ಮೈಸೂರಿನಲ್ಲಿ ಜೀತಕ್ಕಿದ್ದ ಆಂಧ್ರದ ಬಾಲಕಿಯ ರಕ್ಷಣೆ
ಮೈಸೂರು, ಏಪ್ರಿಲ್ 23 : ನಗರದ ಪೇಯಿಂಗ್ ಗೆಸ್ಟ್ ಹೋಂ ನಡೆಸುತ್ತಿದ್ದ ಮಹಿಳೆಯ ಮನೆಯಲ್ಲಿ ಜೀತದಾಳಾಗಿ ಕೆಲಸ ನಿರ್ವಹಿಸುತ್ತಿದ್ದ ಅನಾಥ ಬಾಲಕಿಯನ್ನು ಒಡನಾಡಿ ಸೇವಾ ಸಂಸ್ಥೆ ಹಾಗೂ ವಿವಿ ಪುರಂ ಪೊಲೀಸರ ಕಾರ್ಯಾಚರಣೆಯ ಮೂಲಕ ರಕ್ಷಿಸಲಾಗಿದೆ.
ರಾಧಿಕಾ (ಹೆಸರು ಬದಲಿಸಲಾಗಿದೆ) ಎಂಬ ಬಾಲಕಿಯೇ ಜೀತದಿಂದ ರಕ್ಷಿಸಲ್ಪಟ್ಟವಳು. ಈಕೆ ಮೂಲತಃ ಆಂಧ್ರಪ್ರದೇಶದವಳಾಗಿದ್ದು, 6 ವರ್ಷ ವಯಸ್ಸಿನಲ್ಲಿದ್ದಾಗ ಅಲ್ಲಿಂದ ಕರೆತಂದು, ಹೈದರಾಬಾದಿನ ಶ್ರೀಮಂತ ಕುಟುಂಬಕ್ಕೆ ಸೇರಿದ ವಿಕಲ ಚೇತನ ಯುವಕನ ಆರೈಕೆ ಮಾಡುವ ಕೆಲಸವನ್ನು ವಹಿಸಲಾಗಿತ್ತು.
ಅವಿವಾ ಇನ್ಸ್ಶೂರೆನ್ಸ್ ಕಂಪೆನಿಯಲ್ಲಿ ಮೇಲ್ಮಟ್ಟದ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶರ್ಮಿಳಾ ಎಂಬುವರು ಕಳೆದ 5 ತಿಂಗಳ ಹಿಂದೆ ಮೈಸೂರಿನ ಗೋಕುಲಂನ ನಿವಾಸಿ ಕ್ರಿಸ್ಟಿನೋ ರಾಣಿ ಒಯಲಾ ಎಂಬುವವರ ಮನೆಗೆ ಈಕೆಯನ್ನು ಮನೆಕೆಲಸಕ್ಕೆ ತಂದುಬಿಟ್ಟಿದ್ದರು. [ಮಹಿಳೆ ಮೇಲೆ ಯುವಕನ ದೌರ್ಜನ್ಯ]

ಇವರು ವಿದೇಶಿ ಯೋಗ ವಿದ್ಯಾರ್ಥಿಗಳಿಗೆ ಪೇಯಿಂಗ್ ಗೆಸ್ಟ್ ಹೋಂ ನಡೆಸುತ್ತಿದ್ದು, ಅಲ್ಲಿ ರಾಧಿಕಾಳಿಂದ ಕೆಲಸ ಮಾಡಿಸಲಾಗುತ್ತಿತ್ತು. ಸಂಬಳವನ್ನು ಆಕೆಯ ಹೆಸರಿನಲ್ಲಿ ಖಾತೆ ತೆರೆದು ಹಾಕುತ್ತಿರುವುದಾಗಿ ಹೇಳಿದ್ದರಾದರೂ ಅದ್ಯಾವುದನ್ನೂ ಮಾಡದೆ ಜೀತ ಮಾಡಿಸಿಕೊಳ್ಳುತ್ತಿದ್ದರಲ್ಲದೆ, ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡುತ್ತಿದ್ದರು.
ಈ ನತದೃಷ್ಟ ಬಾಲಕಿಯ ದುಃಸ್ಥಿತಿಯ ಬಗ್ಗೆ ಮಾಹಿತಿ ಪಡೆದ ರೋಜಾಸ್ಟೋನ್ ಎಂಬ ವಿದೇಶಿಗರೊಬ್ಬರು ಕೆಲವು ದಿನಗಳ ಹಿಂದೆ ಒಡನಾಡಿ ಸಂಸ್ಥೆಗೆ ಮಾಹಿತಿ ನೀಡಿ ಬಾಲಕಿಯನ್ನು ರಕ್ಷಿಸುವಂತೆ ಮನವಿ ಮಾಡಿದ್ದರು.

ಈ ಮಾಹಿತಿಯನ್ನು ಆಧರಿಸಿ, ಒಡನಾಡಿಯ ಕಾರ್ಯಕರ್ತರು ವಿಚಾರದ ಸತ್ಯಾಸತ್ಯತೆಯ ಬಗ್ಗೆ ಮಾಹಿತಿ ಕಲೆಹಾಕಿ, ಏ.22ರಂದು ವಿವಿಪುರಂ ಪೊಲೀಸರಿಗೆ ದೂರು ನೀಡಿ ಅವರ ಸಹಕಾರದೊಂದಿಗೆ ಬಾಲಕಿಯನ್ನು ರಕ್ಷಿಸಿದ್ದಾರೆ. ತದನಂತರ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಬಾಲಕಿಯ ಹೇಳಿಕೆಯನ್ನು ದಾಖಲಿಸಿ, ಒಡನಾಡಿ ಸೇವಾ ಸಂಸ್ಥೆಯ ಮಡಿಲುಗೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ವಿವಿಪುರಂ ಠಾಣೆಯ ವೃತ್ತ ನಿರೀಕ್ಷಕರಾದ ರವಿ ಮತ್ತು ಸಿಬ್ಬಂದಿ, ಮಹಿಳಾ ಪೊಲೀಸರು, ಒಡನಾಡಿಯ ಸ್ಟ್ಯಾನ್ಲಿ-ಪರಶು, ಆಶಾ, ಗಾಯಿತ್ರಿದೇವಿ ಮುಂತಾದವರು ಇದ್ದರು. [ಕರ್ನಾಟಕವನ್ನು ತಲ್ಲಣಿಸುವಂತೆ ಮಾಡಿರುವ ಮರ್ಯಾದಾ ಹತ್ಯೆಗಳು]












Click it and Unblock the Notifications