80 ವರ್ಷ ದಾಟಿದ ಮತದಾರರಿಗೆ ವಿಶೇಷ ವ್ಯವಸ್ಥೆ: ಮೈಸೂರಿನಲ್ಲಿ ಅಂಚೆ ಮತದಾನಕ್ಕೆ ಅವಕಾಶ
ಮೈಸೂರು ಜಿಲ್ಲಾಡಳಿತ ಜಿಲ್ಲೆಯಲ್ಲಿ ಹಾಸಿಗೆ ಹಿಡಿದಿರುವವರು, 80 ದಾಟಿದ ಹಿರಿಯರು, ವಿಶೇಷ ಚೇತನರಿಗೆ ಇದೇ ಮೊದಲ ಬಾರಿಗೆ ಅಂಚೆ ಮುಖಾಂತರ ಮತದಾನ ಮಾಡಲು ಅವಕಾಶ ನೀಡಿದೆ.
ಮೈಸೂರು, ಮಾರ್ಚ್ 21: ಮುಂದಿನ ಕರ್ನಾಟಕ ವಿಧಾನಸಭೆ ಚುನಾವನೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಯಾರೂ ಮತದಾನದಿಂದ ದೂರ ಉಳಿಯಬಾರದು ಎಂಬ ಉದ್ದೇಶದಿಂದ ಜಿಲ್ಲಾಡಳಿತ ಜಿಲ್ಲೆಯಲ್ಲಿ ಹಾಸಿಗೆ ಹಿಡಿದಿರುವವರು, 80 ದಾಟಿದ ಹಿರಿಯರು, ವಿಶೇಷ ಚೇತನರಿಗೆ ಇದೇ ಮೊದಲ ಬಾರಿಗೆ ಅಂಚೆ ಮುಖಾಂತರ ಮತದಾನ ಮಾಡಲು ಅವಕಾಶ ನೀಡಿದೆ.
ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿಯೂ ಕಳೆದ ಬಾರಿಗಿಂತಲೂ ಮತದಾನದ ಪ್ರಮಾಣ ಹೆಚ್ಚಾಗಲಿದೆ ಎಂಬುದು ಜಿಲ್ಲಾಡಳಿತದ ಲೆಕ್ಕಾಚಾರವಾಗಿದೆ. ಹೀಗಾಗಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ಅಧಿಕಾರಿಗಳು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದಾರೆ.

ಸಮೀಕ್ಷೆ ಒಂದರ ಪ್ರಕಾರ ಮೈಸೂರು ಜಿಲ್ಲೆಯಲ್ಲಿ 84,922 ಮಂದಿ 80 ವರ್ಷ ತುಂಬಿದವರು ಇದ್ದಾರೆ. ಇದಲ್ಲದೇ 31,492 ಮಂದಿ ವಿಶೇಷ ಚೇತನರಿದ್ದಾರೆ. 2,430 ಮಂದಿ ಹಾಸಿಗೆ ಹಿಡಿದು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವುದು ಜಿಲ್ಲಾಡಳಿತ ಸಂಗ್ರಹಿಸಿರುವ ನಾಮಪತ್ರ ಸಲ್ಲಿಕೆಗೆ ಕಡೇ ದಿನಾಂಕದವರೆಗೂ ಈ ಸಮೀಕ್ಷೆ ಕಾರ್ಯ ಮುಂದುವರಿಯಲಿದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.
ಇವರೆಲ್ಲರೂ ಮತದಾನ ಪಕ್ರಿಯೆಯಲ್ಲಿ ತೊಡಗಿಸುವ ಉದ್ದೇಶದಿಂದ ಜಿಲ್ಲಾಡಳಿತ ಇವರಿಗೆ ಅಂಚೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾಡಳಿತ ಚುನಾವಣೆ ಆಯೋಗದ ಆದೇಶದಂತೆ 80 ವರ್ಷ ಪೂರೈಸಿದವರು, ಹಾಸಿಗೆ ಹಿಡಿದು ಚಿಕಿತ್ಸೆ ಪಡೆಯುತ್ತಿರುವವರು, ವಿಶೇಷಚೇತನರೆಲ್ಲರಿಗೂ ಮತದಾನಕ್ಕೆ ಅವಕಾಶ ನೀಡಬೇಕೆಂಬ ಉದ್ದೇಶದಿಂದ ಈಗಾಗಲೇ ಸಮೀಕ್ಷೆ ಆರಂಭಿಸಲಾಗಿದೆ.

