ನಶಿಸುತ್ತಿರುವ ಮೈಸೂರಿನ ಪಾರಂಪರಿಕ ಕುಂದನ ಕಲೆಯಲ್ಲಿ ಅರಳಿದ ಮೋದಿ ಮತ್ತು ತಾಯಿಯ ಚಿತ್ರ
ಮೈಸೂರು, ಸೆಪ್ಟೆಂಬರ್ 16: ನಮ್ಮ ಭವ್ಯ ಭಾರತೀಯ ಶ್ರೀಮಂತ ಸಂಸ್ಕೃತಿ ಮತ್ತು ಕಲೆ ವಿಶ್ವದಲ್ಲೇ ಸುಪ್ರಸಿದ್ಧವಾದುದು. ಅದರಲ್ಲೂ ಭಾರತೀಯ ಶಿಲ್ಪ ಕಲೆಯು ಯುನೆಸ್ಕೋ ಪಟ್ಟಿಯಲ್ಲಿಯೂ ಸೇರಿದೆ. ಪುರಾತನ ಕಾಲದಲ್ಲಿ 64 ಬಗೆಯ ಕಲೆಗಳಿದ್ದವೆಂದು ನಾವು ಪುಸ್ತಕದಲ್ಲಿ ಓದಿದ್ದೇವೆ. ಆದರೆ ಕಾಲ ಕಳೆದಂತೆ ಇಂತಹ ಕಲೆಗಳು ನಶಿಸಿ ಹೋಗಿವೆ, ಹೋಗುತ್ತಿವೆ.
ಇದು ನಿಜಕ್ಕೂ ವಿಷಾದನೀಯ. ಯಾವುದೇ ರೀತಿಯ ಕಲೆ ಸೃಷ್ಟಿಯಾಗಲು ಕಲಾವಿದ ಅಥವಾ ಶಿಲ್ಪಿ ಬೇಕೇ ಬೇಕು. ಸೃಷ್ಟಿ ಮಾಡುವವರು ಅನುಭವಿಗಳೂ, ನೈಪುಣ್ಯತೆ ಹೊಂದಿದವರು ಮತ್ತು ನುರಿತವರಾಗಿರಬೇಕು. ಈ ರೀತಿ ನೈಪುಣ್ಯತೆ ಸಾಧಿಸಲೇ 10-20 ವರ್ಷಗಳ ಕಾಲ ಬೇಕಾಗುತ್ತದೆ. ಈ ನೈಪುಣ್ಯತೆ ಸಂಪಾದಿಸುವ ಸಮಯದಲ್ಲಿ ಕೈಗೊಂಡ ಕಲೆಗೆ ಬೇಡಿಕೆಯೂ ಇರಬೇಕಾಗುತ್ತದೆ.
ಇಲ್ಲದಿದ್ದರೆ ಕಲಾವಿದರು ಬದುಕಲು ಸಾಧ್ಯವಿಲ್ಲ. ರಚಿಸಿದ ಕೃತಿಗಳಿಗೆ ಬೇಡಿಕೆ ಇಲ್ಲದೆ, ಪೋಷಕರೂ ಇಲ್ಲದೆ ಹತ್ತಾರು ಕಲೆಗಳು ಇಂದು ಆಸ್ತಿತ್ವದಲ್ಲೇ ಇಲ್ಲ. ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಹತ್ತಾರು ಬಗೆಯ ಕಲೆಗಳನ್ನು, ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು.

