ನೋಟು ಅಮಾನ್ಯೀಕರಣದಿಂದ ದಿವಾಳಿ: ದಯಾಮರಣಕ್ಕೆ ಅರ್ಜಿ
ಮೈಸೂರು, ಜೂನ್ 11: ನೋಟು ಅಮಾನ್ಯೀಕರಣದಿಂದ ದಿವಾಳಿತನವಾಗಿದೆ ಹಾಗೂ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಮೈಸೂರು ಶಾಖೆಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತಿದ್ದೇವೆ ಎಂದು ಕುಟುಂಬವೊಂದು ದಯಾಮರಣಕ್ಕೆ ಅನುಮತಿ ನೀಡಬೇಕೆಂದು ಕೋರಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದೆ. ಹುಣಸೂರು ತಾಲ್ಲೂಕಿನ ಮನುಗನಹಳ್ಳಿ ಗ್ರಾಮದ ಶೇಖರ್ ಕುಟುಂಬವೇ ದಯಾಮರಣಕ್ಕೆ ಮನವಿ ಸಲ್ಲಿಸಿರುವುದು.
ಇದೇ ವೇಳೆ ಮಾತನಾಡಿದ ಶೇಖರ್, ನಾನು 26 ಚದರ ಅಡಿಗೆ ಎರಡು ಅಂತಸ್ತಿನ ವಾಣಿಜ್ಯ ಮಳಿಗೆ ನಿರ್ಮಿಸಲು ದಿವಾನ್ ಹೌಸಿಂಗ್ ಕಾರ್ಪೊರೇಷನ್ ಲಿಮಿಟ್ ಮೈಸೂರು ಶಾಖೆಯಲ್ಲಿ 22 ಲಕ್ಷ ರೂಪಾಯಿಗಳನ್ನು ಪಡೆದಿದ್ದೆ. ನಂತರ ಮಾನಸ ಹೋಂ ಪ್ರಾಡಕ್ಟ್ ಎಂಬ ಚಿಕ್ಕ ಸಂಸ್ಥೆಯೊಂದನ್ನು ರಿಜಿಸ್ಟರ್ ಮಾಡಿಸಿ ದಿನವೊಂದಕ್ಕೆ 10 ಸಾವಿರ ರೂಪಾಯಿ ವ್ಯಾಪಾರ ವಹಿವಾಟು ನಡೆಸುತ್ತಿದ್ದೆ. ಹೆಚ್ಚಿನ ಲಾಭವೂ ಬರುತ್ತಿತ್ತು. ಪ್ರತಿ ತಿಂಗಳಿಗೆ 3-4ಲಕ್ಷ ರೂ ನಾಲ್ಕು ವ್ಯವಹಾರವಿತ್ತು. 40 ಸಾವಿರ ರೂಪಾಯಿವರೆಗೂ ಲಾಭವಿತ್ತು. ಆದರೆ ನೋಟು ಅಮಾನ್ಯೀಕರಣದ ವೇಳೆ ವ್ಯವಹಾರ ಇಳಿಮುಖವಾಯಿತು. ಆರ್ಥಿಕ ಸಂಕಷ್ಟದಿಂದಾಗಿ 2017 ಆಗಸ್ಟ್ ನಿಂದ ಇಲ್ಲಿಯವರೆಗೆ ಬ್ಯಾಂಕಿನಲ್ಲಿ ಪಡೆದ ಸಾಲದ ಕಂತು ಜಮಾ ಮಾಡಲು ಸಾಧ್ಯವಾಗಿಲ್ಲ. ಈಗಲೂ ನಾವು ಪರೋಟಾ ವ್ಯಾಪಾರ ನಡೆಸುತ್ತಿದ್ದೇವೆ. ಈ ನಡುವೆ ಫೈನಾನ್ಸ್ ಕಾರ್ಪೊರೇಷನ್ ಸಿಬ್ಬಂದಿ ಮನೆಗೆ ಬಂದು ನನಗೆ ಹಾಗೂ ನನ್ನ ಪತ್ನಿಯನ್ನು ನಿಂದಿಸಿದ್ದಾರೆ. ನಿನ್ನನ್ನು ಜೈಲಿಗೆ ಕಳಿಸುತ್ತೇವೆ, ಮನೆಯನ್ನು ಹರಾಜು ಹಾಕಿ ಹಣವನ್ನು ಬ್ಯಾಂಕಿಗೆ ಜಮೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಸುತ್ತಿರುವುದಾಗಿ ಆರೋಪಿಸಿದ್ದಾರೆ.
ಪೊಲೀಸರ ಮೂಲಕ ಕುಟುಂಬವನ್ನು ಅರೆಸ್ಟ್ ಮಾಡಿಸುತ್ತೇವೆ ಎಂದು ಗ್ರಾಮಸ್ಥರ ಸಮ್ಮುಖದಲ್ಲಿ ಬೆದರಿಕೆ ಹಾಕಿದ್ದಾರೆ. 1.70ಲಕ್ಷ ರೂಗಳನ್ನು ಬ್ಯಾಂಕಿಗೆ ಕಟ್ಟಲು ಹೋದಾಗ ಹಣವನ್ನು ಕಟ್ಟಿಸಿಕೊಳ್ಳದೆ ಬೈದು ಕಳುಹಿಸಿದ್ದಾರೆ. ಸಾಲ ತೀರಿಸಲು ಪ್ರಯತ್ನಿಸಿದರೂ ಅವಕಾಶವನ್ನೇ ನೀಡಲಿಲ್ಲ. ನಮಗೆ ಮನೆ ಬಿಟ್ಟು ಬೇರೆ ಯಾವುದೇ ಸ್ಥಿರಾಸ್ತಿ ಇಲ್ಲ ಎಂದು ನುಡಿದಿದ್ದಾರೆ.

ಇರುವ ಮನೆಯನ್ನು ಕಳೆದುಕೊಂಡು ಬೀದಿ ಪಾಲಾಗುವ ಭಯದಿಂದ ಹಾಗೂ ಅಪಮಾನವನ್ನು ತಾಳಲಾರದೇ ಕುಟುಂಬ ಸಮೇತ ಆತ್ಮಹತ್ಯೆಗೆ ನಾವು ತಯಾರಿದ್ದು, ದಯಾಮರಣಕ್ಕೆ ಅನುಮತಿ ನೀಡಬೇಕು, ಹಾಗೆಯೇ ಬ್ಯಾಂಕ್ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ನಮೂದಿಸಿದ್ದಾರೆ.












Click it and Unblock the Notifications