ನಂಜನಗೂಡು ಉ.ಚು: ಕಾಂಗ್ರೆಸ್ ಅಭ್ಯರ್ಥಿಯಾಗಿ ಕೇಶವಮೂರ್ತಿ ಬಹುತೇಕ ಖಚಿತ
ಮೈಸೂರು, ಫೆಬ್ರವರಿ 7 : ನಂಜನಗೂಡು ಉಪಚುನಾವಣೆಗೆ ಸಂಬಂಧಿಸಿದಂತೆ ಮಂಗಳವಾರ ಮಹತ್ವದ ಬೆಳವಣಿಗೆಗಳು ನಡೆದಿವೆ. ಜೆ.ಡಿ.ಎಸ್ ಪಾಳಯದಲ್ಲಿ ಕೊನೆಯವರೆಗೂ ಗುರುತಿಸಿಕೊಂಡಿದ್ದ ಕಳಲೆ ಕೇಶವಮೂರ್ತಿ ದಿಢೀರ್ ಕಾಂಗ್ರೆಸ್ ಸೇರುವುದಾಗಿ ಪ್ರಕಟಿಸಿದ್ದಾರೆ. ಅವರು ನಂಜನಗೂಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.
ಇನ್ನೊಂದೆಡೆ ಮೈಸೂರು ಬಿಜೆಪಿ ಜಿಲ್ಲಾ ಗ್ರಾಮಾಂತರ ಕಾರ್ಯಕಾರಿಣಿ ಉದ್ದೇಶಿಸಿ ಮಾತನಾಡಿರುವ ಬಿಜೆಪಿ ನಾಯಕ ವಿ. ಶ್ರೀನಿವಾಸ್ ಪ್ರಸಾದ್ 'ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ,' ಎಂದು ಹೇಳಿದ್ದಾರೆ.[ನಂಜನಗೂಡು ಉಪಚುನಾವಣೆಗೆ ಕಾಂಗ್ರೆಸ್ ಗೆ ಅಭ್ಯರ್ಥಿ ಬೇಕಾಗಿದ್ದಾರೆ!]
ನಂಜನಗೂಡು ಉಪಚುನಾವಣೆಗೆ ದಿನಾಂಕ ಘೋಷಣೆಯಾಗುವುದಕ್ಕೂ ಮೊದಲೇ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಬಿರುಸಿನ ಬೆಳವಣಿಗೆಗಳು ನಡೆಯುತ್ತಿದ್ದು ಚುನಾವಣಾ ತಯಾರಿ ಈಗಾಗಲೇ ಆರಂಭವಾಗಿದೆ.
ಕಾಂಗ್ರೆಸ್ ಸೇರ್ಪಡೆ
ಮಂಗಳವಾರ ನಂಜನಗೂಡು ಪಟ್ಟಣದ ಕಲ್ಯಾಣ ಮಂಟಪದಲ್ಲಿ ಕಳಲೆ ಕೇಶವಮೂರ್ತಿ ತಮ್ಮ ಬೆಂಬಲಿಗರ ಸಭೆ ಕರೆದಿದ್ದರು. ಸಭೆಯಲ್ಲಿ ಕಳಲೆ ಕೇಶವಮೂರ್ತಿ ತಾವು ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ್ದಾರೆ. ಸದ್ಯ ನಂಜನಗೂಡಿನಲ್ಲಿ ಕಾಂಗ್ರೆಸ್ಗೆ ಅಭ್ಯರ್ಥಿಗಳಿಲ್ಲದೇ ಇರುವುದರಿಂದ ಕೇಶವ ಮೂರ್ತಿ ಚುನಾವಣೆಯಲ್ಲಿ ಕೈ ಪಕ್ಷದಿಂದ ಸ್ಪರ್ಧಿಸುವುದು ಬಹುತೇಕ ನಿಕ್ಕಿಯಾಗಿದೆ.
ಯಾರು ಈ ಕೇಶವಮೂರ್ತಿ?
