ಮೈಸೂರು; 8 ವರ್ಷಗಳ ನಂತರ ಪತ್ತೆಯಾದರು ಕೊಲೆಗೆ ಯತ್ನಿಸಿದ್ದ ಆರೋಪಿಗಳು
ಮೈಸೂರು,ಸೆಪ್ಟೆಂಬರ್ 3: ಎಂಟು ವರ್ಷಗಳ ಹಿಂದೆ ನಡೆದ ಕೊಲೆ ಯತ್ನದ ಆರೋಪಿಗಳನ್ನು ಬಂಧಿಸುವಲ್ಲಿ ದೇವರಾಜ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
2012ರಲ್ಲಿ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿ ದುರ್ಗಮ್ಮನ ಗುಡಿ ರಸ್ತೆಯ ಕ್ರಾಸ್ ನಲ್ಲಿ ಸಂಜೆ ವೇಳೆ ರಸ್ತೆಯ ಬದಿ ನಡೆದುಕೊಂಡು ಹೋಗುತ್ತಿದ್ದ ಟಿಬೇಟಿಯನ್ ಮೂಲದ ತನ್ ಜಿನ್ ದರ್ ಗ್ಯಾಲ್ ಎಂಬ 23 ವರ್ಷದ ಯುವಕನಿಗೆ ಹಿಂಬದಿಯಿಂದ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಡ್ರ್ಯಾಗರ್ ನಿಂದ ಬೆನ್ನಿಗೆ ಚುಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ್ದರು ಎಂದು ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೇವರಾಜ ಠಾಣಾ ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದರು. ಇದು ಸೂಕ್ಷ್ಮ ಪ್ರಕರಣವಾಗಿದ್ದರಿಂದ ಆರೋಪಿಗಳ ಪತ್ತೆ ಸಂಬಂಧ ಸಿಸಿಬಿ ಘಟಕ ಮೈಸೂರಿಗೆ ಪ್ರಕರಣವನ್ನು ವರ್ಗಾಯಿಸಿ ತನಿಖೆ ಕೈಗೊಂಡಿದ್ದು ಸಿಸಿಬಿಯವರು ಎಲ್ಲಾ ಪ್ರಯತ್ನ ಮಾಡಿದರೂ ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಪ್ರಕರಣವನ್ನು ಮುಕ್ತಾಯ ಮಾಡಲಾಗಿತ್ತು.

ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಪತ್ತೆಯಾಗದ ಹಳೆಯ ಪ್ರಕರಣಗಳ ಕುರಿತು ಕಾಳಜಿ ವಹಿಸಿ ಯಾವುದೇ ಕುರುಹು ಇಲ್ಲದ ಈ ಪ್ರಕರಣವನ್ನು ಪತ್ತೆ ಹಚ್ಚಲು ದೇವರಾಜ ಪಿಐ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು. ತಂಡವು ಆರೋಪಿಗಳ ಪತ್ತೆ ಬಗ್ಗೆ ಮಾಹಿತಿ ಕಲೆಹಾಕಿ ಆರೋಪಿಗಳಾದ ಗಾಂಧೀನಗರ ನಿವಾಸಿ ಸಲೀಂಪಾಷ ಬಿನ್ ರಫೀಕ್ ಅಹ್ಮದ್(28), ಎನ್ ಆರ್ ಮೊಹಲ್ಲಾ ರಸ್ತೆ ನಿವಾಸಿ ಸಲ್ಮಾನ್ ಪಾಷ ಬಿನ್ ಲೇಟ್ ಮುಕ್ತಾರ ಪಾಷ(29), ಲಷ್ಕರ್ ಮೊಹಲ್ಲಾ ನಿವಾಸಿ ಇಸ್ಮಾಯಿಲ್ ಖಾನ್ ಅಲಿಯಾಸ್ ಹಲೀಂ ಬಿನ್ ಅಬ್ದುಲ್ ರಹೀಂಖಾನ್ (32) ಎಂಬವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇವರನ್ನು ವಿಚಾರಣೆಗೊಳಪಡಿಸಲಾಗಿ ಕೃತ್ಯವೆಸಗಿರುವ ಕುರಿತು ತಪ್ಪೊಪ್ಪಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಕೃತ್ಯ ನಡೆಸಿದ ನಂತರ ಇವರು ಬೆಂಗಳೂರು ಮತ್ತು ದುಬೈನಲ್ಲಿ ಕೆಲವು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದರೆನ್ನಲಾಗಿದೆ. 8 ವರ್ಷದ ಹಳೆಯ ಕೊಲೆ ಯತ್ನ ಪ್ರಕರಣ ಇದೀಗ ಬಯಲಾಗಿದೆ.












Click it and Unblock the Notifications