ಮೈಸೂರಿನಲ್ಲಿ ಸಲೂನ್ ಮಾಲೀಕನ ಕೊಲೆ; ಏಳು ಜನರ ಬಂಧನ
ಮೈಸೂರು, ಜೂನ್ 22: ಯುವ ಉದ್ಯಮಿಯೊಬ್ಬರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪಾರಿ ಪಡೆದಿದ್ದ 7 ಜನ ಆರೋಪಿಗಳನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಕೃತ್ಯಕ್ಕೆ ಬಳಸಿದ್ದ ವಾಹನ ಮತ್ತು ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.
ಇದೇ ತಿಂಗಳ 17ನೇ ತಾರೀಖು ಬೆಳಗ್ಗೆ 10:30ಕ್ಕೆ ಯುವ ಉದ್ಯಮಿ ಅಶ್ರಿತ್ ಎಂಬ ವ್ಯಕ್ತಿ ವಿಜಯನಗರದ 4ನೇ ಹಂತದಲ್ಲಿ ಟೀ ಕುಡಿಯಲು ಬೈಕ್ನಲ್ಲಿ ಬರುತ್ತಿದ್ದಾಗ ಆತನ ಬೈಕಿಗೆ ಡಿಕ್ಕಿ ಹೊಡೆದ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳ ಪತ್ತೆಗಾಗಿ ಎರಡು ವಿಶೇಷ ತಂಡ ರಚಿಸಿದ್ದರು.
ಕೊಲೆಯಾದ ಅಶ್ರಿತ್ ಈ ಹಿಂದೆ ರಾಜಾರಾಮ್ ಎಂಬ ವ್ಯಕ್ತಿಯ ಬಳಿ ಹೇರ್ ಮತ್ತು ಸ್ಕಿನ್ ಸಲೂನ್ನಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರ ನಡುವೆ ವೈಷಮ್ಯ ಉಂಟಾದ ಕಾರಣ ಅಶ್ರಿತ್ ಬೇರೆ ಸಲೂನ್ ತೆರೆದಿದ್ದ. ಇದರಿಂದ ಆಕ್ರೋಶಿತನಾದ ರಾಜಾರಾಮ್ ಒಳಗೊಳಗೇ ದ್ವೇಷ ಕಾರುತ್ತಿದ್ದ. ನಂತರ ಅಶ್ರಿತ್ನನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದಾನೆ.

ಹಂತಕರು ಜೂನ್ 17ರಂದು ಅಶ್ರಿತ್ನನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಅದರಲ್ಲಿ ಪ್ರಮುಖ ಆರೋಪಿಯಾಗಿರುವ ರಾಜಾರಾಮ್ ತಲೆ ಮರೆಸಿಕೊಂಡಿದ್ದು, ಉಳಿದ ಹಂತಕರಾದ ನವೀನ್, ಅಶೋಕ್, ಪ್ರಶಾಂತ್, ಜಾನಿ, ದಿನೇಶ್, ಮಹೇಶ್ ಮತ್ತು ಮುಬಾರಕ್ ಎಂಬ 7 ಬೆಂಗಳೂರು ಮೂಲದ ಸುಪಾರಿ ಹಂತಕರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 2 ಬೈಕ್, 1 ಕಾರ್, 1 ಚಾಕುವನ್ನು ವಶಪಡಿಸಕೊಳ್ಳಲಾಗಿದೆ. ಪೊಲೀಸರು ಪ್ರಮುಖ ಆರೋಪಿ, ಸುಪಾರಿ ನೀಡಿದ ರಾಜಾರಾಮ್ ಪತ್ತೆಗಾಗಿ ಬಲೆ ಬೀಸಿ, ತನಿಖೆ ಕೈಗೊಂಡಿದ್ದಾರೆ.












Click it and Unblock the Notifications