ಕಳಲೆ ಎನ್ ಕೇಶವ ಮೂರ್ತಿ ನಂಜನಗೂಡಲ್ಲಿ ಪ್ರಭಾವಿ ನಾಯಕ. ಕಳೆದ ಚುನಾವಣೆಯಲ್ಲಿ ಜೆ.ಡಿ.ಎಸ್ ನಿಂದ ಸ್ಪರ್ಧಿಸಿ ವಿ. ಶ್ರೀನಿವಾಸ್ ಪ್ರಸಾದ್ ವಿರುದ್ಧ ಅಲ್ಪ ಮತಗಳ ಸೋಲು ಕಂಡಿದ್ದರು. ಈ ಚುನಾವಣೆಯಲ್ಲಿ ಜೆ.ಡಿ.ಎಸ್ ನಿಂದ ಸ್ಪರ್ಧಿಸಬೇಕು ಎಂಬುದು ಕಳಲೆ ಅಭಿಲಾಷೆಯಾಗಿತ್ತು. ಆದರೆ ಅದಕ್ಕೆ ಪಕ್ಷದ ನಾಯಕರು ಅಷ್ಟಾಗಿ ಆಸಕ್ತಿ ನೀಡಿರಲಿಲ್ಲ.
ಜೆಡಿಎಸ್ ನಿಂದ ಜಂಪ್
ಕಳೆದ ಕೆಲವು ದಿನಗಳ ಹಿಂದೆ ಜೆಡಿಎಸ್ ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ್ದ ಕಳಲೆ ಕೇಶವಮೂರ್ತಿ ತಾನು ಯಾವ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ. ಪಕ್ಷ ಬಯಸಿದರೆ ಸ್ಪರ್ಧಿಸುವುದಾಗಿ ಹೇಳಿದ್ದರು. ಜೆ.ಡಿ.ಎಸ್ ನಿಷ್ಠಾವಂತರಂತೆ ಕಂಡಿದ್ದ ಕಳಲೆ ಅದಾಗಿ ಕೆಲವೇ ದಿನ ಅಂದರೆ ಫೆಬ್ರವರಿ 2ರಂದು ಕಾಂಗ್ರೆಸ್ ನಾಯಕ ಎಚ್.ಸಿ ಮಹದೇವಪ್ಪ ಮನೆಯಲ್ಲಿ ಏಕಾಏಕಿ ಪ್ರತ್ಯಕ್ಷರಾಗಿದ್ದರು. ಆಗಲೇ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಮುನ್ನಲೆಗೆ ಬಂದಿತ್ತು.
ಅಭ್ಯರ್ಥಿ ಸಿಕ್ಕಿದ್ರಾ?
ನಂಜನಗೂಡು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಅಭ್ಯರ್ಥಿಗಳಿಲ್ಲದೆ ಪರದಾಡುತ್ತಿತ್ತು. ಒಂದು ಹಂತದಲ್ಲಿ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಕಾಂಗ್ರೆಸ್ ಅಭ್ಯರ್ಥಿ ಎನ್ನಲಾಗಿತ್ತಾದರೂ ಅಂತಿಮವಾಗಿರಲಿಲ್ಲ. ಇದೇ ವೇಳೆಗೆ ಜಾತ್ಯಾತೀತ ಜನತಾದಳದಲ್ಲಿದ್ದ ಕಳಲೆ ಕೇಶವಮೂರ್ತಿಯವರಿಗೆ ಗಾಳ ಹಾಕುವ ಕೆಲಸವೂ ನಿರಂತರ ಚಾಲ್ತಿಯಲ್ಲಿತ್ತು. ಇದೀಗ ಕಳಲೆ ಕಾಂಗ್ರೆಸಿಗೆ ಬರುವುದಾಗಿ ಹೇಳಿದ್ದಾರೆ. ಹೀಗಾಗಿ ಅವರು ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.
ಬೋಸ್ ಗೆ ಕೈ ಕೊಟ್ಟಿತಾ ಕಾಂಗ್ರೆಸ್?
