"ಕೊರೊನಾ ವೈರಸ್ ನಿಯಂತ್ರಣಕ್ಕೆ ವಿಪಕ್ಷದಿಂದ ಒಂದಿಂಚೂ ಸಹಕಾರ ಸಿಗುತ್ತಿಲ್ಲ''
ಮೈಸೂರು, ಜುಲೈ 15: ಕೊರೊನಾ ವೈರಸ್ ನಿಯಂತ್ರಣ ವಿಷಯದಲ್ಲಿ ವಿರೋಧ ಪಕ್ಷದವರು ಕೇವಲ ಆರೋಪ ಮಾಡುತ್ತಿದ್ದಾರೆ ಹೊರತು, ಅವರಿಂದ ಸ್ವಲ್ಪವೂ ಸಹಕಾರ ಸಿಗುತ್ತಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಆರೋಪಿಸಿದರು.
Recommended Video
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಲೆಕ್ಕ ಕೇಳುತ್ತಿರುವ ಪ್ರತಿಪಕ್ಷಗಳು, ಇದು ಆರೋಪ ಮಾಡುವ ಸಮಯವಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕೊರೊನಾ ಲೆಕ್ಕ ಕೊಡಿ ಎನ್ನುತ್ತಿರುವ ಸಿದ್ದರಾಮಯ್ಯ ಅವರ ಮನೆ ಬಾಗಿಲಿಗೆ ಲೆಕ್ಕ ತಲುಪಿಸುತ್ತೇವೆ ಎಂದರು.
ರಾಜ್ಯ ಸರ್ಕಾರ 2-3 ಸಾವಿರ ಕೋಟಿ ರೂ. ಅವ್ಯವಹಾರ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ನಾವು ಅಷ್ಟು ಹಣ ಖರ್ಚು ಸಹ ಮಾಡಿಲ್ಲ. ಈವರೆಗೆ ರಾಜ್ಯ ಸರ್ಕಾರ ಬಳಸಿರೋದು 450 ರಿಂದ 500 ಕೋಟಿ ರೂ. ಅಷ್ಟೇ. ಹೀಗಿರುವಾಗ 2-3 ಸಾವಿರ ಕೋಟಿ ರೂ.ಗಳಿಗೆ ಎಲ್ಲಿಂದ ಲೆಕ್ಕ ಕೊಡಬೇಕು ಎಂದು ಮರು ಪ್ರಶ್ನೆ ಹಾಕಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹಾಸಿಗೆ, ಹೊದಿಕೆ ಬಾಡಿಗೆ ವಿಚಾರದಲ್ಲಿ ಅವ್ಯವಹಾರ ಆಗಿದೆ ಎನ್ನುತ್ತಾರೆ. ಆದರೆ ಹಾಸಿಗೆ, ಬಕೆಟ್, ಜಗ್ಗು ಮುಂತಾದ ಮರು ಬಳಕೆಯಾಗುವ ವಸ್ತುಗಳನ್ನು ಖರೀದಿ ಮಾಡಲು ನಿರ್ಧರಿಸಿದ್ದೇವೆ.
ಭವಿಷ್ಯದಲ್ಲಿ ಅವುಗಳನ್ನು ಸ್ಯಾನಿಟೈಸ್ ಮಾಡಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೊಡುತ್ತೇವೆ. ಇದರ ಹೊರತು ಡಿ.ಕೆ ಶಿವಕುಮಾರ್ ಹೇಳುವಂತೆ ಯಾರಿಗೂ ನಾವು ಬಾಡಿಗೆ ಕೊಟ್ಟಿಲ್ಲ. ಇವೆಲ್ಲದರ ನಡುವೆಯೂ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಕಡಿಮೆಯಾದ ಬಳಿಕ ಇಂಚಿಂಚೂ ಲೆಕ್ಕ ಕೊಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.












Click it and Unblock the Notifications