'ಸರ್ಕಾರ ಯಾಕೆ ತಮ್ಮ ಕಾರ್ಯಕ್ರಮಗಳಿಗೂ ದಸರಾ ಎಂದು ಹೆಸರಿಟ್ಟಿದೆ'?
ಮೈಸೂರು, ಸೆಪ್ಟೆಂಬರ್ .16 : ರಾಜ ಮನೆತನ ನಡೆಸುವುದು ದಸರಾ. ಸರ್ಕಾರದಿಂದ ನಡೆಸುವುದು ನಾಡಹಬ್ಬ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.
ಮೈಸೂರಿನಲ್ಲಿರುವ ಜಗನ್ಮೋಹನ ಅರಮನೆಯಲ್ಲಿ ಕೆಲ ದುರಸ್ಥಿ ಕಾರ್ಯ ನಡೆಯುತ್ತಿದ್ದು, ಪ್ರಮೋದಾದೇವಿ ಒಡೆಯರ್ ಅದನ್ನು ವೀಕ್ಷಿಸಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ದಸರಾ ಪೋಸ್ಟರ್ ನಲ್ಲಿ ಒಡೆಯರ್ ಫ್ಯಾಮಿಲಿ ಹೆಸರು ಕೈಬಿಟ್ಟ ವಿಚಾರ ಸಂಬಂಧ ಮಾತನಾಡಿದ ಅವರು, ರಾಜಮನೆತನದಿಂದ ಮಾಡುವುದು ಮಾತ್ರ ದಸರಾ.
ನವರಾತ್ರಿ ಹಬ್ಬವನ್ನು ದಸರಾ ಎಂದು ಕರೆಯಲಾಗುತ್ತದೆ. ಆದರೆ ಸರ್ಕಾರ ಯಾಕೆ ತಮ್ಮ ಕಾರ್ಯಕ್ರಮಗಳಿಗೂ ದಸರಾ ಎಂದು ಹೆಸರಿಟ್ಟಿದೆ ಎಂಬುದಕ್ಕೆ ಅವರನ್ನೇ ಕೇಳಬೇಕು ಎಂದರು.

100 ವರುಷಕ್ಕೂ ಹಳೆಯದಾದ ಹಾಗೂ ವಿಶಿಷ್ಟ ಇತಿಹಾಸವನ್ನು ಹೊಂದಿರುವ ಜಗನ್ಮೋಹನ ಅರಮನೆ ಇತ್ತೀಚಿನ ವರ್ಷಗಳಲ್ಲಿ ಶಿಥಿಲಾವಸ್ಥೆ ತಲುಪಿದೆ. ಕಟ್ಟಡದ ಮೇಲ್ಛಾವಣಿಯ ಗಾರೆ ಉದುರಿ ಬೀಳಲಾರಂಭಿಸಿದ ಹಿನ್ನೆಲೆಯಲ್ಲಿ ಮೈಸೂರು ರಾಜಮನೆತನ ಅದನ್ನು ನವೀಕರಣ ಮಾಡಲು ಮುಂದಾಗಿದೆ ಎಂದರು.
ಈ ದುರಸ್ಥಿ ಕಾರ್ಯವೂ ನನ್ನ ಸ್ವಂತ ಹಣ ಮತ್ತು ಫೌಂಡೇಷನ್ ಹಣದಿಂದ ನಡೆಯುತ್ತಿದೆ. ಸರ್ಕಾರದಿಂದ ಯಾವುದೇ ಅನುದಾನ ತೆಗೆದುಕೊಂಡಿಲ್ಲ. ಇದು ನಮ್ಮ ಮಾವನವರ ಕನಸ್ಸು. ಆದ್ದರಿಂದ ಮುತುವರ್ಜಿಯಿಂದ ದುರಸ್ತಿ ಮಾಡಿಸುತ್ತಿದ್ದೇವೆ.
ಜಗನ್ಮೊಹನ ಅರಮನೆ ಮೇಲೆ ಯಾವುದೇ ಕೇಸ್ ಗಳು ಕೋರ್ಟ್ ನಲ್ಲಿ ಇಲ್ಲ. ಇನ್ನು ಮುಂದೆ ಸರ್ಕಾರ ತಡೆ ತಂದರೂ ತರಬಹುದು ಎಂದು ಪ್ರಮೋದಾದೇವಿ ಒಡೆಯರ್ ಸರ್ಕಾರದ ವಿರುದ್ಧ ತಮ್ಮ ಅಸಮಧಾನ ವ್ಯಕ್ತಪಡಿಸಿದರು.
ಜನಸೇವೆ ಮಾಡಲು ರಾಜಕೀಯಕ್ಕೆ ಬರುವ ಅವಶ್ಯಕತೆ ಇಲ್ಲ. ಅಮಿತ್ ಶಾ ಚುನಾವಣೆ ಸಂದರ್ಭದ ಭೇಟಿ ಮುನ್ನ ತುಂಬಾ ಮಂದಿ ಭೇಟಿ ಮಾಡಿದ್ದರು. ಆದರೆ, ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಯದುವೀರ್ ರಾಜಕೀಯ ಪ್ರವೇಶ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪ್ರಮೋದ ದೇವಿ, ಯದುವೀರ್ ರಾಜಕೀಯ ಸೇರುವುದು ಅವರ ವೈಯಕ್ತಿಕ ವಿಚಾರ ಎಂದರು.












Click it and Unblock the Notifications