ಮೈಸೂರು: ಹಲವು ದಿನಗಳಿಂದ ದ್ವಿಚಕ್ರ ವಾಹನ ಕದಿಯುತ್ತಿದ್ದ ಕಳ್ಳ ಸೆರೆ
ಮೈಸೂರು, ಅಕ್ಟೋಬರ್ 06: ಮೈಸೂರು ನಗರದಲ್ಲಿ ಬೈಕ್ ಕಳ್ಳರನ್ನು ಹಿಡಿದು ಜೈಲಿಗೆ ತಳ್ಳುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದು, ಈಗಾಗಲೇ ಹಲವರು ಸಿಕ್ಕಿಬಿದ್ದಾರೆ. ಇದೀಗ ಮತ್ತೊಬ್ಬ ಬೈಕ್ ಕಳ್ಳ ಸಿಕ್ಕಿಬಿದ್ದಿದ್ದು ಆತನಿಂದ ಮೂರು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸೆಕೆಂಡ್ ಹ್ಯಾಂಡ್ ಬೈಕ್ ಕೊಳ್ಳುವ ಮುನ್ನ ಎಚ್ಚರ ವಹಿಸಿ
ಮೈಸೂರಿನ ಶಾರದಾದೇವಿನಗರ ನಿವಾಸಿ ದಿ. ವರದರಾಜು ಎಂಬುವರ ಪುತ್ರ ಕಿರಣ್ ಅಲಿಯಾಸ್ ಹುಚ್ಚಾ ಕಿರಣ್ ಎಂಬಾತನೇ ಸಿಕ್ಕಿಬಿದ್ದವನು. ಈತ ಬೈಕ್ ಗಳನ್ನು ಕಳ್ಳತನ ಮಾಡಿ ಬಳಿಕ ಅದನ್ನು ಬೇರೆಯವರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುವ ದಂಧೆಯಲ್ಲಿ ನಿರತನಾಗಿದ್ದ.
ಈ ನಡುವೆ ಈತ ತಾನು ಕದ್ದಿದ್ದ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ನಲ್ಲಿ ಓಡಾಡುತ್ತಾ ಮಾರಾಟಕ್ಕೆ ಹೊಂಚು ಹಾಕುತ್ತಿದ್ದ. ಅ.4ರಂದು ಮೈಸೂರು ನಗರದ ಸರಸ್ವತಿಪುರಂ ಠಾಣೆಯ ಪೊಲೀಸರು ಗಸ್ತಿನಲ್ಲಿರುವಾಗ ಜವರೇಗೌಡ ಪಾರ್ಕ್ ಬಳಿ ಹೀರೋ ಹೊಂಡಾ ಸ್ಲೆಂಡರ್ ಪ್ಲಸ್ ನಲ್ಲಿ ಬಂದ ಕಿರಣ್ ಇದ್ದಕ್ಕಿದ್ದಂತೆ ಪೊಲೀಸರನ್ನು ನೋಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಇದರಿಂದ ಸಂಶಯಗೊಂಡ ಪೊಲೀಸರು ಆತನನ್ನು ಹಿಂಬಾಲಿಸಿ ಹಿಡಿದು ವಿಚಾರಣೆಗೊಳಪಡಿಸಿದಾಗ ಈತ ತಾನು ಮಾಡಿದ ಕೃತ್ಯದ ಬಗ್ಗೆ ತಿಳಿಸಿದ್ದಾನೆ.
ಅದರಂತೆ ಈತ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದು, ಒಂದು ಲಕ್ಷ ಬೆಲೆ ಬಾಳುವ ಮೂರು ಮೋಟಾರ್ ಹೀರೋ ಹೊಂಡಾ ಸ್ಲೆಂಡರ್ ಪ್ಲಸ್, ಬಜಾಜ್ ಸಿ.ಟಿ. 100, ಸುಜುಕಿ ಸಮುರಾಯ್ ಸೇರಿ ಮೂರು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.