ಆಪರೇಷನ್ ಬಿಜೆಪಿ ವರ್ಕೌಟ್ ಆಗಿಲ್ಲ – ಜಿ ಪರಮೇಶ್ವರ್
ನಂಜನಗೂಡು ಮತ್ತು ಗುಂಡ್ಲುಪೇಟೆ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತೆ ಎಂದು ಮೊದಲೇ ಹೇಳಿದ್ದೆ . ಅದರಂತೆ ಗೆದ್ದಿದ್ದೇವೆ ಎಂದು ಭರ್ಜರಿ ಗೆಲುವಿನ ನಂತರ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹೇಳಿದ್ದಾರೆ.
ತುಮಕೂರು, ಏಪ್ರಿಲ್ 13: ನಂಜನಗೂಡು , ಗುಂಡ್ಲುಪೇಟೆ ಉಪಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ ಜಿ ಪರಮೇಶ್ವರ್ ಆಪರೇಷನ್ ಬಿಜೆಪಿ ವರ್ಕೌಟ್ ಆಗಿಲ್ಲ ಎಂದು ಹೇಳಿದ್ದಾರೆ.
ನಂಜನಗೂಡು ಮತ್ತು ಗುಂಡ್ಲುಪೇಟೆ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತೆ ಎಂದು ಮೊದಲೇ ಹೇಳಿದ್ದೆ . ಅದರಂತೆ ಗೆದ್ದಿದ್ದೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.[ನಂಜನಗೂಡಲ್ಲಿ ಕಾಂಗ್ರೆಸಿಗೆ ಭರ್ಜರಿ ಗೆಲುವು, ಮುಗ್ಗರಿಸಿದ ಬಿಜೆಪಿ]
ನಮ್ಮ ಸರಕಾರ ಮಾಡಿರುವ ಅಭಿವೃದ್ಧಿ ಕೆಲಸಗಳಿಗೆ ಜನ ಮತ ಹಾಕಿದ್ದಾರೆ. ಎರಡೂ ಕ್ಷೇತ್ರದ ಮತದಾರರಿಗೆ ನಾನು ಅಭಿನಂದನೆಗಳನ್ನು ತಿಳಿಸುತ್ತೇನೆ.ಈ ಗೆಲುವಿನಲ್ಲಿ ಪಕ್ಷದ ಎಲ್ಲರ ಸಹಕಾರವಿದೆ. ಅವರೆಲ್ಲರಿಗೂ ಧನ್ಯವಾದಗಳನ್ನು ಹೇಳಿದರು.[ಎರಡು ಬಾರಿ ಸೋತು ಗೆದ್ದ ಕಳಲೆ ಕೇಶವಮೂರ್ತಿ ಯಾರು?]
ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಹೀನಾಯ ಸೋಲು ಕಂಡಿದೆ. ಉಪ ಚುನಾವಣೆಯ ಫಲಿತಾಂಶದ ಬಗ್ಗೆ ರಾಜಕೀಯ ನಾಯಕರು ನೀಡಿರುವ ಪ್ರತಿಕ್ರಿಯೆಗಳು ಇಲ್ಲಿವೆ.

2018ರಲ್ಲೂ ಗೆಲುವು ನಮ್ಮದೇ
ನಮ್ಮ ಸರ್ಕಾರದ ಮೇಲಿನ ಬಿಜೆಪಿ ಆರೋಪಕ್ಕೆ ಜನರೇ ಉತ್ತರ ನೀಡಿದ್ದಾರೆ. ಆಪರೇಷನ್ ಬಿಜೆಪಿ ವರ್ಕೌಟ್ ಆಗಿಲ್ಲ ಎಂದು ಕಾಣಿಸುತ್ತಿದೆ. 2018ರ ಚುನಾವಣೆಯಲ್ಲೂ ನಾವೇ ಗೆಲುವು ಸಾಧಿಸುತ್ತೇವೆ ಎಂದು ಪರಮೇಶ್ವರ್ ಹೇಳಿದರು.

ಕಾರ್ಯಕರ್ತರ ಶ್ರಮದಿಂದ ಗೆಲುವು - ಖಾದರ್
ಮಹದೇವ್ ಪ್ರಸಾದ್ ಕೆಲಸ, ಕಾರ್ಯಕರ್ತರ ಶ್ರಮದಿಂದಾಗಿ ಗುಂಡ್ಲುಪೇಟೆಯಲ್ಲಿ ನಾವು ಗೆಲುವು ಕಂಡಿದ್ದೇವೆ. ನಮ್ಮ ಕಾರ್ಯಕರ್ತರು ಕುಟುಂಬದ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಸಿಎಂ ಕ್ಷೇತ್ರದ ಉದ್ದಗಲಕ್ಕೂ ಹಗಲಿರುಳು ತೆರಳಿ ಪ್ರಚಾರ ನಡೆಸಿದ್ದಾರೆ. ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯುಟಿ ಖಾದರ್ ಹೇಳಿದ್ದಾರೆ.