ಈ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮೇಲೆ ವಿಶೇಷ ಕಾಳಜಿ
ಈ ಹಿಂದಿನ ಚುನಾವಣೆಗಳಲ್ಲಿ ವಿಶೇಷಚೇತನರು ಬೇರೆಯವರ ಸಹಾಯದಿಂದ ಮತಗಟ್ಟೆ ಬಳಿವರೆಗೆ ಬಂದು ಅಲ್ಲಿ ಒದಗಿಸಲಾಗಿದ್ದ ವೀಲ್ಚೇರ್ ಬಳಕೆ ಮಾಡಿಕೊಂಡು ಮತದಾನ ಮಾಡುತ್ತಿದ್ದರು. ಇದಲ್ಲದೇ 80 ವರ್ಷ ದಾಟಿದವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ವಾಹನಗಳಲ್ಲಿ ಮತಗಟ್ಟೆ ವರೆಗೆ ಕರೆತಂದು ನಂತರ ಕೆಲವರು ಅವರನ್ನು ಸ್ವತಃ ಎತ್ತಿಕೊಂಡು ಹೋಗಿ ಮತ ಹಾಕಿಸುತ್ತಿದ್ದರು.
ಇದಲ್ಲದೇ ಹಾಸಿಗೆ ಹಿಡಿದವರೂ ಕೂಡ ನಾನಾ ಕಾಯಿಲೆಗಳಿಂದ ಬಳಲುತ್ತಿರುವುದರಿಂದ ಮತಗಟ್ಟೆಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರು. ಈ ಮೂರು ವಿಭಾಗದವರು ಈ ಸಂಕಷ್ಟಗಳನ್ನು ದಾಟಿ ಮತದಾನ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಬಹುತೇಕರು ಮತದಾನದಿಂದ ಹೊರಗುಳಿಯುತ್ತಿದ್ದರು.
ಈ ಸನ್ನಿವೇಶವನ್ನೂ ದೂರವಾಗಿಸಿ ಸಮಾಜದಲ್ಲಿರುವ ಪ್ರತಿಯೊಬ್ಬರೂ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿ ಪ್ರಜಾಪ್ರಭುತ್ವದ ಯಶಸ್ವಿಗೊಳಿಸಲು ಈ ರೀತಿಯ ಸಮಸ್ಯೆ ಇರುವವರಿಗೆ ಅವರು ಇರುವಲ್ಲಿಯೇ ಅಂಚೆ ಮತದಾನ ಮಾಡುವ ಅವಕಾಶ ನೀಡುವ ನಿರ್ಧಾರ ಕೈಗೊಳ್ಳಲಿದೆ.
ಈ ಬಾರಿ ಮತದಾನಕ್ಕೆ ಅರ್ಹರಿರುವ ಪ್ರತಿಯೊಬ್ಬರು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕು ಎಂದು ಮೈಸೂರು ಜಿಲ್ಲಾಡಳಿತ ಮತದಾರರ ಮೇಲಿನ ವಿಶೇಷ ಕಾಳಜಿಯಿಂದ ಈ ಯೋಜನೆಯನ್ನು ರೂಪಿಸಿದೆ. ಇದರಿಂದ ಪ್ರತಿಯೊಬ್ಬರು ಕೂಡ ಈ ಬಾರಿ ಮತದಾನ ಮಾಡಬಹುದಾಗಿದೆ.
ದಾವಣಗೆರೆಯಲ್ಲಿ 213 ಶತಾಯುಷಿ ಮತದಾರರು
ದಾವಣಗೆರೆ ಜಿಲ್ಲೆಯಲ್ಲಿ ಸಹ ಈಗಾಗಲೇ ಮತದಾರರ ಸಮೀಕ್ಷೆ ನಡೆದಿದ್ದು, ಜಿಲ್ಲೆಯಲ್ಲಿ 213 ಶತಾಯುಷಿಗಳಿರುವುದು ವಿಶೇಷವಾಗಿದೆ. ನೂರು ವರ್ಷ ಹಾಗೂ ನೂರು ವರ್ಷ ಮೇಲ್ಪಟ್ಟವರು ಜಗಳೂರು ವ್ಯಾಪ್ತಿಯಲ್ಲಿ 18 ಮಂದಿ, ಹರಿಹರ ವ್ಯಾಪ್ತಿಯಲ್ಲಿ 33 ಮಂದಿ, ದಾವಣಗೆರೆ ಉತ್ತರ ವ್ಯಾಪ್ತಿಯಲ್ಲಿ 41 ಮಂದಿ, ದಾವಣಗೆರೆ ದಕ್ಷಿಣ ವ್ಯಾಪ್ತಿಯಲ್ಲಿ 30 ಮಂದಿ, ಮಾಯಕೊಂಡ ವ್ಯಾಪ್ತಿಯಲ್ಲಿ 17, ಮಂದಿ ಚನ್ನಗಿರಿ ವ್ಯಾಪ್ತಿಯಲ್ಲಿ 43 ಹಾಗೂ ಹೊನ್ನಾಳಿಯಲ್ಲಿ 31 ಶತಾಯುಷಿಗಳಿದ್ದಾರೆ.












Click it and Unblock the Notifications