ವಿಶ್ವ ಪಾರಂಪರಿಕ ತಾಣದ ಪಟ್ಟಿ ಸೇರಲಿದೆ ಮೈಸೂರು ದಸರಾ
ಮೈಸೂರು, ಜನವರಿ 06; ಇತ್ತೀಚಿಗೆ ಪಶ್ಚಿಮ ಬಂಗಾಳದ ದುರ್ಗಾಪೂಜೆ ಯುನಿಸ್ಕೋ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಸೇರ್ಪಡೆಯಾಗಿದೆ. ಈ ಹಿನ್ನೆಲೆಯಲ್ಲಿ ನಾಡಹಬ್ಬ ಮೈಸೂರು ದಸರಾವನ್ನು ವಿಶ್ವ ಪಾರಂಪರಿಕಾ ತಾಣಗಳ ಪಟ್ಟಿಗೆ ಸೇರಿಸಲು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಚಿಂತನೆ ನಡೆಸಿದೆ.
ವಿಶ್ವ ಪಾರಂಪರಿಕಾ ತಾಣ ಪಟ್ಟ ಸುಖಾ ಸುಮ್ಮನೆ ಸಿಗುವುದಿಲ್ಲ. ಅದೊಂದು ಸುದೀರ್ಘವಾದ ಪ್ರಕ್ರಿಯೆ. ಯುನೆಸ್ಕೋ ಸಂಸ್ಥೆ ವರ್ಲ್ಡ್ ಹೆರಿಟೇಜ್ ಸೈಟ್ ಪಟ್ಟವನ್ನು ನೀಡುವ ಜವಾಬ್ದಾರಿ ಹೊತ್ತುಕೊಂಡಿದೆ. ಕರ್ನಾಟಕದ ಹಂಪಿ, ಪಟ್ಟದಕಲ್ಲು, ಪಶ್ಚಿಮಘಟ್ಟವನ್ನು ವಿಶ್ವ ಪಾರಂಪರಿಕ ತಾಣವೆಂದು ಯುನಿಸ್ಕೋ ಗುರುತಿಸಿದೆ.
ಇದೀಗ ಆ ಸಾಲಿಗೆ ವಿಶ್ವ ಪ್ರಸಿದ್ಧ ನಾಡಹಬ್ಬ 'ಮೈಸೂರು ದಸರಾ' ಮಹೋತ್ಸವವನ್ನೂ ಸೇರಿಸಲು ಸರಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮುಂದಾಗಿದೆ.

ಈ ಕುರಿತು ಪುರಾತತ್ವ , ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತರಾದ ಬಿ. ಆರ್. ಪೂರ್ಣಿಮಾ ಮಾತನಾಡಿದ್ದಾರೆ, "ಮೈಸೂರು ದಸರಾಗೆ 400 ವರ್ಷಕ್ಕೂ ಹೆಚ್ಚು ಇತಿಹಾಸ ಇದೆ. ತನ್ನದೆ ಪರಂಪರೆ, ಸಂಸ್ಕೃತಿ ಮೂಲಕ ದಸರಾ ವಿಶ್ವದ ಗಮನ ಸೆಳೆದಿದೆ. ದೈವದ ಭಕ್ತಿ, ಜಾನಪದ, ಇತಿಹಾಸ, ಕಲೆ, ವಾಸ್ತುಶಿಲ್ಪ ಎಲ್ಲವೂ ದಸರಾದೊಂದಿಗೆ ಮಿಳಿತಗೊಂಡಿದೆ. ಈ ನಿಟ್ಟಿನಲ್ಲಿ ದಸರಾ ಮಹೋತ್ಸವವನ್ನು ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಚಿಂತನೆ ನಡೆದಿದೆ" ಎಂದರು.