ಮೈಸೂರು ಕುಂದನ ಕಲೆಗೆ ಪ್ರಸಿದ್ಧವಾಗಿದೆ
ಆದರೆ ಪ್ರಜಾಪ್ರಭುತ್ವ ಆಡಳಿತ ಬಂದ ನಂತರ ಕೆಲವೊಂದು ಅಪರೂಪದ ಕಲೆಗಳಿಗೆ ಪೋಷಕರೇ ಇಲ್ಲದಂತಾಗಿದೆ. ನಮ್ಮ ಸಾಂಸ್ಕೃತಿಕ ನಗರಿಯು ಮೈಸೂರು ಪಾಕ್ ಮತ್ತು ಮೈಸೂರು ಸಿಲ್ಕ್ ಸೀರೆಗಳಿಗೆ ಪ್ರಸಿದ್ಧಿ ಪಡೆದಿದೆ. ಆದರೆ ನೂರಾರು ವರ್ಷಗಳ ಹಿಂದಿನಿಂದಲೇ ಮೈಸೂರು ಕುಂದನ ಕಲೆಗೆ ಪ್ರಸಿದ್ಧವಾಗಿದ್ದುದು ಹೊರ ರಾಜ್ಯಗಳವರಿಗೆ ಬಿಡಿ, ಇಂದಿನ ಮೈಸೂರಿಗರಿಗೇ ಗೊತ್ತಿಲ್ಲ. ಕುಂದನ ಕಲೆಯು ಮೈಸೂರಿನ ಪಾರಂಪರಿಕ ಕಲೆ ಆಗಿದ್ದು, ದೇಶದಲ್ಲಿ ಇದರ ಕೇಂದ್ರ ಮೈಸೂರು ಆಗಿದೆ. ಈ ಕುಂದನ ಕಲೆಗೆ 400 ವರ್ಷಗಳ ಇತಿಹಾಸ ಇದ್ದು, ಮೈಸೂರು ಮಹಾರಾಜರ ಕಾಲದಲ್ಲಿ ಈ ಕಲೆ ತುಂಬಾ ಪ್ರಸಿದ್ಧಿ ಪಡೆದಿದ್ದು, 2000ಕ್ಕೂ ಹೆಚ್ಚು ಜನ ಕಲಾವಿದರಿದ್ದರು.

ಮರದ ತುಂಡುಗಳಿಂದ ಕಲೆಗಳನ್ನು ರೂಪಿಸುವುದೇ ಕುಂದನ ಕಲೆ
ಕಾಲಕ್ರಮೇಣ ಈ ಕಲೆ ಕ್ಷೀಣಿಸತೊಡಗಿದ್ದು, ನಮ್ಮ ರಾಜ್ಯದಲ್ಲೀಗ ಕೇವಲ 200 ಮಂದಿ ಮಾತ್ರ ಕುಂದನ ಕಲಾವಿದರಿದ್ದಾರೆ ಎಂದು ಅಂದಾಜಿಸಲಾಗಿದೆ. ಕುಂದನ ಕಲೆ (ಇನ್-ಲೇ) ಎಂದರೇನು? ಮರದಿಂದ ಕೆತ್ತನೆ ಕೆಲಸವನ್ನು ಹಾಗೂ ಕತ್ತರಿಸಿದ ಮರದ ತುಂಡುಗಳಿಂದ ಕಲೆಗಳನ್ನು ರೂಪಿಸುವುದೇ ಈ ಕುಂದನ ಕಲೆಯಾಗಿದ್ದು, ಇಂದು ಅವಸಾನದ ಅಂಚಿನಲ್ಲಿದೆ.
ಈ ನಡುವೆ ಬೆಂಗಳೂರಿನ ಯುವ ಇಂಜಿನಿಯರಿಂಗ್ ಪದವೀಧರ ಭಾನುಪ್ರಕಾಶ್ ಕುಂದನ ಕಲೆಯ ಬಗ್ಗೆ ಸ್ವತಃ ಆಸಕ್ತಿ ಮೂಡಿಸಿಕೊಂಡು ಇದರ ಪುನರುಜ್ಜೀವನಕ್ಕೆ ಮುಂದಾಗಿರುವುದು ಶ್ಲಾಘನೀಯ.

