ನಂಜನಗೂಡು ದೊಡ್ಡ ಜಾತ್ರೆ; ಅರ್ಧಕ್ಕೆ ನಿಂತ ಪಾರ್ವತಿ ದೇವಿ ರಥ
ಮೈಸೂರು, ಮಾರ್ಚ್ 26; ನಂಜನಗೂಡಿನಲ್ಲಿ ಸರಳವಾಗಿ ನಡೆದ ಮಹಾರಥೋತ್ಸವದ ವೇಳೆ ರಥದ ಚಕ್ರ ತುಂಡಾಗಿ ಪಾರ್ವತಿ ದೇವಿಯ ರಥ ಅರ್ಧಕ್ಕೆ ನಿಂತ ಘಟನೆ ನಡೆಯಿತು.
ಐತಿಹಾಸಿಕ ಪ್ರವಾಸಿ ತಾಣವಾದ ನಂಜನಗೂಡಿನಲ್ಲಿ ಶುಕ್ರವಾರ ನಡೆದ ನಂಜುಂಡೇಶ್ವರ ಸ್ವಾಮಿಯ ಮಹಾರಥೋತ್ಸವದ ಹಿನ್ನೆಲೆಯಲ್ಲಿ, ಪಾರ್ವತಿದೇವಿ ಅಮ್ಮನವರ ರಥೋತ್ಸವ ಸಹ ನೆರವೇರಿಸಲಾಯಿತು.
ಆದರೆ, ರಥೋತ್ಸವ ಪ್ರಾರಂಭವಾದ ಕೆಲವೇ ಹೊತ್ತಿನಲ್ಲಿ ಪಾರ್ವತಿ ದೇವಿಯನ್ನು ಹೊತ್ತು ಸಾಗುತ್ತಿದ್ದ ರಥದ ಬಲ ಭಾಗದ ಮುಂದಿನ ಚಕ್ರದ ಒಂದು ಭಾಗ ತುಂಡಾಗಿದೆ. ಈ ವೇಳೆ ತುಂಡಾದ ರಥದ ಚಕ್ರದ ಪುಡಿಯನ್ನು ಭಕ್ತರು ಆಚೆ ತೆಗೆದರು, ರಥವನ್ನು ಮುಂದೆ ಎಳೆಯಲಾರದ ಸ್ಥಿತಿ ತಲುಪಿತು.

ಈ ನಡುವೆ ಚಕ್ರ ಪುಡಿಯಾದ ರಥವನ್ನು ಮುಂದೆ ಎಳೆಯಲು ಭಕ್ತರು ಸಾಕಷ್ಟು ಪ್ರಯತ್ನ ನಡೆಸಿದರು ಯಾವುದೇ ಪ್ರಯೋಜನ ಆಗಲಿಲ್ಲ. ಹೀಗಾಗಿ ಪ್ರದಕ್ಷಿಣೆ ಮುಗಿಯುವ ಮುನ್ನವೇ ತೇರಿನಿಂದ ಅಮ್ಮನವರ ವಿಗ್ರಹವನ್ನು ಅರ್ಚಕರು ಕೆಳಗಿಳಿಸಿದರು.
ನಂತರ ಮಂಟಪದ ಮಾದರಿ ಲಾಲ್ಬಾಗ್ ತಂದು ಅದರಲ್ಲಿ ಪಾರ್ವತಿ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿದ ಅರ್ಚಕರು, ಲಾಲ್ಬಾಗ್ನಲ್ಲೇ ಪಾರ್ವತಿ ಅಮ್ಮನ ಮೆರವಣಿಗೆ ಮುಂದುವರಿಸಿ, ರಥೋತ್ಸವ ಪೂರ್ಣಗೊಳಿಸಿದರು.
ಕೊರೊನಾ ಸೋಂಕಿನ ಆತಂಕದಿಂದಾಗಿ ಮೈಸೂರು ಜಿಲ್ಲಾಡಳಿತ ಗೌತಮ ಮಹಾರಥೋತ್ಸವ ಆಚರಿಸಲು ಸಮ್ಮತಿ ನೀಡಲು ನಿರಾಕರಿಸಿತ್ತು. ಹೀಗಾಗಿ ಚಿಕ್ಕ ತೇರಿನಲ್ಲೇ ಶ್ರೀಕಂಠೇಶ್ವರನ ರಥೋತ್ಸವ ನಡೆಸಲಾಯಿತು.
ಕೋವಿಡ್-19 ಸೋಂಕಿನ ಕಾರಣಕ್ಕೆ ಹೆಚ್ಚಿನ ಭಕ್ತರು ಸೇರುವುದಕ್ಕೂ ಕಡಿವಾಣ ಹಾಕಿದ್ದರ ಪರಿಣಾಮ, ಕಡಿಮೆ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಸರಳವಾಗಿ ನೆರವೇರಿತು.












Click it and Unblock the Notifications