ಮೈಸೂರು: ಲಾರಿ ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ
ಮೈಸೂರು, ಜೂನ್ 21: ಕಳ್ಳತನ ಮಾಡಿಕೊಂಡು ಹೋಗಿದ್ದ ಲಾರಿಯನ್ನು ಪತ್ತೆ ಮಾಡಿರುವ ಪೊಲೀಸರು, ಈ ಸಂಬಂಧ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಗ್ರಾಮದ ಗೋವಿಂದ, ಕೋಣಶಾಲೆ ಗ್ರಾಮದ ರತನ್ ಶೇಖರ್ ಎಂದು ಗುರುತಿಸಲಾಗಿದೆ.
ಕಳೆದ ಮೇ 29 ರಂದು ಮೈಸೂರಿನ ಎಪಿಎಂಸಿ ಮಾರುಕಟ್ಟೆ ಬಳಿಯ ಪೆಟ್ರೋಲ್ ಬಂಕ್ ನಲ್ಲಿ ಬಂಬೂ ಬಜಾರ್ ನಿವಾಸಿ ಮಹೇಶ್ ಎಂಬುವವರು ನಿಲ್ಲಿಸಿದ್ದ ಅಶೋಕ ಲೇಲ್ಯಾಂಡ್ ಲಾರಿಯನ್ನು ಖದೀಮರು ಕಳವು ಮಾಡಿದ್ದರು. ಈ ಸಂಬಂಧ ಮಹೇಶ್ ಮೈಸೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಮೈಸೂರು ವಿವಿ ಕುಲಪತಿಗೆ ಮೋಸ: ಸೈಟ್ ವಿಚಾರದಲ್ಲಿ ವಂಚನೆ
ಕಳುವಾದ ಲಾರಿ ಪತ್ತೆ ಕಾರ್ಯಾಚರಣೆ ಆರಂಭಿಸಿದ ಸಿಪಿಐ ಕೆ.ಜೀವನ್ ನೇತೃತ್ವದ ತಂಡಕ್ಕೆ ಶನಿವಾರ ಬೆಳಿಗ್ಗೆ ೬ ಗಂಟೆ ಸಮಯದಲ್ಲಿ ಆರೋಪಿಗಳಾದ ಗೋವಿಂದ ಮತ್ತು ರತನ್ ಶೇಖರ್ ಬಂಡಿಪಾಳ್ಯದ ಶನೀಶ್ವರ ದೇವಾಲಯದ ಬಳಿ ಸಿಕ್ಕಿ ಬಿದ್ದಿದ್ದಾರೆ.
ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುವ ವೇಳೆ ಲಾರಿ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದು, ಪೊಲೀಸರು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.