮ ಬಗ್ಗೆ ತಪ್ಪು ಭಾವನೆ ಹುಟ್ಟಿಸಲೂ ಇದು ಅವರ ತಂತ್ರ. ನಾನು ಮಾತನಾಡಿದ್ದು ನಿಜಾ. ಆದರೆ ಇಲ್ಲಿ ನಾನು ಗಲಾಟೆ ಮಾಡುವುದಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ದಯವಿಟ್ಟು ಏಕೆ ಈ ವಿಡಿಯೋ ಲೀಕ್ ಆಗಿದೆ ಎಂದು ಸರಕಾರದ ಸಾರಥ್ಯದಲ್ಲಿ ಕೆಲಸ ಮಾಡುತ್ತಿರುವ ರವಿ ಅವರೇ ಉತ್ತರಿಸಲಿ.











Click it and Unblock the Notifications