ಕಾಂಗ್ರೆಸ್, ಜೆಡಿಎಸ್ ಮುಖಂಡರು ನಮ್ಮ ಸಂಪರ್ಕದಲ್ಲಿದ್ದಾರೆ: ಕಟೀಲ್
ಮೈಸೂರು, ಏಪ್ರಿಲ್ 12; "ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರಿಗೆ ಭ್ರಮನಿರಸನವಾಗಿದೆ. ಆದ್ದರಿಂದ ಬಿಜೆಪಿ ಸೇರಲು ಮುಂದಾಗುತ್ತಿದ್ದಾರೆ. ಜಿಲ್ಲಾ, ರಾಜ್ಯಮಟ್ಟದ ಬಹುತೇಕ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೊಸ ಬಾಂಬ್ ಸಿಡಿಸಿದರು.
ಮಂಗಳವಾರ ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷವಿದೆ. ನಾಲ್ಕು ವರ್ಷದಲ್ಲಿ ಮೂರು ವರ್ಷ ಬಿಜೆಪಿ ಆಡಳಿತ ನಡೆಸಿದೆ. ಸಂಘಟನೆಯಲ್ಲಿ ಬಿಜೆಪಿ ಬೆಳೆದಿದೆ" ಎಂದರು.
"ಎಲ್ಲಾ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದಿದೆ. ಸಂಘಟನೆ ಹಾಗೂ ರಾಜಕೀಯ ಚಟುವಟಿಕೆಗೆ ವೇಗ ಕೊಡಬೇಕು. ಆದ್ದರಿಂದ ಮೂರು ತಂಡಗಳ ಆಯೋಜಿಸಲಾಗಿದೆ" ಎಂದು ಮಾಹಿತಿ ನೀಡಿದರು.

"ನನ್ನನ್ನು ಮೈಸೂರು ವಿಭಾಗಕ್ಕೆ ಸೇರಿಸಲಾಗಿದೆ. ರಾಜಕೀಯ ಹಾಗೂ ಸಂಘಟನೆ ಸ್ಥಿತಿಗತಿ ಅವಲೋಕಿಸುತ್ತಿದ್ದೇವೆ. ಶಕ್ತಿ ಕೇಂದ್ರದ ಮೂಲಕ ಬೂತ್ ಮಟ್ಟದಲ್ಲಿಯು ಸಭೆ ನಡೆಸಲಾಗುತ್ತಿದೆ. ಇನ್ನು ಒಂದು ವರ್ಷದಲ್ಲಿ ರಾಜಕೀಯ ವೇಗ ಕೊಡಲು ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಪಕ್ಷ, ಸರ್ಕಾರದ ಬಗ್ಗೆ ಜನರ ಅಭಿಪ್ರಾಯ ಕ್ರೋಢಿಕರಿಸುತ್ತಿದ್ದೇವೆ" ಎಂದರು.
"ಭಾರತೀಯ ಜನತಾ ಪಾರ್ಟಿ ಮೇಲೆ ನಂಬಿಕೆ ಜಾಸ್ತಿಯಾಗಿದೆ. ಪ್ರಧಾನಿಗಳ ಚಿಂತನೆ, ರಾಜ್ಯ ಸರ್ಕಾರ ಕಾರ್ಯಕ್ರಮಗಳು ಜನರಿಗೆ ಸ್ಪಂದನೆಯಾಗಿದೆ. ಅಮಿತ್ ಶಾ 130 ಸ್ಥಾನಗಳಿಸಬೇಕು ಎಂದು ಹೇಳಿದ್ದಾರೆ. 150ಕ್ಕೂ ಹೆಚ್ಚು ಸ್ಥಾನಗಳಿಸಲು ಎಲ್ಲ ರೀತಿಯ ಪ್ರಯತ್ನ ನಡೆಯುತ್ತಿದೆ" ಎಂದು ವಿವರಿಸಿದರು.
