ಮೈಸೂರಲ್ಲಿ ಎನ್ ಕೌಂಟರ್, ಸತ್ತ ವ್ಯಕ್ತಿಗೆ ಹಳೆ ನೋಟಿನ ನಂಟು!
ಮೈಸೂರು, ಮೇ 17 : ಮೈಸೂರಿನಲ್ಲಿ ಗುರುವಾರ ನಡೆದ ಪೊಲೀಸ್ ಎನ್ ಕೌಂಟರ್ ಬಗ್ಗೆ ಚರ್ಚೆ ನಡೆಯುತ್ತಿದೆ. ನಿಷೇಧಿತ ಹಳೆಯ ನೋಟುಗಳನ್ನು ಬದಲಾವಣೆ ಮಾಡಲು ತರಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಗುರುವಾರ ಹಿನಕಲ್ ರಿಂಗ್ ರೋಡ್ ಬಳಿ ಪೊಲೀಸರು ನಡೆಸಿದ ಎನ್ ಕೌಂಟರ್ನಲ್ಲಿ ಸುಖ್ವಿಂದ್ ಸಿಂಗ್ (40) ಮೃತಪಟ್ಟಿದ್ದಾನೆ. ಪಂಜಾಬ್ನ ಫರೀದ್ಕೋಟ್ ಮೂಲದ ಈತ ಹಳೆಯ ನೋಟುಗಳನ್ನು ಬದಲಾಯಿಸಲು ತಂದಿದ್ದ.
ವಿಜಯನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ.ಕುಮಾರ್ ಮತ್ತು ತಂಡಕ್ಕೆ ಈ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು. ಆರೋಪಿಗಳನ್ನು ಬಂಧಿಸಲು ತೆರಳಿದಾಗ ಪೊಲೀಸರಿಗೆ ಗನ್ ತೋರಿಸಿ, ಪರಾರಿಯಾಗಲು ಸುಖ್ವಿಂದ್ ಸಿಂಗ್ ಮತ್ತು ಇತರ ಇಬ್ಬರು ಪ್ರಯತ್ನ ನಡೆಸಿದ್ದರು.

ರಿಂಗ್ ರಸ್ತೆಯಲ್ಲಿ ಕಾರಿನಲ್ಲಿ ಆರೋಪಿಗಳು ಕೂತಿದ್ದಾಗ ಪೊಲೀಸರ ತಂಡ ಸುತ್ತುವರೆದಿತ್ತು. ಸುಖ್ವಿಂದ್ ಸಿಂಗ್ ಪೊಲೀಸರನ್ನು ತಳ್ಳಿ ಅವರ ಮೇಲೆ ಗುಂಡು ಹಾರಿಸಲು ಪ್ರಯತ್ನ ನಡೆಸಿದ. ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದಾಗ ಸುಖ್ವಿಂದ್ ಸಿಂಗ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಕಾರಿನಲ್ಲಿದ್ದ ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದು ಹುಡುಕಾಟ ನಡೆದಿದೆ. ಸುಖ್ವಿಂದ್ ಮೃತದೇಹವನ್ನು ಕೆ.ಆರ್.ಆಸ್ಪತ್ರೆಯಲ್ಲಿ ಇಡಲಾಗಿದೆ. ಎನ್ ಕೌಂಟರ್ ವೇಳೆ ಎಎಸ್ಐ ಮತ್ತು ಮುಖ್ಯ ಪದೇ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
'ನಿಷೇಧಿತ 500 ಮತ್ತು 1000 ರೂ. ನೋಟುಗಳ ಬದಲಾವಣೆ ಬಂದಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ನಾಲ್ವರು ಸಿಬ್ಬಂದಿ ಜೊತೆ ಇನ್ಸ್ಪೆಕ್ಟರ್ ಸ್ಥಳಕ್ಕೆ ಧಾವಿಸಿದ್ದರು. ಪೊಲೀಸರನ್ನು ನೋಡಿ ಆರೋಪಿಗಳು ಹಲ್ಲೆಗೆ ಮುಂದಾಗಿದ್ದಾರೆ. ಆಗ ಪೊಲೀಸರು ಗುಂಡು ಹಾರಿಸಿದ್ದಾರೆ' ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಹೇಳಿದ್ದಾರೆ.
ಎನ್ ಕೌಂಟರ್ ಬಗ್ಗೆ ತನಿಖೆಯನ್ನು ಕೈಗೊಳ್ಳಲಾಗಿದೆ. ಸುಖ್ವಿಂದ್ ಸಿಂಗ್ ಮೈಸೂರಿನ ಉದ್ಯಮಿಯೊಬ್ಬರಿಗೆ 10 ಲಕ್ಷ ವಂಚನೆ ಮಾಡಿದ್ದ. ಉದ್ಯಮಿ ಈ ಜಾಲದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ತಿಳಿದುಬಂದಿದೆ. ಸುಖ್ವಿಂದ್ ಹಲವು ದಿನಗಳಿಂದ ಬೆಂಗಳೂರು, ಕೇರಳದ ವಿವಿಧ ನಗರಗಳಲ್ಲಿ ಸಂಚಾರ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.












Click it and Unblock the Notifications