ಕೊರೊನಾ ಸಂಕಷ್ಟ ಹಿನ್ನೆಲೆ: ಕೆಎಸ್ಆರ್ಟಿಸಿ ಬಸ್ ದರ ಏರಿಕೆ ಇಲ್ಲ
ಮೈಸೂರು, ಜುಲೈ 6: "ಕೊರೊನಾ ಸಂಕಷ್ಟ ಇರುವ ಕಾರಣದಿಂದ ರಾಜ್ಯದಲ್ಲಿ ಕೆಎಸ್ಆರ್ಟಿಸಿ ಬಸ್ ದರ ಏರಿಕೆ ಇಲ್ಲ,'' ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ ಸವದಿ ಹೇಳಿದರು.
ರಾಜ್ಯದಲ್ಲಿ ಕೆಎಸ್ಆರ್ಟಿಸಿ ಬಸ್ ದರ ಏರಿಕೆ ಕುರಿತು ಡಿಸಿಎಂ ಹಾಗೂ ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ ಸವದಿ ಮಾತನಾಡಿ, ಸದ್ಯ ಬಸ್ ದರ ಏರಿಸುವುದಿಲ್ಲ ಎಂದು ತಿಳಿಸಿದರು.
ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಬೆಲೆ ಏರಿಕೆ ಮಾಡುವಂತೆ ನಿಗಮಗಳಿಂದ ಪ್ರಸ್ತಾವನೆ ಬಂದಿದೆ. ಆದರೆ ಕೊರೊನಾ ಸಂಕಷ್ಟ ಇರುವ ಕಾರಣಕ್ಕಾಗಿ ಸದ್ಯಕ್ಕೆ ಬೆಲೆ ಏರಿಕೆಯ ಪ್ರಸ್ತಾಪ ಇಲ್ಲ. ಅಲ್ಲದೇ ಈಗಷ್ಟೇ ಅನ್ಲಾಕ್ ಆಗಿದೆ. ಜನಕ್ಕೆ ಈಗಲೂ ಬಸ್ನಲ್ಲಿ ಪ್ರಯಾಣಿಸಿದರೆ ಕೊರೊನಾ ಬರುತ್ತೆ ಅನ್ನುವ ಭಯ ಇದೆ. ಜನರಿಗೂ ಲಾಕ್ಡೌನ್ನಿಂದಾಗಿ ತೊಂದರೆ ಆಗಿದೆ. ಈ ಸಂದರ್ಭದಲ್ಲಿ ಟಿಕೆಟ್ ದರ ಏರಿಸಿದರೆ ಇನ್ನಷ್ಟು ಸಮಸ್ಯೆ ಆಗುತ್ತದೆ. ಆದ್ದರಿಂದ ಬೆಲೆ ಏರಿಕೆ ಮಾಡುತ್ತಿಲ್ಲ,'' ಎಂದು ಸ್ಪಷ್ಟನೆ ನೀಡಿದರು.

ಇದೇ ವೇಳೆ ಸಾರಿಗೆ ನೌಕರರ ಮುಷ್ಕರ ವಿಚಾರದ ಕುರಿತಂತೆ ಮಾತನಾಡಿದ ಅವರು, "ಸಾರಿಗೆ ನೌಕರರು ಈ ಹಿಂದೆ 9 ಬೇಡಿಕೆ ಮುಂದಿಟ್ಟಿದ್ದರು. ಇದರಲ್ಲಿ 8 ಬೇಡಿಕೆ ಈಡೇರಿಸಿದ್ದು, ವೇತನ ಪರಿಷ್ಕರಣೆ ಮಾಡಬೇಕು ಅಂತ ಕೇಳುತ್ತಿದ್ದಾರೆ. ಆದರೆ ಲಾಕ್ಡೌನ್ನಿಂದಾಗಿ ನಿಗಮಕ್ಕೆ 4000 ಕೋಟಿ ರೂ. ನಷ್ಟ ಆಗಿದೆ. ಈಗ ಬರುತ್ತಿರುವ ಆದಾಯ ಇಂಧನಕ್ಕೂ ಸಾಲುತ್ತಿಲ್ಲ. ನಿಗಮಕ್ಕೆ ಆದಾಯ ಬರಲು ಶುರುವಾದ ನಂತರ ವೇತನ ಪರಿಷ್ಕರಣೆ ಬಗ್ಗೆ ಚಿಂತನೆ ನಡೆಸಲಾಗುವುದು,'' ಎಂದರು.
ನಾಯಕತ್ವ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಲಕ್ಷ್ಮಣ ಸವದಿ, "ನಾಯಕತ್ವ ಬದಲಾವಣೆ ಎಂಬುದು ಕೆಲವು ಶಾಸಕರ ವೈಯಕ್ತಿಕ ಅಭಿಪ್ರಾಯ ಅಷ್ಟೆ. ಆದರೆ, ಹೈಕಮಾಂಡ್ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಆದರೂ ಕೆಲವು ನಾಯಕರು ಅಲ್ಲಿ ಇಲ್ಲಿ ಮಾತನಾಡುತ್ತಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ, ಪಕ್ಷದ ಅಭಿಪ್ರಾಯ ಅಲ್ಲ,'' ಎಂದಿದ್ದಾರೆ.












Click it and Unblock the Notifications