ವಾಣಿಜ್ಯ ಮೇಳದಿಂದ ಸಾಹಿತ್ಯಾಭಿಮಾನಿಗಳು ದೂರ
ಮೈಸೂರು, ನವೆಂಬರ್ 25 : ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಮೇಳೈಸಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆ ಗೋಷ್ಠಿಗಳಲ್ಲಿ ಆಸಕ್ತಿ ತೋರುತ್ತಿರುವ ಸಾಹಿತ್ಯಾಭಿಮಾನಿಗಳು 'ವಾಣಿಜ್ಯ ಮೇಳ'ದಿಂದ ಮಾತ್ರ ದೂರವೇ ಉಳಿದಿದ್ದಾರೆ.
ಪುಸ್ತಕ ಮಳಿಗೆಗಳಲ್ಲಿ ಗಿಜಿಗುಡುತ್ತಿದ್ದ ಕನ್ನಡಾಭಿಮಾನಿಗಳು ಅಲ್ಲೇ ಪಕ್ಕದಲ್ಲೇ ವ್ಯವಸ್ಥಿತವಾಗಿ ಆಯೋಜಿತವಾಗಿದ್ದ ವಾಣಿಜ್ಯ ಮೇಳದ ಮಳಿಗೆಗಳತ್ತ ಚಿತ್ತ ಹರಿಸಲಿಲ್ಲ. ಹೀಗಾಗಿ ವಾಣಿಜ್ಯ ಮಳಿಗೆಗಳು ಜನರಿಲ್ಲದೆ ಬಣಗುಡುತ್ತಿದ್ದ ದೃಶ್ಯ ಕಂಡು ಬಂದಿತು.

ವಾಣಿಜ್ಯ ಮೇಳದಲ್ಲಿ 242 ಮಳಿಗೆಗಳು ತೆರೆದಿದ್ದು, ಸಾಕಷ್ಟು ಮಳಿಗೆಗಳು ಮಹಿಳೆಯರಿಗೆ ಸರ, ಸೀರೆ, ಬಟ್ಟೆಗಳಿಗೆ ಸೀಮಿತವಾಗಿದ್ದರೆ ಮತ್ತೆ ಹಲವಷ್ಟು ಮಳಿಗೆಗಳು ತಿಂಡಿ ತಿನಿಸುಗಳ ಮಾರಾಟಕ್ಕಷ್ಟೆ ಸೀಮಿತವಾಗಿತ್ತು. ರಾಜ್ಯದ ವಿವಿಧೆಡೆಗಳಿಂದ ವಾಣಿಜ್ಯೋದ್ಯಮಿಗಳು ವಿವಿಧ ಮಳಿಗೆಗಳನ್ನು ತೆರೆದಿದ್ದಾರಾದರು, ಮೇಳದ ದ್ವಾರದಲ್ಲಿದ್ದ ಕಬ್ಬಿನ ಹಾಲು ಕುಡಿದು ಹಿಂತೆರಳುತ್ತಿದ್ದುದು ಕಂಡು ಬಂದಿತು.
ಸಾಹಿತ್ಯ ಸಮ್ಮೇಳನದಲ್ಲಿ ಸುತ್ತಿ ಬಸವಳಿದ ಸಾಕಷ್ಟು ಮಂದಿ ನೆರಳಿಗಾಗಿ ವಾಣಿಜ್ಯ ಮಳಿಗೆಗಳ ಪಕ್ಕ ನಿಂತು ಕಾಲ ಕಳೆಯುತ್ತಿದ್ದುದು ಕಂಡು ಬಂದಿತು. ಮುಂದಿನ ಎರಡು ದಿನಗಳಲ್ಲಿ ಮೇಳ ಚುರುಕುಗೊಳ್ಳುವ ಆಶಯ ವ್ಯಾಪಾರಿಗಳದ್ದು.












Click it and Unblock the Notifications