ಕುಂದನ ಕಲೆಗಾರ ಮೈಸೂರಿನ ಭಾನುಪ್ರಕಾಶ್
ಲಂಡನ್ ನಲ್ಲಿ ನಾಲ್ಕು ವರ್ಷ ಮತ್ತು ಬೆಂಗಳೂರಿನಲ್ಲಿ 7 ವರ್ಷ ಕೆಲಸ ಮಾಡಿರುವ ಮೆಕ್ಯಾನಿಕಲ್ ಇಂಜಿನಿಯರ್ ಈಗ ಕುಂದನ ಕಲೆಯಲ್ಲಿ ತಮ್ಮನ್ನು ಪೂರ್ಣಾವಧಿಯಾಗಿ ತೊಡಗಿಸಿಕೊಂಡಿದ್ದಾರೆ.
ಭಾನುಪ್ರಕಾಶ್ ಅವರು ಕಳೆದ ಒಂದು ವರ್ಷದಿಂದ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ಪ್ರೀತಿಯನ್ನು ಕುಂದನ ಕಲೆಯ ಮೂಲಕ ಅರಳಿಸಿದ್ದಾರೆ. ಹತ್ತು ಬೇರೆ ಬೇರೆ ಜಾತಿಯ ವಿಶಿಷ್ಟ ಮರಗಳನ್ನು ಬಳಸಿ 7 ಅಡಿ ಅಗಲ, 5 ಅಡಿ ಉದ್ದದ ಅಪರೂಪದ ಕಲಾಕೃತಿಯನ್ನು ರಚಿಸಿದ್ದು, ಇದಕ್ಕೆ 25 ಕುಶಲಕರ್ಮಿಗಳು ಅಹರ್ನಿಶಿ ದುಡಿದಿದ್ದಾರೆ.

ಮೋದಿ ಕಲಾಕೃತಿ ನಿರ್ಮಿಸಿದ್ದಾರೆ
ಕುಂದನ ಕಲೆಯಲ್ಲಿ ವ್ಯಕ್ತಿಯ ಕುರಿತು ಇಷ್ಟು ದೊಡ್ಡ ಕಲಾಕೃತಿ ನಿರ್ಮಿಸಿರುವುದು ದೇಶದಲ್ಲೇ ಪ್ರಪ್ರಥಮ ಎಂದ ಭಾನು ಅವರು, ಇದನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಗೂ ಕಳಿಸುವುದಾಗಿ ತಿಳಿಸಿದರು. ಮೋದಿ ಅವರ ಹುಟ್ಟಿದ ಹಬ್ಬದ ಪ್ರಯುಕ್ತ ಈ ಕಲಾಕೃತಿಯು ನಾಳೆ ಗುರುವಾರದಿಂದ ಸೂರತ್ ನಲ್ಲಿ ಪ್ರದರ್ಶನಗೊಳ್ಳಲಿದೆ. ಇದನ್ನು ಮಾರಾಟಕ್ಕಿಟ್ಟಿರುವುದಾಗಿಯೂ ತಿಳಿಸಿದ ಅವರು ಇದಕ್ಕೆ ಸುಮಾರು 1.5 ರಿಂದ 2 ಕೋಟಿ ರುಪಾಯಿಗಳಿಗೆ ಮಾರಾಟವಾಗುವ ಭರವಸೆ ಇದೆ ಎಂದರು.

ನಶಿಸುತಿದ್ದ ಕುಂದನ ಕಲೆಯ ಪರಿಚಯ ಮುಂದಿನ ಪೀಳಿಗೆಗೆ
ಈ ಕಲಾವಿದರು ಇಂದು ನುರಿತವರಿದ್ದರೂ ಸೂಕ್ತ ಬೇಡಿಕೆ ಇಲ್ಲದೆ ಆಟೋ ಓಡಿಸುವುದು, ಕೂಲಿ ಕೆಲಸ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ. ಇದು ಅವರ ಹೊಟ್ಟೆ ತುಂಬಿಸಲು ಅನಿವಾರ್ಯ ಕೂಡ. ಮುಂದಿನ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಆರ್ಟ್ಸ್ ಮತ್ತು ಕ್ರಾಪ್ಟ್ಸ್ ಕೋರ್ಸನ್ನು ಆರಂಭಿಸಲು ಭಾನುಪ್ರಕಾಶ್ ಚಿಂತನೆ ನಡೆಸಿದ್ದಾರೆ. ಇದರಿಂದಾಗಿ ನಶಿಸುತಿದ್ದ ಕುಂದನ ಕಲೆಯ ಪರಿಚಯ ಮುಂದಿನ ಪೀಳಿಗೆಗೆ ಆಗಬಹುದು ಎನ್ನುವ ಆಶಯ ಅವರದ್ದಾಗಿದೆ.












Click it and Unblock the Notifications