Mysuru Dasara 2024: ನಾಡಹಬ್ಬದ ದಸರಾಗೆ ಅದ್ಧೂರಿ ಚಾಲನೆ: ಕನ್ನಡಿಗರ ಹಬ್ಬವೆಂದ ಡಾ. ಹಂಪ ನಾಗರಾಜಯ್ಯ
ಮೈಸೂರು, ಅಕ್ಟೋಬರ್ 03: ಇಂದಿನಿಂದ ರಾಜ್ಯದೆಲ್ಲಡೆ ದಸರಾ ಹಬ್ಬದ ಸಂಭ್ರಮ ಶುರುವಾಗಿದೆ. ವಿಶ್ವ ವಿಖ್ಯಾತ ಮೈಸೂರು ನಾಡ ಹಬ್ಬದ ಸಲುವಾಗಿ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಬೆಳ್ಳಿಯ ರಥದಲ್ಲಿ ಪ್ರತಿಷ್ಠಾಪನೆಯಾಗಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸಾಹಿತ್ಯ ಡಾ. ಹಂಪ ನಾಗರಾಜಯ್ಯ ಪುಷ್ಪಾರ್ಚನೆ ಸಲ್ಲಿಸಿದರು. ಈ ಮೂಲಕ 10 ದಿನಗಳ ದಸರಾ ಉತ್ಸವ 2024ಕ್ಕೆ ಅವರು ವಿಧ್ಯುಕ್ತ ಚಾಲನೆ ಕೊಟ್ಟಿದ್ದಾರೆ.
ನಾಡ ಹಬ್ಬ ಪ್ರಯುಕ್ತ ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿಗೆ ಗುರುವಾರ ಬೆಳಗ್ಗೆ 9.31ಕ್ಕೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಸಾಹಿತಿ ಹಂಪ ನಾಗರಾಜಯ್ಯ ಅವರೊಂದಿಗೆ ಗಣ್ಯರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್ .ಸಿ.ಮಹದೇವಪ್ಪ ಅಗ್ರಪೂಜೆ ಸಲ್ಲಿಸಿದರು. ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ನೆರವೇರಿಸಿದರು.

ಕಲಾತಂಡಗಳ ಮೆರವಣಿಗೆ ಜತೆ ಬೆಟ್ಟಕ್ಕೆ ಆಗಮನ
ಇದಕ್ಕು ಮೊದಲು ದಸರಾ ಉದ್ಘಾಟಕರಾದ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅವರನ್ನು ಮಹಿಷಾಸುರ ಪ್ರತಿಮೆಯಿಂದ ಚಾಮುಂಡೇಶ್ವರಿ ಸನ್ನಿಧಿ ಗೋಪುರದ ವರೆಗೆ ಕಲಾ ತಂಡಗಳ ಮೆರವಣಿಗೆಯೊಂದಿಗೆ ಕರೆ ತರಲಾಯಿತು. ಗಣ್ಯರು ಹಾಗೂ ಅಪಾರ ಭಕ್ತರು ಈ ಸಮಯದಲ್ಲಿ ಪಾಲ್ಗೊಂಡಿದ್ದರು.
ನಾಡಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ಸಾಹಿತಿ ಹಂಪನಾ ಅವರು, ದಸರಾ ಕನ್ನಡದ ಹಬ್ಬ, ಕನ್ನಡಿಗರ ಉತ್ಸವ. ದಸರಾಗೆ ತನ್ನದೇ ಆದ ಪ್ರಭಾವಳಿ, ಪರಂಪರೆ ಇದೆ. ಇದರ ಕೀರ್ತಿ ಎಲ್ಲೆಡೆ ಪಸರಿಸಿದೆ. ಇಂತಹ ವೈಭವದ ಉತ್ಸವಕ್ಕೆ ಚಾಲನೆ ನೀಡಿರುವುದು ಸಂತಸ ತಂದಿದೆ ಎಂದು ಅವರು ತಿಳಿಸಿದರು.

ತಾಯಿಗೆ ಬೆಳಗ್ಗೆ 4 ಗಂಟೆಯಿಂದ ಪೂಜೆ
ಚಾಮುಂಡೇಶ್ವರಿ ಬೆಟ್ಟದಲ್ಲಿ ತಾಯಿಗೆ ಬೆಳಗ್ಗೆ 4 ಗಂಟೆಯಿಂದಲೇ ಅನೇಕ ಪೂಜಾ ಕೈಂಕರ್ಯಗಳು, ವಿಶೇಷ ಪೂಜೆಗಳು ನಡೆಸಲಾಯಿತು. ನಂತರ ಚಾಮುಂಡಿಬೆಟ್ಟದಲ್ಲಿ ದೇವಾಲಯದ ಪಕ್ಕದ ಆವರಣದಲ್ಲಿ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ಸಜ್ಜುಗೊಳಿಸಲಾಗಿತ್ತು. ವೇದಿಕೆಯಲ್ಲಿ 30ರಿಂದ 45 ಮಂದಿ ಗಣ್ಯರು ಆಸೀನರಾಗಲು ಹಾಗೂ ಸಮಾರಂಭ ವೀಕ್ಷಿಸಲು 800 ಆಸನದ ವ್ಯವಸ್ಥೆ ಮಾಡಲಾಗಿತ್ತು. ಮುಂಜಾಗ್ರತಾ ದೃಷ್ಟಿಯಿಂದ ಚಾಮುಂಡಿ ಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಂಡು ಬಂತು.
ಸಮಾರಂಭದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ತಾಯಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಅಲಂಕೃತಗೊಂಡು ಕಂಗೊಳಿಸುತ್ತಿತ್ತು. ಪುಷ್ಪಾರ್ಚನೆ ಸಲ್ಲಿಸಿ ಉತ್ಸವ ಮೂರ್ತಿ ವಿಶೇಷ ಪೂಜೆ ನೆರವೇರಿಸಿ ನಾಡಹಬ್ಬಕ್ಕೆ ಚಾಲನೆ ನೀಡಲಾಯಿತು. ನೆರೆದಿದ್ದ ಭಕ್ತರು ತಾಯಿಗೆ ನಮಿಸಿ ಪುನೀತರಾದರು. ಸಡಗರದಲ್ಲಿ ಪಾಲ್ಗೊಂಡರು.
9 ದಿನಗಳ ವಿವಿಧ ಪೂಜಾ ಕಾರ್ಯ
ಚಾಮುಂಡಿ ಬೆಟ್ಟದಲ್ಲಿ ಮುಂದಿನ 9 ದಿನಗಳ ವಿವಿಧ ಪೂಜಾ ಕಾರ್ಯಗಳು ಜರುಗಲಿವೆ. ನಿತ್ಯ ಸಂಜೆ 4.30ರಿಂದ 5.30ರವರೆಗೆ ಮಹಾಬಲೇಶ್ವರ ದೇವಾಲಯ ಮುಂಭಾಗದ ದರ್ಬಾರ್ ಮಂಟಪದಲ್ಲಿ ಚಾಮುಂಡೇಶ್ವರಿ ದೇವಿಗೆ ದರ್ಬಾರ್ ಉತ್ಸವ ಮಾಡಲಾಗುತ್ತದೆ. ಮೈಸೂರು ವೃತ್ತ, ದೇವಸ್ಥಾನ, ಅರಮನೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಸಂಚಾರಿ ಪೊಲೀಸರು ಅಗತ್ಯ ಸಿದ್ಧತೆ ಕೈಗೊಂಡಿದ್ದಾರೆ.












Click it and Unblock the Notifications