ಪ್ರಮೋದಾದೇವಿ ಒಡೆಯರ್ ರಾಜಕೀಯಕ್ಕೆ?
ಶ್ರೀಕಂಠದತ್ತ ಒಡೆಯರ್ ಅವರನ್ನು ಬಿಜೆಪಿ, ಕಾಂಗ್ರೆಸ್ ಕಡೆಗಣಿಸಿದ್ದರಿಂದ ಜೆಡಿಎಸ್ ತನ್ನತ್ತ ಸೆಳೆಯಲು ಮೊದಲಿನಿಂದಲೂ ಕಸರತ್ತು ನಡೆಸಿತ್ತು. ಸದ್ಯ ಸೋಮವಾರ ಮೈಸೂರಿನಲ್ಲಿ ಹೇಳಿಕೆ ನೀಡಿರುವ ಮಾಜಿ ಸಚಿವ ರೇವಣ್ಣ ಈ ಕುರಿತು ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯ ಹೊಂದಿದ್ದರೂ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಗೆ ನಿರಾಸೆ ಉಂಟಾಗುತ್ತಿದೆ. ಆದ್ದರಿಂದ ಶ್ರೀಕಂಠದತ್ತ ಒಡೆಯರ್ ಅವರನ್ನು ಜೆಡಿಎಸ್ ಗೆ ಕರೆತಂದೆ 2014ರ ಚುನಾವಣೆಯಲ್ಲಿ ಅವರ ಪತ್ನಿ ಪ್ರಮೋದಾದೇವಿ ಒಡೆಯರ್ ಅವರಿಗೆ ಟಿಕೆಟ್ ನೀಡಲು ಜೆಡಿಎಸ್ ರಣತಂತ್ರ ರೂಪಿಸಿತ್ತು ಎಂದು ತಿಳಿದು ಬಂದಿದೆ. [ಚಿರನಿದ್ರೆಗೆ ಜಾರಿದ ಶ್ರೀಕಂಠದತ್ತ ಒಡೆಯರ್]
ಶ್ರೀಕಂಠದತ್ತ ಒಡೆಯರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಮೈಸೂರು ಜೆಡಿಎಸ್ ಜಿಲ್ಲಾಧ್ಯಕ್ಷ ಮತ್ತು ಎಚ್.ಡಿ. ಕೋಟೆ ಶಾಸಕ ಎಸ್. ಚಿಕ್ಕಮಾದು ಅವರು ಜೆಡಿಎಸ್ ಗೆ ಬರುವಂತೆ ಒಡೆಯರ್ ಜೊತೆ ಮಾತುಕತೆ ನಡೆಸಿದ್ದರು ಎಂದು ತಿಳಿದುಬಂದಿದೆ. ಪ್ರಾಥಮಿಕ ಹಂತದ ಮಾತುಕತೆ ನಡೆಸಿ ಒಡೆಯರ್ ಅವರಿಗೆ ಒಪ್ಪಿಗೆ ಪಡೆದಿದ್ದರು. ಆದರೆ, ಅಷ್ಟರಲ್ಲಿ ಕೆಎಸ್ಸಿಎ ಚುನಾವಣೆ ಎದುರಾಗಿದ್ದರಿಂದ ಮಾತುಕತೆ ಅಲ್ಲಿಗೆ ನಿಂತಿತ್ತು.
ಸದ್ಯ ಶ್ರೀಕಂಠದತ್ತ ಒಡೆಯರ್ ನಮ್ಮ ಜೊತೆ ಇಲ್ಲ. ಪ್ರಮೋದಾದೇವಿ ಅವರಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೈಸೂರಿನಿಂದ ಸ್ಪರ್ಧಿಸುವಂತೆ ಮನವೊಲಿಸಲು ಜೆಡಿಎಸ್ ಮುಂದಾಗಿದೆ. ಎಚ್.ಎಂ.ರೇವಣ್ಣ ಅವರ ಪ್ರಕಾರ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡರಿಗೆ ಯಾವ ಕಾಲದಲ್ಲಿ ಎಂತಹ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಅರಿವಿದೆ. ಅವರು ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಇದರ ನಡುವೆಯೇ ಶನಿವಾರ ಮೈಸೂರಿನಲ್ಲಿ ಅರಸು ಜನಾಂಗ ಒಕ್ಕೂಟ, ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಚಾಮಂಡೇಶ್ವರಿ ಕ್ಷೇತ್ರದ ಶಾಸಕ, ಮಾಜಿ ಸಚಿವ, ಜೆಡಿಎಸ್ ಮುಖಂಡ ಜಿ.ಟಿ. ದೇವೇಗೌಡ, ಪ್ರಮೋದಾದೇವಿ ಒಡೆಯರ್ ಅವರನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸಬೇಕು. ಪಕ್ಷಾತೀತವಾಗಿ ಗೆಲ್ಲಿಸಬೇಕು ಎಂದು ಹೇಳುವ ಮೂಲಕ ಅವರನ್ನು ರಾಜಕೀಯಕ್ಕೆ ಕರೆತರುವ ಸುಳಿವು ನೀಡಿದ್ದಾರೆ.