ಸ್ವಚ್ಛನಗರಿ ಮೈಸೂರಿನಲ್ಲಿ ಸೀಮೆಎಣ್ಣೆಗೆ ಭಾವಪೂರ್ಣ ಶ್ರದ್ಧಾಂಜಲಿ!
ಮೈಸೂರು, ಡಿಸೆಂಬರ್ 17 : ಸಾಂಸ್ಕೃತಿಕ ನಗರ ಮೈಸೂರು ಈಗಾಗಲೇ ಸ್ವಚ್ಛ ನಗರಿ ಎಂಬ ಹೆಸರಿಗೆ ಪಾತ್ರವಾಗಿರೋದು ನಮಗೆ ಅರಿವಿದೆ. ಇದೇ ನಿಟ್ಟಿನಲ್ಲಿ ಧೂಮಮುಕ್ತ ನಗರವನ್ನಾಗಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಇದಕ್ಕೆಂದೇ ಸೀಮೆಎಣ್ಣೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಜಿಲ್ಲಾಡಳಿತ ಮುಂದಾಗಿದೆ.
ಧೂಮ ಮುಕ್ತ ಜಿಲ್ಲೆಯನ್ನಾಗಿಸುವ ಉದ್ದೇಶದಿಂದ ಕಳೆದ 3 ತಿಂಗಳಿನಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸೀಮೆ ಎಣ್ಣೆ ವಿತರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಕರ್ನಾಟಕವನ್ನು ಧೂಮಮುಕ್ತ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಎಲ್ಲಾ ಮನೆಗಳಿಗೂ ಅಡುಗೆ ಅನಿಲ ಸಂಪರ್ಕ ಅಳವಡಿಸಿಕೊಳ್ಳಲು ಸೂಚನೆ ನೀಡಿಲಾಗಿದ್ದು, ಮೈಸೂರು ಜಿಲ್ಲೆಯಲ್ಲಿ ಕಳೆದ ಅಕ್ಟೋಬರ್ ತಿಂಗಳಿನಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೀಮೆಎಣ್ಣೆ ವಿತರಣೆಯನ್ನು ಸ್ಥಗಿತಗೊಳಿಸಿದೆ.[ತೈಲ ಬೆಲೆ ಏರಿಕೆಯ ಬಿಸಿ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ]

ಸೀಮೆಎಣ್ಣೆ ಬಳಕೆ ಮಾಡುತ್ತಿರುವವರು ತಮಗೆ ಸೀಮೆಎಣ್ಣೆ ಅಗತ್ಯ ಇದೆ ಎನ್ನುವುದನ್ನು ಸಾಬೀತುಪಡಿಸಿ ದಾಖಲೆ ನೀಡಿದರೆ ಅಂತಹವರಿಗೆ ಸೀಮೆಎಣ್ಣೆ ಬಿಡುಗಡೆ ಮಾಡಲಾಗುವುದು. ಆದರೆ ಕಳೆದ 3 ತಿಂಗಳಿನಿಂದ ಸೀಮೆಎಣ್ಣೆ ಬೇಕೆಂದು ನಗರ ಪ್ರದೇಶದವರ್ಯಾರೂ ಅರ್ಜಿ ಸಲ್ಲಿಸಿಲ್ಲ.
ನಗರದಲ್ಲಿ ಸೀಮೆಎಣ್ಣೆ ಪಡೆಯುತ್ತಿದ್ದ ಕಾರ್ಡ್ದಾರರ ಸಂಖ್ಯೆ 40 ಸಾವಿರವಿದೆ. ಇವರ ಕಾರ್ಡ್ ಮಾಹಿತಿಯನ್ನು ತೈಲ ಕಂಪನಿಗಳ ಡಾಟಾಗೆ ಹೊಂದಾಣಿಕೆ ಮಾಡಲಾಗಿ 17 ಸಾವಿರ ಕಾರ್ಡ್ಗಳು ಅನರ್ಹಗೊಂಡಿವೆ. ಉಳಿದ 23 ಸಾವಿರ ಪಡಿತರ ಕಾರ್ಡ್ದಾರರಿಗೂ ಅಡುಗೆ ಅನಿಲ ಸಿಲಿಂಡರ್ ಪಡೆದುಕೊಳ್ಳುವುದಕ್ಕೂ ಹಾಗೂ ಸೀಮೆಎಣ್ಣೆ ಬೇಕೇಬೇಕು ಎನ್ನುವುದಕ್ಕೆ ಸೂಕ್ತ ಮಾಹಿತಿ ನೀಡುವಂತೆ ಆಹಾರ ಇಲಾಖೆ ಸೂಚನೆ ನೀಡಿದೆ.
ಇದೇ ರೀತಿ ಗ್ರಾಮೀಣ ಪ್ರದೇಶದಲ್ಲಿದ್ದ 1,79,000 ಕಾರ್ಡ್ದಾರರಿಗೂ ಸೀಮೆಎಣ್ಣೆ ವಿತರಣೆ ನಿಲ್ಲಿಸಲಾಗಿದೆ. ತೈಲ ಸಂಸ್ಥೆಗಳಾದ ಐಒಸಿ, ಬಿಪಿಸಿ, ಹಾಗೂ ಎಚ್ಬಿಸಿಗಳು ಮಾರ್ಕೆಟಿಂಗ್ ಅಧಿಕಾರಿಗಳು, ವಿತರಕರರ ಸಭೆ ನಡೆಸಿ ಸಿಲಿಂಡರ್ ವಿತರಣೆ ಮಾಡುವ ಮನೆಗಳ ಸಮೀಕ್ಷೆ ಮಾಡಿ ವರದಿ ಪಡೆದುಕೊಳ್ಳುತ್ತಿದ್ದಾರೆ.
ಸೀಮೆಎಣ್ಣೆ ಬೇಕೇ ಬೇಕು ಎನ್ನುವವರು ತಮ್ಮ ಅಗತ್ಯತೆಯನ್ನು ದೃಢೀಕರಿಸುವ ದಾಖಲಾತಿ ನೀಡಿ ಸೀಮೆಎಣ್ಣೆ ಪಡೆಯಬಹುದು. ಸ್ಥಗಿತಗೊಳಿಸಿ 3 ತಿಂಗಳು ಕಳೆಯುತ್ತಾ ಬಂದಿದೆ ಈವರೆಗೂ ಯಾರೂ ಸೀಮೆಎಣ್ಣೆ ಬೇಕೆಂದು ಅರ್ಜಿ ಸಲ್ಲಿಸಿಲ್ಲ ಎನ್ನುತ್ತಾರೆ ಆಹಾರ ಇಲಾಖೆ ಉಪನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ. ಒಟ್ಟಾರೆ ಈ ಯೋಜನೆಯ ಜಾರಿಯಾದಾಗಿನಿಂದ ಮೈಸೂರು ಕೂಡ ಮುಂದಿನ ದಿನಗಳಲ್ಲಿ ಧೂಮಮುಕ್ತ ಜಿಲ್ಲೆಯ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ.












Click it and Unblock the Notifications