ಮೈಸೂರಿನ ಕಲಾಮಂದಿರದಲ್ಲಿ ಪಾರ್ಶ್ವ ಸಂಗೀತ ನಾಟಕ ಪ್ರದರ್ಶನ
ಮೈಸೂರು, ಜೂನ್ 27: ನಗರದ ಕಲಾಮಂದಿರದಲ್ಲಿ ಪಾರ್ಶ್ವಸಂಗೀತ ನಾಟಕ ಪ್ರದರ್ಶನ ಜೂನ್ 29ರಿಂದ ಜುಲೈ 1ರವರೆಗೆ ಪ್ರತಿ ದಿನ ಸಂಜೆ 7 ಗಂಟೆಗೆ ನಡೆಯಲಿದೆ.
ಸಾಹಿತಿ ಶ್ರೀನಿವಾಸವೈದ್ಯ ಅವರ ಬರಹಗಳನ್ನಾಧರಿಸಿದ ಪಾರ್ಶ್ವ ಸಂಗೀತ ನಾಟಕವನ್ನು ರಂಗವಲ್ಲಿ ನಾಟಕ ತಂಡವು ಪ್ರಸ್ತುತಪಡಿಸುತ್ತಿದೆ. ರಂಗಾಯಣದ ಹಿರಿಯ ಕಲಾವಿದ ಪ್ರಶಾಂತ್ ಹಿರೇಮಠ ನಾಟಕವನ್ನು ನಿರ್ದೇಶಿಸಿದ್ದಾರೆ.
ನಾಟಕ ಕುರಿತು: ಪಾರ್ಶ್ವ ಸಂಗೀತ ನಾಟಕವು ರ ದಶಕದಿಂದ 70ರ ದಶಕಗಳವರೆಗಿನ ಆದರೆ ಇಂದಿಗೂ ಜನಮಾನಸದಲ್ಲಿ ಉಳಿದಿರುವ ಹಿಂದಿ ಚಿತ್ರಗೀತೆಗಳೊಂದಿಗಿನ ನಮ್ಮ ಅವಿನಾಭಾವ ಸಂಬಂಧವನ್ನು ತೆರೆದಿಡುತ್ತದೆ. ಅಂದಿನ ಕಾಲದ ಅದ್ಭುತ ಹಾಡುಗಳು, ಸಂಗೀತ ನಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ.
ಹಿಂದಿ ಗಾನಲೋಕದಲ್ಲಿ ದಂತಕತೆಗಳೆನಿಸಿದ ಕೆ.ಎಲ್.ಸೈಗಲ್, ತಲತ್ ಮಹಮೂದ್, ಮಹಮದ್ ರಫಿ, ಕಿಶೋರ್ಕುಮಾರ್, ಶಂಶಾದ್ ಬೇಗಂ, ಲತಾ ಮಂಗೇಶ್ಕರ್, ಮನ್ನಾಡೇ ಮುಂತಾದವರ ಸುಶ್ರಾವ್ಯ ಕಂಠ ನಮ್ಮ ಹೃದಯದ ತಂತಿಗಳನ್ನು ಮೀಟಿ ಭಾವತರಂಗಗಳನನ್ನು ಎಬ್ಬಿಸುವ ಪರಿಯನ್ನು ಈ ನಾಟಕದ ಮೂಲಕ ಕಟ್ಟಿಕೊಡಲಾಗಿದೆ.
ಈ ನಾಟಕದ ನಿರೂಪಕ ತನ್ನ ಬಾಲ್ಯದ ಅನುಭವದ ಮೂಲಕ ಆ ಕಾಲದ ಹಿಂದಿ ಚಿತ್ರ ಸಂಗೀತದ ಸುವರ್ಣ ಯುಗವನ್ನು ನೆನಪಿಸಿಕೊಳ್ಳುತ್ತಾನೆ. ಅಪ್ರತಿಮ ಚಿತ್ರಪ್ರೇಮಿಯಾದ ತನ್ನ ಚಿಕ್ಕಪ್ಪನ ಜೀವನಗಾಥೆಯನ್ನು ಪ್ರೇಕ್ಷಕರೆದುರು ಹರವಿಡುತ್ತಾನೆ.
ಸುಮಾರು 25ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿರುವ ಈ ನಾಟಕದ ರಂಗರೂಪ-ಬಿ.ಪಿ.ಅರುಣ್. ಸಂಗೀತ ನಿರ್ವಹಣೆ -ವಿಶ್ವಾಸ್ ಕೃಷ್ಣ, ರಂಗವಿನ್ಯಾಸ-ಹೆಚ್.ಕೆ.ದ್ವಾರಕಾನಾಥ್ ಬೆಳಕಿನ ವಿನ್ಯಾಸ-ಕೃಷ್ಣಕುಮಾರ್ ನಾರ್ಣಕಜೆ, ವಸ್ತ್ರವಿನ್ಯಾಸ-ನಂದಿನಿ ಕೆ.ಆರ್., ನೃತ್ಯಸಂಯೋಜನೆ-ಕಾರ್ತಿಕ್ ಉಪಮನ್ಯು, ರಂಗನಿರ್ವಹಣೆ-ಸೀಮಂತಿನಿ ಬಿ., ಮಹೇಶ್ ಕುಮಾರ್ ಸಹ-ನಿರ್ದೇಶನ ನೀಡಿದ್ದಾರೆ.