ಸಕ್ಕರೆ ಕಾರ್ಖಾನೆ ಅಷ್ಟೇ ಅಲ್ಲ, ಎಲ್ಲ ಕಾರ್ಖಾನೆ ಖಾಸಗೀಕರಣ ಮಾಡಲಿ: ನಿರಾಣಿ
ಮೈಸೂರು, ಜೂನ್ 9: ಕೇವಲ ಸಕ್ಕರೆ ಕಾರ್ಖಾನೆ ಅಷ್ಟೇ ಅಲ್ಲ, ರಾಜ್ಯದ ಎಲ್ಲ ಕಾರ್ಖಾನೆ ಖಾಸಗೀಕರಣ ಮಾಡಲಿ. ನಾನೊಬ್ಬ ಉದ್ಯಮಿಯಾಗಿ ಖಾಸಗೀಕರಣ ಆಗಬೇಕು ಅಂತ ಒತ್ತಾಯಿಸುತ್ತೇನೆ ಎಂದು ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಮುರುಗೇಶ್ ನಿರಾಣಿ, ಸರ್ಕಾರ ಇರುವುದು ಬರೀ ಕಾರ್ಖಾನೆ ನಡೆಸುವುದಕ್ಕೆ ಅಲ್ಲ. ಖಾಸಗಿಯವರಿಗೆ ಕೊಟ್ಟರೆ ಅವರು ಸೂಕ್ತ ನಿರ್ವಹಣೆ ಮಾಡುತ್ತಾರೆ ಎಂದು ತಿಳಿಸಿದರು.
ಸಕ್ಕರೆ ಕಾರ್ಖಾನೆ ಮಾರಾಟಕ್ಕೆ ನನ್ನ ವಿರೋಧ ಇದೆ. ಆದರೆ ಗುತ್ತಿಗೆ ನೀಡಿ ಟೆಂಡರ್ ಮೂಲಕ ಕಾರ್ಖಾನೆ ನಡೆಸಲಿ ಎಂದ ಅವರು, ಬೇಕಿದ್ದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಟೆಂಡರ್ ನಲ್ಲಿ ಭಾಗಿಯಾಗಲಿ, ವಿರೋಧಕ್ಕಾಗಿ ವಿರೋಧ ಮಾಡುವುದು ಬೇಡ. ಖಾಸಗೀಕರಣದ ಪರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರೇ ಮಾತನಾಡಿದ್ದಾರೆ ಎಂದರು.

ನಿರಾಣಿ ಶುಗರ್ಸ್ ನಲ್ಲಿ ರೈತರ ಬಾಕಿ ಇದೆ. ಅದು ಕೇವಲ 32 ಕೋಟಿ ರೂ. ಮಾತ್ರ, ಆದರೆ ನಾವು 2,000 ಕೋಟಿ ರೂ. ವ್ಯವಹಾರ ಮಾಡಿಸಿದ್ದೇವೆ. ಅದನ್ನು ಇನ್ನು 10 ದಿನದಲ್ಲಿ ಕ್ಲೀಯರ್ ಮಾಡುತ್ತೇನೆ ಎಂದು ಭರವಸೆ ನೀಡಿದರು. ಪಾಂಡವಪುರ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ರಾಜವಂಶಸ್ಥರನ್ನ ಆಹ್ವಾನಿಸಲು ಮೈಸೂರಿಗೆ ಬಂದಿದ್ದೆ ಎಂದು ತಿಳಿಸಿದರು.
ಪಾಂಡವಪುರ ಕಾರ್ಖಾನೆ ಖಾಸಗೀಕರಣಕ್ಕೆ ಮಂಡ್ಯ ಜನಪ್ರತಿನಿಧಿಗಳ ವಿರೋಧ ವಿಚಾರವಾಗಿ ಮಾತನಾಡಿದ ಶಾಸಕ ಮುರುಗೇಶ್ ನಿರಾಣಿ,
""ಯಾರೂ ಸಹ ಖಾಸಗೀಕರಣಕ್ಕೆ ವಿರೋಧ ಮಾಡಿಲ್ಲ, ಅಲ್ಲಿನ ಎಲ್ಲ ಜನಪ್ರತಿನಿಧಿಗಳು ನಮಗೆ ಸಹಕಾರ ನೀಡಿದ್ದಾರೆ'' ಎಂದರು.
ಮೈ ಶುಗರ್ಸ್ ಕಾರ್ಖಾನೆ ಬಗ್ಗೆ ನಾನು ಏನೂ ತೀರ್ಮಾನ ಕೈಗೊಂಡಿಲ್ಲ, ಪಾಂಡವಪುರ ಕಾರ್ಖಾನೆಗೆ 26 ಕೋಟಿ ರೂ. ಹಣ ಕಟ್ಟಬೇಕಿದೆ, ಅದನ್ನು ನಾವು ಕಟ್ಟುತ್ತೇವೆ, ಆದರೆ ಅಲ್ಲಿನ ಬಾಕಿ ನಮಗೆ ಸಂಬಂಧ ಪಡುವುದಿಲ್ಲ, ಈ ವರ್ಷದಿಂದ ನಾವು ಅಲ್ಲಿನ ಎಲ್ಲ ವ್ಯವಸ್ಥೆ ಬಳಸಿಕೊಂಡು ಕಬ್ಬು ಅರೆಯುತ್ತೇವೆ ಎಂದು ನಿರಾಣಿ ಶುಗರ್ಸ್ ಮಾಲೀಕ ಮುರುಗೇಶ್ ನಿರಾಣಿ ಹೇಳಿದರು.
ಕಾರ್ಖಾನೆಯಲ್ಲಿ ಬಯೋ ಉತ್ಪನ್ನಗಳನ್ನು ತಯಾರಿಸಿ ರೈತರಿಗೆ ಹಿಂದೆಂದಿಗಿಂತ ಹೆಚ್ಚಿನ ಆದಾಯ ಬರುವಂತೆ ಮಾಡುತ್ತೇವೆ. ಆ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ ಆಗುತ್ತದೆ. ವಿರೋಧ ಮಾಡುವವರು ಯಾವ ಕಾರಣಕ್ಕೆ ಮಾಡುತ್ತಿದ್ದಾರೋ ಗೊತ್ತಿಲ್ಲವೆಂದು ತಿಳಿಸಿದರು.












Click it and Unblock the Notifications