ಮೈಸೂರು: ಕೊರಿಯರ್ ಪಾರ್ಸೆಲ್ ಗಳನ್ನೇ ಹೊತ್ತೊಯ್ದ ಖದೀಮರು !
ಮೈಸೂರು: ಅತ್ಯಾಚಾರಿಗೆ 10 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿದ ಮೈಸೂರು ನ್ಯಾಯಾಲಯ. ಮತ್ತೊಂದು ಪ್ರಕರಣದಲ್ಲಿ ಕೊರಿಯರ್ ಪಾರ್ಸೆಲ್ ಗಳನ್ನು ಹೊತ್ತೊಯ್ದ ಕಳ್ಳರು.
ಮೈಸೂರು, ಆಗಸ್ಟ್ 26 : ಮೈಸೂರಿನಲ್ಲಿ ಇಂದು ಬೆಳ್ಳಂ ಬೆಳಿಗ್ಗೆಯೇ ಕಳ್ಳರು ಕೈಚಳಕ ತೋರಿದ್ದು, ಕೊರಿಯರ್ ಸಂಸ್ಥೆಗೆ ಸೇರಿದ ಪಾರ್ಸಲ್ ಗಳನ್ನ ಖದೀಮರು ಹೊತ್ತೊಯ್ದಿದ್ದಾರೆ.
ಮೈಸೂರಿನ ಚಾಮುಂಡಿಪುರಂ ಮೊದಲನೇ ಮೇನ್ ನಲ್ಲಿ ಈ ಘಟನೆ ನಡೆದಿರುವುದು. ಕಳ್ಳತನವಾಗಿರುವ ಪಾರ್ಸಲ್ ಗಳು ಬ್ಲೂಡಾರ್ಟ್ ಕೊರಿಯರ್ ಸಂಸ್ಥೆಗೆ ಸೇರಿದ ಪಾರ್ಸಲ್ ಗಳಾಗಿವೆ. ಗ್ರಾಹಕರಿಗೆ ಸರಬರಾಜು ಮಾಡುವ ಗೂಡ್ಸ್ ಆಟೋದಲ್ಲಿ ಇರಿಸಲಾಗಿದ್ದ ಪಾರ್ಸಲ್ ಗಳನ್ನ ಕಳ್ಳರು ಲಪಟಾಯಿಸಿದ್ದಾರೆ ಎನ್ನಲಾಗಿದೆ.

ಪತ್ನಿ ನೇಣಿಗೆ ಶರಣು: ಪತಿಯ ದೈಹಿಕ ಮತ್ತು ಮಾನಸಿಕ ಹಿಂಸೆ ತಾಳಲಾರದೇ ಗೃಹಿಣಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ಇಂದು ನಡೆದಿದೆ.
ಮೃತರನ್ನು ನಂಜನಗೂಡು ಮೂಲದ ನಿವಾಸಿ ಗಾಯತ್ರಿ(30)ಎಂದು ಹೇಳಲಾಗಿದೆ. ಈಕೆಗೆ ಶಿವಕುಮಾರ್ ಜೊತೆ ಹದಿಮೂರು ವರ್ಷಗಳ ಹಿಂದೆ ವಿವಾಹವಾಗಿತ್ತು. ಸರಸ್ವತಿಪುರಂ ಠಾಣಾ ವ್ಯಾಪ್ತಿಯಲ್ಲಿನ ಆನಂದನಗರದಲ್ಲಿ ಮನೆಯೊಂದನ್ನು ಭೋಗ್ಯಕ್ಕೆ ಪಡೆದು ಪತಿ ಪತ್ನಿ ವಾಸಿಸುತ್ತಿದ್ದರು. ಆದರೆ ಪತಿ ಶಿವಕುಮಾರ್ ಪದೇ ಪದೇ ಪತ್ನಿಗೆ ತವರಿನಿಂದ ಹಣ ತರುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.
ತುಂಬಾ ಸಲ ಹಣ ತಂದು ಕೊಟ್ಟಿದ್ದಾರೆ. ಆದರೆ ಇತ್ತೀಚೆಗೆ ಪತಿಗೆ ಅಕ್ರಮ ಸಂಬಂಧವಿರುವ ಕುರಿತು ತಿಳಿದು ಬಂದಿತ್ತು. ಪತಿ ನೀಡುವ ಹಿಂಸೆ ಮತ್ತು ಆತನ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಮನನೊಂದು ನೇಣಿಗೆ ಶರಣಾಗಿದ್ದಾರೆ. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರಿಗೆ 10 ವರ್ಷ ಸಜೆ: ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆ ಪ್ರಕರಣದ ಆರೋಪಿಗೆ ಮೈಸೂರಿನ 6ನೇ ಎ.ಡಿ.ಜೆ. ನ್ಯಾಯಾಲಯವು 10 ವರ್ಷ ಕಠಿಣ ಸಜೆ ಮತ್ತು 10 ಸಾವಿರ ರು. ದಂಡ ವಿಧಿಸಿದೆ.
ಮೈಸೂರಿನ ರಾಘವೇಂದ್ರ ನಗರ ನಿವಾಸಿ 45 ವರ್ಷದ ಮುನೀರ್ ಬಿನ್ ಬಾಬುಸಾಬ್ ಎಂಬುವನ ಮೇಲೆ ಕಳೆದ ವರ್ಷ (2016) ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣದ ದೂರು ದಾಖಲಾಗಿತ್ತು.
ನಜರ್ ಬಾದ್ ಪೊಲೀಸರು ಪ್ರಕರಣದಲ್ಲಿ ಉತ್ತಮ ತನಿಖೆ ಕೈಗೊಂಡು ಸೂಕ್ತ ಸಾಕ್ಷ್ಯ ಸಂಗ್ರಹಿಸಿ ಆರೋಪಿಯ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆ ಶಿಕ್ಷೆ ಪ್ರಕಟಗೊಂಡಿದೆ.












Click it and Unblock the Notifications