ದಸರಾ; ಆನೆ ಘೀಳಿಡುವ ಶಬ್ದಕ್ಕೆ ಬೆದರಿದ ಪಲ್ಲಕ್ಕಿ ಎತ್ತುಗಳು
ಮೈಸೂರು, ಅಕ್ಟೋಬರ್ 26: ವಿಜಯದಶಮಿ ಹಿನ್ನೆಲೆಯಲ್ಲಿ ರಾಜವಂಶಸ್ಥ ಯದುವೀರ್ ವಿಜಯಯಾತ್ರೆಯ ವೇಳೆ ಪಲ್ಲಕ್ಕಿಗೆ ಕಟ್ಟಿದ್ದ ಎತ್ತುಗಳು ಆನೆ ಘೀಳಿಡುವ ಶಬ್ದಕ್ಕೆ ಹೆದರಿ ಹೌಹಾರಿದ ಘಟನೆ ನಡೆದಿದೆ.
ಇಂದು ಅರಮನೆಯಿಂದ ವಿಜಯಯಾತ್ರೆ ಸಂದರ್ಭದಲ್ಲಿ ಆನೆ, ಕುದುರೆ, ಒಂಟೆಗಳು ಭುವನೇಶ್ವರಿ ದೇವಾಲಯದ ಹತ್ತಿರ ಇರುವ ಶಮಿ ಮರದ ಹತ್ತಿರ ಮೆರವಣಿಗೆ ಹೊರಟಿದ್ದವು. ಈ ಸಂದರ್ಭ ಆನೆ ಘೀಳಿಟ್ಟಿದ್ದು, ಆ ಶಬ್ದಕ್ಕೆ ಪಲ್ಲಕ್ಕಿಯಲ್ಲಿ ಕಟ್ಟಿದ್ದ ಎತ್ತುಗಳು ಗಾಬರಿಗೊಂಡು ಹೌಹಾರಿವೆ. ಆನಂತರ ಎತ್ತುಗಳನ್ನು ಸಮಾಧಾನಗೊಳಿಸಿದ್ದಾರೆ. ಕೂಡಲೇ ಪಲ್ಲಕ್ಕಿಯಿಂದ ಎತ್ತುಗಳನ್ನು ಬಿಡಿಸಿ ಅಲ್ಲಿದ್ದವರೇ ಪಲ್ಲಕ್ಕಿಯನ್ನು ಎಳೆದುಕೊಂಡು ಬಂದರು.
ಈ ಬಾರಿ ಯದುವೀರ್ ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳದೆ ಕಾರಿನಲ್ಲಿ ಶಮಿ ಮರದ ಹತ್ತಿರ ಬಂದರು.

ಈ ಬಾರಿ ಸರಳ ದಸರಾ ಆಚರಣೆ ಹಿನ್ನೆಲೆಯಲ್ಲಿ ಅರಮನೆ ಆವರಣದೊಳಗೆ ಕೇವಲ ಮುನ್ನೂರು ಮಂದಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಜಂಬೂಸವಾರಿ ವೀಕ್ಷಣೆಗೆ ಅಂಬಾವಿಲಾಸ ಅರಮನೆ ಮುಂಭಾಗದಲ್ಲಿ ಸಿದ್ಧತೆ ಮಾಡಲಾಗಿದೆ. ಮೆರವಣಿಗೆ ವೀಕ್ಷಣೆಗಾಗಿ ಕುರ್ಚಿ, ಶಾಮಿಯಾನ ವ್ಯವಸ್ಥೆ, ಜಂಬೂಸವಾರಿಗೆ ತೆರಳುವ ಎಡ ಮತ್ತು ಬಲ ಭಾಗಗಳಲ್ಲಿ ಆಸನ ವ್ಯವಸ್ಥೆ, ಗಣ್ಯರಿಗೆ ಜನಪ್ರತಿನಿಧಿಗಳಿಗೆ ಕೂರಲು ಪ್ರತ್ಯೇಕ ಆಸನ ವ್ಯವಸ್ಥೆಯನ್ನು ಮಾಡಲಾಗಿದೆ.












Click it and Unblock the Notifications