ಕೇವಲ 24 ಗಂಟೆಗಳಲ್ಲಿ ಕೊಲೆಗಾರರನ್ನು ಪತ್ತೆ ಹಚ್ಚಿದ ಮೈಸೂರು ಪೊಲೀಸರು
ಮೈಸೂರು, ಜನವರಿ 30:ನಗರದಲ್ಲಿ ಸೋಮವಾರ (ಜ.28) ನಸುಕಿನಲ್ಲಿ ಆಟೋ ಚಾಲಕ ಮನು (ಜಾನಿ) ಅವರನ್ನು ಕೊಲೆ ಮಾಡಿದ 3 ಆರೋಪಿಗಳನ್ನು ಪ್ರಕರಣ ದಾಖಲಾದ 24 ಗಂಟೆಗಳಲ್ಲೇ ಲಕ್ಷ್ಮೀಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗುಂಡೂರಾವ್ ನಗರದ ನಿಖಿಲ್ (22), ಮಧುಸೂದನ್ (26) ಹಾಗೂ ಅಶೋಕಪುರಂನ ಯೋಗಾನಂದ (30) ಬಂಧಿತ ಆರೋಪಿಗಳು.
ಕೊಲೆ ಮಾಡಿದ ನಂತರ ನಿಖಿಲ್ ಮತ್ತು ಮಧುಸೂದನ್ ಅವರು ಬೆಂಗಳೂರಿನಲ್ಲಿ ಅವಿತುಕೊಂಡಿದ್ದರು. ಆರೋಪಿಗಳ ಮೊಬೈಲ್ ಕರೆ ಹಾಗೂ ಟವರ್ಗಳ ಆಧಾರದ ಮೇಲೆ ಬೆಂಗಳೂರಿನ ರೈಲು ನಿಲ್ದಾಣದ ಸಮೀಪ, ಮತ್ತೊಬ್ಬ ಆರೋಪಿ ಯೋಗಾನಂದ ಅವರನ್ನು ಯರಗನಹಳ್ಳಿಯಲ್ಲಿ ಬಂಧಿಸಿದ್ದಾರೆ.

ಕೊಲೆ ಮಾಡಿದ್ದಾದರೂ ಏಕೆ?
ಕೊಲೆಗೀಡಾದ ಮನುವಿಗೂ ಆರೋಪಿಗಳಿಗೂ ಕಳೆದೊಂದು ವರ್ಷದಿಂದ ವೈಷಮ್ಯ ಇತ್ತು. ಇವರಿಂದ ಬಾಡಿಗೆಗೆ ಆಟೋ ಪಡೆದು ಚಾಲನೆ ಮಾಡುತ್ತಿದ್ದಾಗ ಮನು ಅಪಘಾತ ಮಾಡಿಕೊಂಡಿದ್ದರು. ಇದರ ವೆಚ್ಚ ಭರಿಸುವ ವಿಚಾರದಲ್ಲಿ ವೈಮನಸ್ಯ ಮೂಡಿತ್ತು. ಇದೇ ವಿಚಾರಕ್ಕೆ ಹಲವು ಬಾರಿ ಜಗಳಗಳು, ಹೊಡೆದಾಟಗಳೂ ನಡೆದಿದ್ದವು.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣವೊಂದು ತಿಂಗಳ ಹಿಂದಷ್ಟೇ ದಾಖಲಾಗಿತ್ತು. ಹಣ ಕೊಡುವುದಿಲ್ಲ, ಪೊಲೀಸ್ ಠಾಣೆಗೆ ದೂರು ಕೊಟ್ಟರೂ ಏನೂ ಮಾಡುವುದಕ್ಕೆ ಆಗಲಿಲ್ಲ ಎಂದು ಮನು ಪದೇ ಪದೇ ರಸ್ತೆಯಲ್ಲಿ ಸಾರ್ವಜನಿಕರ ಮುಂದೆ ರೇಗಿಸುತ್ತಿದ್ದ. ಇದರಿಂದ ಕೋಪಗೊಂಡು ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನುವಿನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಆರೋಪಿಗಳು ರಾತ್ರಿ ವೇಳೆ ಆಟೋ ಚಾಲನೆ ಮಾಡುತ್ತಿದ್ದ ಮನುವನ್ನು ಹಿಂಬಾಲಿಸಿದ್ದಾರೆ. ಪ್ರಯಾಣಿಕರನ್ನು ಇಳಿಸಿ ವಾಪಸ್ ಬರುತ್ತಿದ್ದ ಅವರನ್ನು ಅಗ್ನಿಶಾಮಕ ಠಾಣೆಯ ಬಳಿ ಅಡ್ಡಗಟ್ಟಿ ಹೊರಕ್ಕೆ ಎಳೆದುಕೊಂಡಿದ್ದಾರೆ. ಇವರ ನಡುವೆ ಮಾತಿಗೆ ಮಾತು ಬೆಳೆದಿದೆ. ಕೊನೆಗೆ ಕೋಪಗೊಂಡ ಆರೋಪಿಗಳು ಮನುವಿನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ನಂಜನಗೂಡು- ಊಟಿ ರಸ್ತೆಯ ಬದಿಯಲ್ಲಿ ಎಸೆದಿದ್ದರು. ಪೊಲೀಸರು ಇದೀಗ ಕೃತ್ಯಕ್ಕೆ ಬಳಸಿದ ಆಟೋ ಮತ್ತು ಮಾರಕಾಸ್ತ್ರಗಳನ್ನೂ ವಶಕ್ಕೆ ಪಡೆದಿದ್ದಾರೆ.












Click it and Unblock the Notifications