ಮೈಸೂರು ಕೊರೊನಾ ಫ್ರೀ: ಚಾಮುಂಡಿ ದೇವಿಗೆ ನಮಿಸಿದ ಎಸ್.ಟಿ.ಸೋಮಶೇಖರ್
ಮೈಸೂರು, ಮೇ 16: ಮಾರಣಾಂತಿಕ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಇಡೀ ಜಗತ್ತಿಗೆ ಮಾದರಿಯಾಗಿದೆ. ಮೈಸೂರಿನ ಎಲ್ಲಾ 90 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಹೀಗಾಗಿ, ಮೈಸೂರು ಇದೀಗ 'ಕೊರೊನಾ ಫ್ರೀ' ಆಗಿದೆ.
ಈ ಹಿನ್ನಲೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ನಾಡ ದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.
ಕೊರೊನಾ ನಿರ್ಮೂಲನೆ: ಜಗತ್ತಿಗೆ ಮೈಸೂರು ಮಾದರಿಯಾಗಿದ್ದು ಹೇಗೆ? ಇಲ್ಲಿದೆ ಮಾಹಿತಿ!
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಾಗ ಮೈಸೂರಿಗೆ ಆಗಮಿಸಿ, ಚಾಮುಂಡೇಶ್ವರಿ ಸನ್ನಿಧಾನಕ್ಕೆ ಭೇಟಿ ನೀಡಿದ್ದ ಸಚಿವ ಎಸ್.ಟಿ.ಸೋಮಶೇಖರ್, ಮೈಸೂರನ್ನು ಕೊರೊನಾ ಸಂಕಷ್ಟದಿಂದ ಪಾರು ಮಾಡುವಂತೆ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿದ್ದರು. ಇದೀಗ ಮೈಸೂರು ಕೊರೊನಾ ಮುಕ್ತವಾದ ಹಿನ್ನಲೆಯಲ್ಲಿ ಇವತ್ತು ಚಾಮುಂಡೇಶ್ವರಿ ಸನ್ನಿಧಾನಕ್ಕೆ ತೆರಳಿ ಎಸ್.ಟಿ.ಸೋಮಶೇಖರ್ ದೇವಿಗೆ ನಮನ ಸಲ್ಲಿಸಿದರು.
ಆದಷ್ಟು ಬೇಗ ರಾಜ್ಯ, ದೇಶ ಮತ್ತು ವಿಶ್ವದ ಸಂಕಷ್ಟವನ್ನು ನಿವಾರಿಸುವಂತೆ ಸಚಿವ ಎಸ್.ಟಿ.ಸೋಮಶೇಖರ್ ಇಂದು ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿದರು.
ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ರಾಮ್ ದಾಸ್, ಡಿಸಿಪಿ ಪ್ರಕಾಶ್ಗೌಡ, ಡಿಹೆಚ್ಓ ವೆಂಕಟೇಶ್ ಸೇರಿ ಹಲವರು ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟು ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಮೈಸೂರಿನಂತೆ ರಾಜ್ಯವನ್ನೂ ಕೊರೊನಾ ಮುಕ್ತ ಮಾಡುವಂತೆ ಬೇಡಿಕೊಂಡರು.
ಲಾಕ್ ಡೌನ್ ಇರುವ ಕಾರಣ ಎಲ್ಲರೂ, ದೇವಸ್ಥಾನದ ಹೊರಗೆ ನಿಂತು ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.
''90ಕ್ಕೆ 90 ಪ್ರಕರಣವನ್ನ ಮೈಸೂರು ಗೆದ್ದಿದೆ. ಜನ ಸದ್ಯ ನಿರಾಳ ಆಗಿದ್ದಾರೆ. ಲಾಕ್ ಡೌನ್ ನಿಯಮದಿಂದ ನಾವೂ ಕೂಡ ದೇವಾಲಯದ ಹೊರಗೆ ದರ್ಶನ ಮಾಡಬೇಕಾಗಿದೆ. ಜನಪ್ರತಿನಿಧಿಗಳಾದ ನಾವು ಆದೇಶಗಳನ್ನು ಪಾಲಿಸಬೇಕು. ಮುಂದಿನ ದಿನಗಳಲ್ಲಿ ದೇವಸ್ಥಾನದ ಪ್ರವೇಶದ ಬಗ್ಗೆ ತೀರ್ಮಾನ ಮಾಡಲಾಗುವುದು'' ಎಂದು ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.