ತಪ್ಪು ಕಂಡು ಬಂದರೆ ಕ್ರಮ; ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್, "ಘಟನೆಗೆ ದುಃಖ ವ್ಯಕ್ತಪಡಿಸುತ್ತೇನೆ. ತನಿಖೆಯಲ್ಲಿ ತಪ್ಪು ತಿಳಿದು ಬಂದರೆ ಯಾರೇ ಆದರೂ ಕ್ರಮ ಜರುಗಿಸಲಾಗುವುದು. ರಾಜ್ಯಾಧ್ಯಕ್ಷನಾಗಿ ತನಿಖೆಗೆ ಆಗ್ರಹಿಸುತ್ತೇನೆ. ತನಿಖೆ ಆಧಾರದ ಮೇಲೆ ಕ್ರಮಕೈಗೊಳ್ಳಲಾಗುತ್ತದೆ" ಎಂದರು.
ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ ವಿಚಾರದ ಬಗ್ಗೆ ಮಾತನಾಡಿ, "ತನಿಖೆಯಾದ ಮೇಲೆ ರಾಜೀನಾಮೆ ಬಗ್ಗೆ ತೀರ್ಮಾನ. ಸರಕಾರದ ಮೇಲೆ ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ನರೇಂದ್ರ ಮೋದಿ ಮೇಲೆ ಆಗಲೇ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಆ ಪಕ್ಷಕ್ಕೆ ಸ್ಪಷ್ಟತೆ ಇಲ್ಲ. ಇಂತಹ ಘಟನೆ ಬಂದಾಗ ಅಪಪ್ರಚಾರ ಮಾಡೋದು ಕಾಂಗ್ರೆಸ್ ಚಾಳಿ" ಎಂದು ಟೀಕಿಸಿದರು.
ಕಾನೂನಿನ ಮೇಲೆ ಗೌರವವಿಲ್ಲ; ಈಶ್ವರಪ್ಪ ರಾಜೀನಾಮೆ ಕೇಳಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, "ನ್ಯಾಯಾಲಯದ ತೀರ್ಪಿನ ವಿರುದ್ದ ಮಾತನಾಡಿದ ಮೊದಲ ವಿಪಕ್ಷ ನಾಯಕ ಸಿದ್ದರಾಮಯ್ಯ. ಹರ್ಷ, ಚಂದ್ರು ಕೊಲೆ ಬಗ್ಗೆ ಆರೋಪಿಗಳ ಬಂಧನದ ಬಗ್ಗೆ ಮಾತನಾಡಿಲ್ಲ. ಪರಿಹಾರದ ಹಣ ನೀಡಿದ ವಿಚಾರ ಮಾತನಾಡುತ್ತಾರೆ. ಇವರಿಗೆ ಕಾನೂನು ಮೇಲೆ ಗೌರವ ಇಲ್ಲ. ನಮ್ಮ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ" ಎಂದು ದೂರಿದರು.
"ಗುತ್ತಿಗೆದಾರ ಸಂತೋಷ್ ಪಾಟೀಲ್ ಡೆತ್ ನೋಟ್ನಲ್ಲಿ ಸಹಿಯೇ ಇಲ್ಲ. ವಾಟ್ಸಾಪ್ ಮೇಸೆಜ್ ಹರಿದಾಡುತ್ತಿದೆ. ನಾನೇ ಪಕ್ಷದ ಅಧ್ಯಕ್ಷರಿಗೆ ತಿಳಿಸಿದ್ದೇನೆ ತನಿಖೆ ನಡೆಸಿ ಅಂತ. ನಾನು ಮುಖ್ಯಮಂತ್ರಿ ಬಳಿ ಹೇಳಿ ಒಪ್ಪಿಗೆ ಪಡೆದು ನಂತರ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದೇನೆ. ಕಾಂಗ್ರೆಸ್ನವರು ಹೇಳಿದ ಪ್ರಕಾರ ಕೇಳಿದರೆ ನೂರು ಬಾರಿ ರಾಜೀನಾಮೆ ನೀಡಬೇಕಿತ್ತು. ನಾವು ಅವರನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ನಾನೇ ಘಟನೆ ಬಗ್ಗೆ ತನಿಖೆ ಮಾಡಿ ಎಂದು ಸಿಎಂಗೆ ಒತ್ತಾಯ ಮಾಡಿದ್ದೇನೆ" ಎಂದರು.












Click it and Unblock the Notifications