ಮೈಸೂರು ವಿವಿ ಪ್ರತಿಭಟನೆಯಲ್ಲಿ "ಫ್ರೀ ಕಾಶ್ಮೀರ್" ಫಲಕ ಪ್ರದರ್ಶಿಸಿದ ಯುವತಿ ನಾಪತ್ತೆ
ಮೈಸೂರು, ಜನವರಿ 10: ದೆಹಲಿಯ ಜೆಎನ್ ಯು ವಿದ್ಯಾರ್ಥಿಗಳ ಮೇಲೆ ಮುಸುಕುಧಾರಿ ಗೂಂಡಾಗಳು ನಡೆಸಿದ ಹಲ್ಲೆಯನ್ನು ಖಂಡಿಸಿ ಮೈಸೂರು ವಿವಿಯಲ್ಲಿ ನಡೆದ ಪ್ರತಿಭಟನೆ ವೇಳೆ "ಫ್ರೀ ಕಾಶ್ಮೀರ್" ಭಿತ್ತಿಪತ್ರ ಪ್ರದರ್ಶನ ಪ್ರಕರಣ ಸಂಬಂಧ, ಹಲವು ಸಂಘಟನೆಗಳ ವಿಚಾರಣೆ ನಡೆಸಲು ಪೊಲೀಸ್ ಇಲಾಖೆ ಮುಂದಾಗಿದೆ.
ಎಐಡಿಎಸ್ಒ, ಸಿಪಿಎಂ, ಎಸ್ಎಫ್ಐ, ಬಿವಿಎಸ್ ಎಲ್ಲಾ ಸಂಘಟನೆಗಳಿಗೂ ಪ್ರತ್ಯೇಕ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚನೆ ನೀಡಿ ತನಿಖೆ ಚುರುಕುಗೊಳಿಸಿದ್ದಾರೆ.
ಮೈಸೂರು ವಿವಿ ಪ್ರತಿಭಟನೆಯಲ್ಲಿ "ಫ್ರೀ ಕಾಶ್ಮೀರ" ಫಲಕ; ಎಚ್ಚೆತ್ತ ಪೊಲೀಸರು
ಪ್ರತಿಭಟನೆಯ ಸಂದರ್ಭದಲ್ಲಿ "ಫ್ರೀ ಕಾಶ್ಮೀರ್" ನಾಮಫಲಕ ಪ್ರದರ್ಶನ ಮಾಡಿದ ಯುವತಿ ತಮಿಳುನಾಡು ಮೂಲದ, ಮೈಸೂರು ರಾಮಕೃಷ್ಣ ನಗರದಲ್ಲಿ ವಾಸಿಸುತ್ತಿರುವ ಛಾಯಾಗ್ರಾಹಕಿ ನಳಿನಿ ಬಾಲಕುಮಾರ್ ಎಂದು ತಿಳಿದುಬಂದಿದ್ದು, ಆಕೆಯ ಪತ್ತೆಗೆ ಮೂರು ತಂಡಗಳ ರಚನೆ ಮಾಡಿ, ಮೈಸೂರು ನಗರವನ್ನು ಪೊಲೀಸರು ಜಾಲಾಡುತ್ತಿದ್ದಾರೆ.
ಭಿತ್ತಿಪತ್ರ ಪ್ರದರ್ಶನದ ಸಂಬಂಧ ಎಫ್ಐಆರ್ ದಾಖಲಾಗುತ್ತಿದ್ದಂತೆ ನಳಿನಿ ನಾಪತ್ತೆಯಾಗಿದ್ದು, ಆಕೆಯ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ನಳಿನಿ ಮನೆಗೆ ಪೊಲೀಸರು ಭೇಟಿ ಕೊಟ್ಟಾಗ ತಂದೆ ಬಾಲಕುಮಾರ್ಗೆ ಶಾಕ್ ಆಗಿದೆ.
ನಳಿನಿ ಮೈಸೂರು ವಿವಿಯ ಹಳೇ ವಿದ್ಯಾರ್ಥಿನಿ. 2016ರಲ್ಲಿಯೇ ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದಾಳೆ. ಈಕೆಯ ತಂದೆ ಬಾಲಕುಮಾರ್ ಅವರು ಮೈಸೂರು ಭಾರತೀಯ ಭಾಷಾ ಸಂಸ್ಥಾನದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ನಳಿನಿ ಗುಜರಾತ್ನಲ್ಲಿ ಮಾಸ್ಟರ್ ಇನ್ ಡಿಸೈನಿಂಗ್ ಫೋಟೋಗ್ರಫಿ ವ್ಯಾಸಂಗ ಮಾಡಿದ್ದಾರೆ. ಈಕೆ ಜೆಎನ್ಯು ವಿವಿ ಗಲಾಟೆ ಹಾಗೂ ಎಡಪಂಥೀಯ ವಿಚಾರಗಳ ಬಗ್ಗೆ ತನ್ನ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ಗಳನ್ನು ಶೇರ್ ಮಾಡಿದ್ದಳು. ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತಿದ್ದಂತೆ ಎಲ್ಲಾ ಫೋಸ್ಟ್ಗಳು ಆಕೆಯ ಎಫ್ಬಿ ವಾಲ್ನಿಂದ ಡಿಲೀಟ್ ಆಗಿವೆ. ಆಕೆಯ ಫೇಸ್ ಬುಕ್ ಖಾತೆ ಕೂಡ ಡಿಲೀಟ್ ಆಗಿದೆ.
'ಫ್ರೀ ಕಾಶ್ಮೀರ' ಭಿತ್ತಿಪತ್ರ ಪ್ರದರ್ಶಿಸಿದವರ ಬಂಧನಕ್ಕೆ ಎಬಿವಿಪಿ ಒತ್ತಾಯ
ನಿನ್ನೆ ಮೈಸೂರು ವಿವಿ ಕುಲಸಚಿವರು ದಲಿತ ವಿದ್ಯಾರ್ಥಿಗಳ ಒಕ್ಕೂಟ, ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘಕ್ಕೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು. ಇಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಂಘಟನೆಗಳ ಮುಖಂಡರಿಗೆ ಪೋಲಿಸ್ ಇಲಾಖೆ ಬುಲಾವ್ ನೀಡಿದ್ದು ಜಯಲಕ್ಷ್ಮಿ ಪುರ ಠಾಣೆಗೆ ಕರೆಸಿಕೊಂಡು ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ. ಜೊತೆಗೆ ನಿನ್ನೆ ಸಂಜೆ ಮೈಸೂರು ವಿವಿ ಕುಲಸಚಿವ ಆರ್.ಶಿವಪ್ಪ ವಿವಿ ಆವರಣದಲ್ಲಿ ನಡೆದಿರುವ ಎಲ್ಲ ಘಟನೆಗಳ ವಿವರವನ್ನು ರಾಜ್ಯಪಾಲರಿಗೆ ವರದಿ ಸಲ್ಲಿಸಿದ್ದಾರೆ.