ಪ್ರೀತಿಸಿದ್ದಕ್ಕೆ ಮಗಳನ್ನೇ ನೇಣು ಹಾಕಿ, ಬೆಂಕಿ ಹಚ್ಚಿ ಕೊಂದ ಪಾಪಿ ತಂದೆ
ಮೈಸೂರು, ಮಾರ್ಚ್ 2 : ಮೈಸೂರಿನ ಗೊಲ್ಲನಬೀಡು ಗ್ರಾಮದ ಒಕ್ಕಲಿಗ ಯುವತಿಯ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಸದ್ಯ ಪೊಲೀಸರ ವಶದಲ್ಲಿರುವ ತಂದೆ ತಪ್ಪೊಪ್ಪಿಕೊಂಡಿದ್ದಾರೆ.
ಮರ್ಯಾದಾ ಹತ್ಯೆ ಬಗ್ಗೆ ಮಾಹಿತಿ ಪಡೆದ ಎಚ್.ಡಿ.ಕೋಟೆ ಪಟ್ಟಣ ಪೊಲೀಸರು ಯುವತಿಯ ತಂದೆ ಕುಮಾರ್ ಎಂಬವರನ್ನು ವಶಕ್ಕೆ ತೆಗೆದುಕೊಂಡಿದ್ದರು. ಪೊಲೀಸರ ವಿಚಾರಣೆ ವೇಳೆ ಆರೋಪಿ ಕುಮಾರ್, ಪುತ್ರಿ ಸುಷ್ಮಾಳನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡರು.
ಪೊಲೀಸ್ ಕಸ್ಟಡಿಗೆ:
ಆರೋಪಿ ಕುಮಾರ ನನ್ನು ಪಟ್ಟಣ ಠಾಣೆ ಪೊಲೀಸರು ಗುರುವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಹೆಚ್ಚಿನ ತನಿಖೆ ಅಗತ್ಯವಿದ್ದು, ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಬೇಕೆಂದು ಸರ್ಕಾರಿ ಅಭಿಯೋಜಕರು ಮನವಿ ಮಾಡಿದರು. ಅದಕ್ಕೆ ಸಮ್ಮತಿಸಿದ ನ್ಯಾಯಾಧೀಶರು ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು.

ಸುಷ್ಮಾಳ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ತಾಯಿ ಜಯಂತಿ ಮತ್ತು ತಮ್ಮ ಕೆಂಪನಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಪ್ರಕರಣ ಬಯಲಿಗೆ ಬರುತ್ತಿದ್ದಂತೆಯೇ ಮಗಳನ್ನು ಪೋಷಕರೇ ಕೊಲೆ ಮಾಡಿ ಸುಟ್ಟುಹಾಕಿರುವ ಬಗ್ಗೆ ಗ್ರಾಮದ ಕೆಲವರು ಉಮೇಶ್ ಸಂಬಂಧಿಕರಿಗೆ ತಿಳಿಸಿದ್ದಾರೆ. ಉಮೇಶ್ ಸಂಬಂಧಿಕರು ಪಟ್ಟಣದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸಿಪಿಐ ಹರೀಶ್ ಕುಮಾರ್ ಮತ್ತು ಪಿಎಸ್ ಐ ಅಶೋಕ್ ಗ್ರಾಮಕ್ಕೆ ತೆರಳಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಕೊಲೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದರು. ಮರ್ಯಾದಾ ಹತ್ಯೆ ಪ್ರಕರಣ ನಡೆದಿರುವುದು ಖಚಿತಗೊಂಡ ಬಳಿಕ ಎಎಸ್ ಪಿ ರುದ್ರಮುನಿ ಅವರು ಸಿಬ್ಬಂದಿ ಗೊಲ್ಲನಬೀಡಿಗೆ ತೆರಳಿ, ಹತ್ಯೆ ನಡೆದ ಜಾಗ ಪರಿಶೀಲಿಸಿ, ಮತ್ತಷ್ಟು ವಿವರಗಳನ್ನು ಪಡೆದುಕೊಂಡರು.

ಘಟನೆ ವಿವರ:
ಗೊಲ್ಲನ ಬೀಡು ಗಾಮದ ಒಕ್ಕಲಿಗ ಜನಾಂಗದ ಯುವತಿ ಸುಷ್ಮಾ(20) ಸಮೀಪದ ಆಲನಹಳ್ಳಿಯ ದಲಿತ ಯುವಕ ಉಮೇಶ್(24) ಎಂಬಾತನನ್ನು ಕಾಲೇಜು ವ್ಯಾಸಂಗದ ವೇಳೆ ಪ್ರೀತಿಸಿದ್ದರು. ಮನೆಯವರ ವಿರೋಧ ವ್ಯಕ್ತವಾಗಿದ್ದರಿಂದ ಪ್ರೇಮಿಗಳಿಬ್ಬರೂ ಊರು ತೊರೆದಿದ್ದರು.
ಗ್ರಾಮದ ಮುಖಂಡರು, ಚುನಾಯಿತ ಪ್ರತಿನಿಧಿಗಳು ಯುವತಿ ಮತ್ತು ಯುವಕನನ್ನು ಊರಿಗೆ ಕರೆಸಿ ನ್ಯಾಯ ಪಂಚಾಯಿತಿ ನಡೆಸಿದ್ದರು. ಬಳಿಕ ಒಕ್ಕಲಿಗ ವರನೊಂದಿಗೆ ಮದುವೆಯಾಗಲು ಒಪ್ಪದ ಮಗಳನ್ನು ವಾರದ ಹಿಂದೆ ತಮ್ಮ ತೋಟದ ಮನೆಯಲ್ಲಿ ಕೊಲೆ ಮಾಡಿ ಸಮೀಪದ ಮಾವಿನ ತೋಟದ ಬಳಿ ಶವ ಸುಟ್ಟು ಹಾಕಿದ್ದರು. ಬಳಿಕ ಆ ಜಾಗದಲ್ಲಿ ಟ್ರಾಕ್ಟರ್ ನಿಂದ ಉಳುಮೆ ಮಾಡಿಸಿದ್ದರು!












Click it and Unblock the Notifications