Mysuru: ಬೆಟ್ಟದ ನಂದಿಗೆ ಮಹಾಭಿಷೇಕ; ಸಂಭ್ರಮದಿಂದ ಭಾಗವಹಿಸಿದ ಭಕ್ತರು
ಕಾರ್ತಿಕ ಮಾಸದ ಪ್ರಯುಕ್ತ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮಹಾನಂದಿಗೆ 32 ಸುಗಂಧ ದ್ರವ್ಯಗಳಿಂದ ಮಹಾ ಮಜ್ಜನ ಕಾರ್ಯವನ್ನು ನೆರವೇರಿಸಲಾಯಿತು. ಬೆಟ್ಟದ ಬಳಗ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಹಾಭಿಷೇಕ ಮಾಡಲಾಯಿತು. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹೊಸ ಮಠದ ಚಿದಾನಂದ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಮಜ್ಜನ ಕಾರ್ಯಕ್ರಮ ನಡೆಯಿತು. ನಂದಿಗೆ ವಿಶೇಷ ಪೂಜೆ ಕಾರ್ಯಕ್ರಮ ನಡೆಯಿತು.
ಅರಿಸಿನ, ಕುಂಕುಮ, ಹಾಲು ಜೇನುತುಪ್ಪ, ಗಂಧ, ಮೊಸರು, ಸಕ್ಕರೆ, ಪಂಚಾಮೃತ, ವಿವಿಧ ಪುಷ್ಪ, ಬಿಲ್ವಪತ್ರೆ ಸೇರಿದಂತೆ 36 ವಿವಿಧ ಸುಗಂಧ ದ್ರವ್ಯಗಳಿಂದ ಅಭಿಷೇಕ ಮಾಡಿಸಲಾಯಿತು. ಈ ಸಂದರ್ಭದಲ್ಲಿ ನಂದಿ ನಾನಾ ಬಣ್ಣಗಳಿಂದ ಮಿಂದು ಭಕ್ತರ ಕಣ್ಮಣ ಸೆಳೆಯಿತು. ಮಹಾಭಿಷೇಕವನ್ನು ಸಾವಿರಾರು ಮಂದಿ ಭಕ್ತರು ಕಣ್ತುಂಬಿಕೊಂಡು ಧನ್ಯರಾದರು.

ಕಳೆದ 18 ವರ್ಷಗಳಿಂದ ಚಾಮುಂಡಿ ಬೆಟ್ಟದಲ್ಲಿ ವಾಸಿಸುವ ಭಕ್ತರು, ಬೆಟ್ಟ ಹತ್ತುವ ವಾಯುವಿಹಾರಿಗಳು ಸೇರಿದಂತೆ ಹಲವು ಜನರು ಕಾರ್ತಿಕ ಮಾಸದ ಪ್ರಯುಕ್ತ ಬೆಟ್ಟದ ನಂದಿಗೆ ಮಹಾಮಜ್ಜನ ಮಾಡುವ ಕಾರ್ಯವನ್ನು ಕೈಗೊಳ್ಳುತ್ತಾ ಬಂದಿದ್ದು, ಈ ಬಾರಿ ಮಹಾಭಿಷೇಕದ ಸಂದರ್ಭ ಸುಖಸಮೃದ್ಧಿ ಕರುಣಿಸುವಂತೆಯೂ ಪ್ರಾರ್ಥಿಸಿರುವುದು ವಿಶೇಷವಾಗಿದೆ.
ಈ ವೇಳೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಕಾರ್ತಿಕ ಮಾಸದಲ್ಲಿ ಮಹಾರಾಜರ ಕಾಲದಿಂದಲೂ ಬೆಟ್ಟದ ನಂದಿಗೆ ಅಭಿಷೇಕ ನಡೆಯುತ್ತಾ ಬಂದಿದೆ. ಇದೊಂದು ದೈವಿಕ ಕಾರ್ಯವಾಗಿದ್ದು, ಭಕ್ತಿಯ ಜಾಗೃತಿಗೆ, ಪ್ರಸರಣೆಗೆ ಅಗತ್ಯ. ಬೆಟ್ಟದ ಬಳಗದ ಸದಸ್ಯರು ಮತ್ತು ಭಕ್ತಾಧಿಗಳು ಅಭಿಷೇಕವನ್ನು ಉತ್ತಮವಾಗಿ ನೆರವೇರಿಸಿದ್ದು, ಇದರಿಂದ ದೇಶ, ಜನತೆಗೆ ಶಾಂತಿ, ನೆಮ್ಮದಿ ದೊರಕಲಿ ಎಂದು ಹೇಳಿದರು.
ಚಾಮುಂಡಿ ಬೆಟ್ಟ ಹತ್ತುವ ಹಾದಿಯಲ್ಲಿ 700ನೇ ಮೆಟ್ಟಿನ ಬಳಿ ನಂದಿಯ ಏಕಶಿಲಾಮೂರ್ತಿಯನ್ನು ನಿರ್ಮಿಸಲಾಗಿದೆ. ಇದು 16 ಅಡಿ ಎತ್ತರ. 25 ಅಡಿ ಉದ್ದವಿದೆ. 2006ರಿಂದ ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ನಂದಿಗೆ ಅಭಿಷೇಕ ನಡೆಸಿಕೊಂಡು ಬರುತ್ತಿದೆ. 2016ರಿಂದ ಟ್ರಸ್ಟ್ ಸ್ಥಾಪಿಸಿ ಅಧಿಕೃತವಾಗಿ ಪುರಾತತ್ವ ಇಲಾಖೆ ಅನುಮತಿಯೊಂದಿಗೆ ಅಭಿಷೇಕ ನಡೆಸಿಕೊಂಡು ಬರಲಾಗುತ್ತಿದೆ
ಪ್ರತಿ ವರ್ಷ ಕೂಡ ಈ ಟ್ರಸ್ಟ್ ಅಚ್ಚುಕಟ್ಟಾಗಿ ಮಸ್ತಕಾಭಿಷೇಕ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದಕ್ಕೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾವಿರಾರು ಜನ ಭಾನುವಾರ ಈ ಕಾರ್ಯದಲ್ಲಿ ಭಾಗವಹಿಸಿ ನಂದಿಗೆ ಪ್ರಾರ್ಥನೆ ಸಲ್ಲಿಸಿದರು.












Click it and Unblock the Notifications