ಭರಚುಕ್ಕಿ ಅರಣ್ಯದಲ್ಲಿ ಕಾಡ್ಗಿಚ್ಚು, ಕ್ಯಾರೆ ಎನ್ನದ ಸಿಬ್ಬಂದಿ!
ಮೈಸೂರು, ಮಾರ್ಚ್ 15 : ಬಿರು ಬಿಸಿಲಿಗೆ ಕುರುಚಲು ಕಾಡುಗಳು ಒಣಗಿ ನಿಂತಿರುವುದರಿಂದ ಚಿಕ್ಕ ಕಿಡಿ ಬಿದ್ದರೂ ಸಾಕು ಕ್ಷಣಾರ್ಧದಲ್ಲಿ ಹೊತ್ತಿ ಉರಿದು ಬಿಡುತ್ತದೆ. ಆದ್ದರಿಂದ ಅರಣ್ಯ ಇಲಾಖೆ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು.
ಕೆಲವೊಮ್ಮೆ ಬೆಂಕಿ ಬಿದ್ದು ಹೊತ್ತಿ ಉರಿಯುತ್ತಿದ್ದರೂ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೈಚೆಲ್ಲುವ ಸಿಬ್ಬಂದಿಗಳಿಗೇನು ಕೊರತೆಯಿಲ್ಲ. ಇದೇ ರೀತಿ ಭಾನುವಾರ ಕೊಳ್ಳೇಗಾಲದ ಭರಚುಕ್ಕಿ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ಜಲಪಾತ ನೋಡಲು ಹೋಗಿದ್ದ ಕೆಲವರು ಈ ಕುರಿತು ಮಾಹಿತಿ ನೀಡಿದ್ದಾರೆ.
ಭರಚುಕ್ಕಿ ವ್ಯಾಪ್ತಿಯಲ್ಲಿ ಕಾಡ್ಗಿಚ್ಚಿಗೆ ಅರಣ್ಯ ಹೊತ್ತಿ ಉರಿಯುತ್ತಿದ್ದರಿಂದ ಇಡೀ ಪ್ರದೇಶ ದಟ್ಟ ಹೊಗೆಯಿಂದ ಕೂಡಿತ್ತು. ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಬರಬಹುದೆಂದು ಕಾದವರಿಗೆ ಯಾರೂ ಬರಲಿಲ್ಲ. ಇನ್ನು ಚೆಕ್ಪೋಸ್ಟ್ನಲ್ಲಿ ಬೀಡು ಬಿಟ್ಟು ಪ್ರವಾಸಿಗರಿಂದ ಸುಂಕ ವಸೂಲಿ ಮಾಡುತ್ತಿದ್ದ ಸಿಬ್ಬಂದಿ ತಮಗೆ ಸಂಬಂಧವೇ ಇಲ್ಲವೇನೋ ಎಂಬಂತೆ ಶುಲ್ಕ ವಸೂಲಿಯಲ್ಲಿ ನಿರತರಾಗಿದ್ದರು.

ಕೆಲವೊಂದು ತಾಂತ್ರಿಕ ಅಡಚಣೆಗಳು ಎಂತಹ ಪರಿಸ್ಥಿತಿಗೆ ತಂದೊಡ್ಡುತ್ತವೆ ಎಂದರೆ ಚೆಕ್ಪೋಸ್ಟ್ನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಕೆಲವರು ಮಾಹಿತಿ ನೀಡಿದರಾದರೂ, ಕಾಡ್ಗಿಚ್ಚು ಬಿದ್ದಿರುವುದು ಚೆಕ್ಪೋಸ್ಟ್ನಿಂದ ಆಚೆಗಿದ್ದು ಅದು ಕಾವೇರಿ ವನ್ಯಜೀವಿ ಪ್ರದೇಶ, ನಾವು ಕೆಲಸ ಮಾಡುತ್ತಿರುವುದು ಮಹದೇಶ್ವರ ವನ್ಯಜೀವಿ ಪ್ರದೇಶಲ್ಲಿ ಹಾಗಾಗಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೈತೊಳೆದುಕೊಂಡು ಬಿಟ್ಟರು. ಹೋಗಲಿ ಬೆಂಕಿ ನಂದಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಬಹುದಲ್ಲವೆ? ಎಂಬ ಪ್ರಶ್ನೆಗೆ ಅವರಲ್ಲಿ ಯಾವ ಉತ್ತರವೂ ಬರಲಿಲ್ಲ.
ಒಂದಷ್ಟು ಹೊತ್ತು ಉರಿದ ಬೆಂಕಿ ಬಳಿಕ ನಂದಿದೆ. ಇದರಿಂದ ನೂರಾರು ಎಕರೆ ಬೆಂಕಿಗಾಹುತಿಯಾದರೂ, ಅರಣ್ಯ ಇಲಾಖೆ ಅಷ್ಟೇನೂ ಆಗಿಲ್ಲ ಐದಾರು ಎಕರೆ ಪ್ರದೇಶವಷ್ಟೆ ಉರಿದಿರಬಹುದು ಎಂದು ಹೇಳುತ್ತಿದೆ. ಇನ್ನಾದರೂ ಸಂಬಂಧಿಸಿದವರು ಗಮನಹರಿಸಲಿ.












Click it and Unblock the Notifications