ನಂಜನಗೂಡು ಉಪಚುನಾವಣೆಯಲ್ಲಿ ಎಚ್.ಸಿ ಮಹದೇವಪ್ಪ ಮಗ ಸುನಿಲ್ ಬೋಸ್ ಸ್ಪರ್ಧಿಸಲು ಆಸಕ್ತಿ ಹೊಂದಿದ್ದರು. ಅಪ್ಪ ಮಗ ಇಬ್ಬರೂ ಒಂದು ಸುತ್ತ ಕ್ಷೇತ್ರದಲ್ಲಿ ಓಡಾಡಿ ತಮ್ಮ ಪ್ರಚಾರವನ್ನೂ ಆರಂಭಿಸಿದ್ದರು. ಆದರೆ ಏನಾಯ್ತೋ ಏನೋ ಕಾಂಗ್ರೆಸ್ ಹೈಕಮಾಂಡ್ ಸುನಿಲ್ ಬೋಸ್ ಸ್ಪರ್ಧೆಗೆ ಒಲವು ತೋರಲೇ ಇಲ್ಲ. ಕೊನೆಗೆ ಈಗ ಕೇಶವ ಮೂರ್ತಿ ಕಾಂಗ್ರೆಸಿಗೆ ಬಂದಿದ್ದಾರೆ. ಏನಾಗುತ್ತದೋ ನೋಡಬೇಕು.
ಮೂರ್ತಿ, ಬೋಸ್ ಯಾರು ಬಂದರೂ ಅಷ್ಟೆ
ಮುಂಬರಲಿರುವ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಾಗೂ 2018ರ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಮೈಸೂರಿನ ಹೊರವಲಯದ ಹೂಟಗಳ್ಳಿಯಲ್ಲಿ ಜಿಲ್ಲಾ ಬಿಜೆಪಿ ಗ್ರಾಮಾಂತರ ವಿಶೇಷ ಕಾರ್ಯಕಾರಣಿ ಸಭೆ ಮಂಗಳವಾರ ಆಯೋಜಬೆಯಾಗಿತ್ತು. ಇದರಲ್ಲಿ ಮಾತನಾಡಿದ ವಿ. ಶ್ರೀನಿವಾಸ್ ಪ್ರಸಾದ್, "ಕಾಂಗ್ರೆಸ್ ಗೆ ಯಾವ ಮೂರ್ತಿ ಬಂದರೇನು, ಯಾವ ಬೋಸ್ ಬಂದರೇನು, ಬಿಜೆಪಿ ಅಭ್ಯರ್ಥಿ ಯಾರೆಂದು ನಿರ್ಧಾರವಾಗಿದೆ. ಕಾಂಗ್ರೆಸ್ ನಲ್ಲಿ 30 ದಿನಕ್ಕೆ 30 ಅಭ್ಯರ್ಥಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಬಿಜೆಪಿ ಯಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ," ಎಂದು ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ನಂಜನಗೂಡು ಉಪ ಚುನಾವಣೆ ಮುಗಿದ ಬಳಿಕ ಮೈಸೂರು ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುತ್ತೇನೆ. ಎರಡೂ ಜಿಲ್ಲೆಯಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಪಡಿಸುತ್ತೇನೆ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ. "ರಾಜ್ಯದಲ್ಲಿ ಯಾವುದೇ ಪಕ಼್ಷದ ಸರ್ಕಾರವಿದ್ದರೂ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನಷ್ಟೇ ರಾಜ್ಯಪಾಲರು ಓದುತ್ತಾರೆ. ಆ ಭಾಷಣದಲ್ಲಿ ಸರ್ಕಾರದ ಸಾಧನೆಗಳನ್ನು ಮಾತ್ರ ಸೇರಿಸಲಾಗಿರುತ್ತದೆ. ಸರ್ಕಾರದ ವೈಫಲ್ಯಗಳನ್ನು ಸೇರಿಸುವಂತಿದ್ದರೆ ಮಾಜಿ ಸಚಿವ ಎಚ್.ವೈ ಮೇಟಿ, ಸಚಿವರಾದ ತನ್ವೀರ್ ಸೇಠ್, ರಮೇಶ್ ಜಾರಕಿಹೊಳಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪ್ರಕರಣಗಳನ್ನು ಪ್ರಸ್ತಾಪಿಸಬೇಕಾಗುತ್ತಿತ್ತು," ಎಂದು ಲೇವಡಿ ಮಾಡಿದರು