ಮೈಸೂರು: ಹೆಂಡತಿ ಜೈಲು ಪಾಲಾಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಗಂಡ
ಮೈಸೂರು, ಆಗಸ್ಟ್ 10: ಕಳ್ಳತನ ಪ್ರಕರಣದಲ್ಲಿ ಸಿಲುಕಿ ಹೆಂಡತಿ ಜೈಲುಪಾಲಾಗಿದ್ದಕ್ಕೆ ಗಂಡ ಮನನೊಂದ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ಇಂದು ನಡೆದಿದೆ.
ಸಾವಿಗೀಡಾದಾತ ಶಾರದಾದೇವಿ ನಗರದ ನಿವಾಸಿ ಮಂಜುನಾಥ್ (55). ರಾಮಕೃಷ್ಣ ನಗರದ ರವೀಂದ್ರ ರಾವ್ ಎಂಬವರ ಮನೆಯಲ್ಲಿ ಮನೆಗೆಲಸದಾಕೆ ಶುಭಾ ಹತ್ತು ಲಕ್ಷರೂ.ಮೌಲ್ಯದ ಚಿನ್ನಾಭರಣ ಬೆಲೆಬಾಳುವ ಕ್ಯಾಮರಾ, ಲೆನ್ಸ್, ಸೀರೆಗಳನ್ನು ಕದ್ದಿದ್ದರು.

ಕಳುವು ಕೃತ್ಯ ಸಿಸಿಟಿವಿ ಫುಟೇಜ್ ನಲ್ಲಿ ಸೆರೆಯಾಗಿತ್ತು. ಈ ಕುರಿತು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಆಕೆಯನ್ನು ಬಂಧಿಸಿದ್ದರು. ಇದರಿಂದ ಬೇಸರಗೊಂಡ ಶುಭಾ ಪತಿ ಮಂಜುನಾಥ್ ಆ.7ರಂದು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.
ತೀವ್ರ ಸುಟ್ಟ ಗಾಯಗಳೊಂದಿಗೆ ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ. ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿಯ ಮೇಲೆ ಅತ್ಯಾಚಾರ ಯತ್ನ: ಇಬ್ಬರ ಬಂಧನ
ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಇಬ್ಬರು ಯುವಕರನ್ನು ಮೈಸೂರಿನ ಉದಯಗಿರಿ ಪೊಲೀಸರು ಇಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಗಾಯತ್ರಿ ಪುರಂನ ಸುಹೇಲ್ (27)ಹಾಗೂ ಅಕ್ಮಲ್ (25) ಎಂದು ಗುರುತಿಸಲಾಗಿದೆ. ಆರೋಪಿಗಳು ಗಾಯತ್ರಿಪುರಂನ ಯುವತಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ಸಿಕ್ಕಿಬಿದ್ದಿದ್ದಾರೆ.
ಯುವತಿ ಬರುತ್ತಿದ್ದ ದ್ವಿಚಕ್ರವಾಹನಕ್ಕೆ ಆರೋಪಿಗಳು ಡಿಕ್ಕಿ ಹೊಡೆದಿದ್ದು, ಬಳಿಕ ಯುವತಿಯೊಂದಿಗೆ ಅನಗತ್ಯವಾಗಿ ಜಗಳ ತೆಗೆದ ಯುವಕರು ಹಲ್ಲೆಗೆ ಯತ್ನಿಸಿದ್ದಲ್ಲದೇ, ಆಕೆಯ ಬಟ್ಟೆಗಳನ್ನು ಹರಿದುಹಾಕಿ ಅನುಚಿತವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದರು. ಉದಯಗಿರಿ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳ್ಳತನಕ್ಕೆ ದೇವಸ್ಥಾನವೇ ಟಾರ್ಗೆಟ್!
ಮೈಸೂರಿನಲ್ಲಿ ದಿನೇ ದಿನೇ ಕಳ್ಳರು ಹೆಚ್ಚುತ್ತಿದ್ದು, ತಮ್ಮ ಕೈಚಳಕವನ್ನು ದೇವಸ್ಥಾನದಲ್ಲೇ ತೋರಿಸುತ್ತಿದ್ದಾರೆ. ಇದುವರೆಗೂ ಒಂದು ತಿಂಗಳ ಅವಧಿಯಲ್ಲಿ ಸುಮಾರು 4 - 5 ದೇವಸ್ಥಾನಗಳಲ ಕಳ್ಳತನ ನಡೆದಿದೆ. ಕಳೆದ ರಾತ್ರಿಯೂ ಸಹ ಜಿಲ್ಲೆ ಕೆ.ಆರ್. ನಗರ ಪಟ್ಟಣದ ದೇವಾಲಯಗಳಲ್ಲಿ ಸರಣಿ ಕಳ್ಳತನ ನಡೆದಿದೆ.

ಬಜಾರ್ ರಸ್ತೆಯ ಅಯ್ಯಪ್ಪಸ್ವಾಮಿ, ಸತ್ಯನಾರಾಯಣ ದೇವಾಲಯ ಹಾಗೂ ಅರ್ಕನಾಥ್ ರಸ್ತೆಯ ಕಾಳಿಕಾಂಬ ದೇವಾಲಯಗಳಲ್ಲಿ ಕಳುವು ನಡೆದಿದ್ದು ಹುಂಡಿಯ ಹಣಗಳನ್ನು ಕಳ್ಳರು ದೋಚಿದ್ದಾರೆ. ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರ ತಂಡ ಆಗಮಿಸಿದ್ದು ಪರಿಶೀಲನೆ ನಡೆಸಿದರು.












Click it and Unblock the Notifications