ಮೋಸ ಮಾಡಿದ್ರೆ ಜನ ಬಿಡಲ್ಲ
ಚುನಾವಣೆ ಪ್ರಾರಂಭದ ದಿನದಿಂದಲೂ ಬಿಜೆಪಿ ಅಪಪ್ರಚಾರದ ಮೂಲಕವೇ ಪ್ರಚಾರ ನಡೆಸಿತ್ತು. ಇಲ್ಲಿನ ಜನರು ಮುಗ್ದರು, ಅವರನ್ನು ಮೋಸ ಮಾಡಿದರೆ ಜನ ಸುಮ್ಮನೇ ಬಿಡುವುದಿಲ್ಲ. ಉಪಚುನಾವಣೆಯೇ ನಮ್ಮ ಮುಂದಿನ ಚುನಾವಣೆಯ ಗೆಲುವಿಗೆ ದಿಕ್ಸೂಚಿ ಎಂದು ಯುಟಿ ಖಾದರ್ ಹೇಳಿದ್ದಾರೆ. ಇನ್ನು ಗೀತಾ ಮಹದೇವ್ ಪ್ರಸಾದ್ ಗೆ ಸಚಿವ ಸ್ಥಾನ ನೀಡಿಕೆ ವಿಚಾರದ ಕುರಿತು
ಇನ್ನು ಯೋಚಿಸಿಲ್ಲ. ಅವರಿಗೆ ಮಂತ್ರಿ ಸ್ಥಾನ ನೀಡಿದರೆ ನನಗೆ ಖುಷಿ. ಈ ಕುರಿತಾಗಿ ನಾನು ಸಿಎಂ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಹಣ ನೀಡಿ ಕಾಂಗ್ರೆಸ್ ಗೆದ್ದಿದೆ - ಶೆಟ್ಟರ್
ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶದ ಕುರಿತು ಬಿಜೆಪಿ ಪಕ್ಷದ ಹಿರಿಯ ಮುಖಂಡ ಜಗದೀಶ್ ಶೆಟ್ಟರ್ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ' ಕಾಂಗ್ರೆಸ್ ಹಣದ ಹೊಳೆ ಹರಿಸಿ ಗೆದ್ದಿದೆ. ಉಪಚುನಾವಣೆಯಲ್ಲಿ ಆಡಳಿತ ಪಕ್ಷ ಗೆಲ್ಲುವುದು ಸಾಮಾನ್ಯ. 2018 ರ ಚುನಾವಣೆಗೆ ಇದು ದಿಕ್ಸೂಚಿಯಲ್ಲ' ಎಂದು ಹೇಳಿದ್ದಾರೆ.

ಶ್ರೀನಿವಾಸ್ ಪ್ರಸಾದ್ ಗೆ ಸೂಕ್ತ ಸ್ಥಾನಮಾನ
"ನಾವು ಮುಂದೆಯೂ ಯಡಿಯೂರಪ್ಪ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಶ್ರೀನಿವಾಸ ಪ್ರಸಾದ್ ಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗಲಿದೆ. ಶ್ರೀನಿವಾಸ್ ಪ್ರಸಾದ್ ಹಿರಿಯ ಮುತ್ಸದ್ದಿ," ಎಂದು ಶೆಟ್ಟರ್ ಹೇಳಿದರು. ನಂತರ ಶೆಟ್ಟರ್ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು.
ಪೇಜಾವರಶ್ರೀ ಜೊತೆಯೂ ಮಾತುಕತೆಯನ್ನು ನಡೆಸಿದರು.

ಸೈನಿಕರಂತೆ ದುಡಿದ ಕಾರ್ಯಕರ್ತರು
ಕಾಂಗ್ರೆಸ್ ಕಾರ್ಯಕರ್ತರು ಸೈನಿಕರಂತೆ ದುಡಿದಿದ್ದಾರೆ. ಈ ಚುನಾವಣೆಯನ್ನು ಕಾಂಗ್ರೆಸ್ ಸ್ವಾಭಿಮಾನ, ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು. ಮಹಿಳೆಗೆ ಅವಮಾನ ಮಾಡಿದ ಶಾಪ ಎಂದಿಗೂ ತಟ್ಟದೇ ಬಿಡುವುದಿಲ್ಲ. ಗೆಲುವಿನಲ್ಲಿ ಸಚಿವ ಹೆಚ್.ಸಿ ಮಹದೇವಪ್ಪ , ಸಂಸದ ಧ್ರುವನಾರಾಯಣ್ ಪರಿಶ್ರಮ ಅತೀವವಾಗಿದೆ ಎಂದು ಮಂಜುಳಾ ಮಾನಸ ಹೇಳಿದ್ದಾರೆ.












Click it and Unblock the Notifications