"ನಿಮ್ಮ ಸ್ಪಂದನೆಗೆ ನಾನು ಸದಾ ಸಿದ್ಧ" ಮೈಸೂರು ನೂತನ ಉಸ್ತುವಾರಿ ಸಚಿವರ ಅಭಯ
ಮೈಸೂರು, ಏಪ್ರಿಲ್ 11: ಇಂದು ಮುಂಜಾನೆಯೇ ನಗರ ಪ್ರದಕ್ಷಿಣೆ ಹಾಕಿದ ಜಿಲ್ಲಾ ಉಸ್ತುವಾರಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು, ಎಪಿಎಂಸಿಗೆ ಭೇಟಿ ನೀಡಿ ರೈತರು ಹಾಗೂ ವರ್ತಕರ ಅಹವಾಲು ಆಲಿಸಿದರು.
ಕೊರೊನಾ ಸೋಂಕು ನಿವಾರಕ ಟನಲ್ ಒಳಗೆ ಸಚಿವರು ಪ್ರವೇಶಿಸಿ ಉದ್ಘಾಟನೆ ಮಾಡುವ ಮೂಲಕ ಎಲ್ಲರೂ ಕಡ್ಡಾಯವಾಗಿ ನಿಯಮ ಪಾಲಿಸಬೇಕು ಎಂಬ ಸಂದೇಶ ಸಾರಿದರು. ಎಪಿಎಂಸಿಗೆ ಭೇಟಿ ನೀಡಿದ ಅವರು, ಅಲ್ಲಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದರು. ವರ್ತಕರಿಂದ ಕೈಗೊಳ್ಳಲಾಗಿರುವ ವ್ಯವಸ್ಥೆ ಸಮರ್ಪಕವಾಗಿದೆಯೇ ಎಂದು ಮಾಹಿತಿ ಪಡೆದರು. ಎಲ್ಲ ಸಮಸ್ಯೆಗಳಿಗೂ ತಕ್ಷಣವೇ ಸ್ಪಂದನೆ ಸಿಗಲಿದೆ, ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.
ಇದೇ ವೇಳೆ, ಮಾರ್ಕೆಟ್ ನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಸೂಚಿಸಿದರು. ರೈತರು ಹಾಗೂ ವರ್ತಕರ ಸಮಸ್ಯೆಗಳನ್ನು ಆಲಿಸಿ, ಸಹಕಾರ ಹಾಗೂ ಸಹಾಯಕ್ಕೆ ಸರ್ಕಾರ ಯಾವಾಗಲೂ ಬದ್ಧವಿದೆ. ನಿಮ್ಮ ಸ್ಪಂದನೆಗೆ ನಾನು ಸದಾ ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು. ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ನಾಗೇಂದ್ರ, ಜಿಲ್ಲಾಧಿಕಾರಿಗಳಾದ ಅಭಿರಾಂ ಜಿ. ಶಂಕರ್, ಎಸ್ ಪಿ ರಿಷ್ಯಂತ್, ಡಿಸಿಪಿ ಪ್ರಕಾಶ್ ಗೌಡ, ಸೇರಿ ಇನ್ನಿತರ ಎಪಿಎಂಸಿ ಅಧಿಕಾರಿಗಳು ಇದ್ದರು.

ಶೀಘ್ರ ಕೋಲ್ಡ್ ಸ್ಟೋರೇಜ್: "ಸಮಸ್ಯೆಗಳ ಪರಿಹಾರವೇ ನನ್ನ ಮೊದಲ ಆದ್ಯತೆ. ಪೊಲೀಸರಿಂದ ಸೇರಿ ಯಾರಿಂದಲೂ ಸಮಸ್ಯೆ ಆಗಬಾರದು ಎಂಬುದು ಮುಖ್ಯಮಂತ್ರಿಗಳ ಉದ್ದೇಶ ಸಹ. ಹೀಗಾಗಿ ನಾನೇ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಸೂಚಿಸುತ್ತಿದ್ದೇನೆ. ಎಪಿಎಂಸಿಗೆ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಅಳವಡಿಸಬೇಕಿದೆ. ಆ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇನೆ. ಕೋಲ್ಡ್ ಸ್ಟೋರೇಜ್ ಇದ್ದರೆ ತರಕಾರಿ ಇಟ್ಟು ಮಾರಲು ರೈತರಿಗೆ ಅನುಕೂಲ ಆಗಲಿದೆ. ಇದರಿಂದ ತರಕಾರಿ ಕೊಳೆಯುವಿಕೆಗೆ ಬ್ರೇಕ್ ಬೀಳಲಿದೆ" ಎಂದು ತಿಳಿಸಿದರು.
ರೈತರಿಗೆ ಸರಿಯಾದ ಬೆಂಬಲ ಬೆಲೆ ಸಿಗದೆ ತರಕಾರಿ ನಾಶಪಡಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಸರ್ಕಾರದಿಂದಲೇ ಖರೀದಿ ಮಾಡುವ ಬಗ್ಗೆ ಯೋಚನೆ ಮಾಡುತ್ತೇವೆ. ಕೆಲವೆಡೆ ಈಗಾಗಲೇ ಆ ಕೆಲಸ ಆಗುತ್ತಿದೆ. ರೈತರಿಂದ ಪಡೆದು ಹಾಪ್ ಕಾಮ್ಸ್ ಮೂಲಕ ಮಾರಾಟದ ಬಗ್ಗೆ ಚಿಂತನೆ ನಡೆದಿದೆ. ಜನಪ್ರತಿನಿಧಿಗಳು, ಅಧಿಕಾರಿಗಳ ಬಳಿ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ" ಎಂದರು.

ಸುತ್ತೂರು ಮಠಕ್ಕೆ ಭೇಟಿ: ಇದೇ ಸಂದರ್ಭ ಸುತ್ತೂರು ಮಠ ಮೈಸೂರು ಶಾಖೆಗೆ ಭೇಟಿ ನೀಡಿದ ಎಸ್.ಟಿ.ಸೋಮಶೇಖರ್ ಅವರು, ಶಿವರಾತ್ರಿದೇಶೀಕೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು. ಕೃಷಿ ಸಚಿವ ಬಿ.ಸಿ.ಪಾಟೀಲ್, ಮಾಜಿ ಸಚಿವ ಎಚ್. ವಿಶ್ವನಾಥ್, ಸಂಸದ ಪ್ರತಾಪ್ ಸಿಂಹ ಜೊತೆಗಿದ್ದರು.












Click it and Unblock the Notifications