ನಾಡಹಬ್ಬ ದಸರಾ ಹಬ್ಬದ ವೈವಿಧ್ಯತೆ, ಸಂಸ್ಕೃತಿ, ಪರಂಪರೆಗಳನ್ನು ಬಿಂಬಿಸುವ ಫೋಟೋ, ವಿಡಿಯೋಗಳೊಂದಿಗೆ ಕರಡು ಸಿದ್ಧಪಡಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ನಂತರ ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯಾಗೆ ಈ ಪ್ರಸ್ತಾವನೆಯನ್ನು ಯುನೆಸ್ಕೋಗೆ ಸಲ್ಲಿಸುತ್ತದೆ. ನಂತರ 'world heritage site committee ' ತಾಣಗಳನ್ನು ವೀಕ್ಷಿಸಿ, ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಸದ್ಯ ಭಾರತದಲ್ಲಿ ಅಜಂತಾ ಗುಹೆ, ಜೈಪುರ ಸೇರಿದಂತೆ 39 ತಾಣಗಳು ವಿಶ್ವಪಾರಂಪರಿಕ ಪಟ್ಟಿಗೆ ಸೇರಿವೆ. ಈ ಹಿಂದೆ ಶ್ರೀರಂಗಪಟ್ಟಣದ ಟಿಪ್ಪು ಸುಲ್ತಾನ್ ಆಳ್ವಿಕೆ, ಬೇಲೂರು-ಹಳೇಬೀಡಿನ ಹೊಯ್ಸಳರ ಆಳ್ವಿಕೆ, ಬೀದರ್-ಗುಲ್ಬರ್ಗದ ದೆಹಲಿ ಸುಲ್ತಾನರ ಆಳ್ವಿಕೆಯನ್ನೂ ವಿಶ್ವ ಪಾರಂಪರಿಕ ತಾಣವೆಂದು ಪರಿಗಣಿಸಲು ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ.
ಏನೆಲ್ಲಾ ಪ್ರಯೋಜನ?: ಮೈಸೂರು ದಸರಾ ವಿದೇಶದಲ್ಲೂ ಪ್ರಖ್ಯಾತಿ ಪಡೆದುಕೊಂಡಿದೆ. ಹಾಗಾಗಿ ಈ ಗರಿ ಸಿಕ್ಕರೆ ಮೈಸೂರು ದಸರಾಗೆ ವಿಶ್ವಮಟ್ಟದಲ್ಲಿ ಮನ್ನಣೆ ಸಿಕ್ಕಿದಂತಾಗುತ್ತದೆ. ವಿದೇಶಿಗರು ಮತ್ತಷ್ಟು ಸಂಖ್ಯೆಯಲ್ಲಿ ದಸರಾ ನೋಡಲು ಬರುತ್ತಾರೆ. ವಿಶ್ವ ಯುನಿಸ್ಕೋ ಸಮಿತಿ ರಚನೆ ಆಗುತ್ತದೆ. ಪ್ರವಾಸೋದ್ಯಮ ದೃಷ್ಟಿಯಿಂದಲೂ ಅನುಕೂಲಕರವಾದ ವಾತಾವರಣ ನಿರ್ಮಾಣ ಆಗುತ್ತದೆ. ದಸರಾ ಪ್ರಾಧಿಕಾರ ರಚನೆಗೂ ಇದು ಅವಕಾಶ ಮಾಡಿಕೊಡುತ್ತದೆ.
"ದಸರಾ ಮಹೋತ್ಸವಕ್ಕೆ ತನ್ನದೇ ಆದ ಇತಿಹಾಸ, ಪರಂಪರೆ ಇದೆ. ಹಾಗಾಗಿ ವಿಶ್ವ ಪಾರಂಪರಿಕ ಪಟ್ಟಿಗೆ ದಸರಾ ಸೇರಿಸಬೇಕೆಂಬ ಇಲಾಖೆ ಕ್ರಮ ಸ್ವಾಗತಾರ್ಹ. ಈ ಬಗ್ಗೆ ನಾನು ಐದು ವರ್ಷದಿಂದ ಇಲಾಖೆಗೆ ಸಲಹೆ ನೀಡುತ್ತಾ ಬಂದಿದ್ದೇನೆ. ಇದರಿಂದ ದಸರಾಗೆ ಜಾಗತಿಕ ಮನ್ನಣೆ ಸಿಗುತ್ತದೆ" ಎಂದು ಪಾರಂಪರಿಕ ತಜ್ಞರಾದ ರಂಗರಾಜು ಹೇಳಿದ್ದಾರೆ.












Click it and Unblock the Notifications