ದಸರಾ ಮುಗಿದ ಖುಷಿಯಲ್ಲಿ ಗಜಪಡೆ ಮಾವುತರು
ಮೈಸೂರು, ಅಕ್ಟೋಬರ್ 13: ಎರಡು ತಿಂಗಳಿಗೂ ಹೆಚ್ಚು ಕಾಲ ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟು, ತಾಲೀಮಿನಲ್ಲಿ ತೊಡಗಿಸಿಕೊಂಡು ಐತಿಹಾಸಿಕ ಜಂಬೂಸವಾರಿಯನ್ನು ಯಶಸ್ವಿಯಾಗಿ ಮುಗಿಸಿದ ಗಜಪಡೆ ಗುರುವಾರ ತಮ್ಮ ಸ್ವಸ್ಥಾನಗಳಿಗೆ ಮರಳುತ್ತಿವೆ.
ಮಂಗಳವಾರ ಬೆಳಗ್ಗೆಯಿಂದ ದಸರಾ ಗುಂಗಿನಲ್ಲಿದ್ದ ಮತ್ತು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಗಜಪಡೆ ಬುಧವಾರ ಅರಮನೆ ಆವರಣದಲ್ಲಿ ನಿರಾಳವಾಗಿದ್ದವು. ಮೈಮೇಲಿನ ಚಿತ್ತಾರವನ್ನು ಗಜಮಜ್ಜನದ ಮೂಲಕ ಮಾವುತರು ಮತ್ತು ಕಾವಾಡಿಗಳು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿದರು. ಸುಮಾರು 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತ ಅರ್ಜುನನಿಗೆ ಆಗಿದ್ದ ಮೈ ನೋವನ್ನು ಹೋಗಲಾಡಿಸಲು ಬಿಸಿ ನೀರಿನ ಸ್ನಾನ ಮಾಡಿಸಲಾಯಿತು.[ಮೈಸೂರು ದಸರಾದ ಜಂಬೂಸವಾರಿ ಸೂಪರ್ರೂ ಕಣ್ರೀ...]

ಗಜಪಡೆಗಳಿಗೆ ಅಲಂಕರಿಸಿದ್ದ ವಸ್ತುಗಳನ್ನು ತೆಗೆದು ಜೋಡಿಸಿ ಭದ್ರವಾಗಿ ಇಡಲಾಯಿತು. ಇನ್ನು ಕಾವಾಡಿ, ಮಾವುತರ ಕುಟುಂಬದವರು ತಮ್ಮ ಬಟ್ಟೆ ಬರೆಗಳನ್ನು ಒಗೆದು, ಸ್ವಚ್ಛಗೊಳಿಸಿದರು. ತಮ್ಮ ಸಾಮಾನು ಸರಂಜಾಮನ್ನು ಸಿದ್ಧಪಡಿಸಿಕೊಂಡು ಹೊರಡಲು ಅನುವಾದರು. ಬುಧವಾರ ಗಜಪಡೆಗಳು ಹೇಗಿದ್ದವು ಎಂಬ ಕುರಿತ ಚಿತ್ರಗಳು ಇಲ್ಲಿವೆ.[ಮಳೆಗಾಗಿ ಸಿದ್ದು ಪ್ರಾರ್ಥನೆ.. ಮೈಸೂರಿನಲ್ಲಿ ವರುಣನ ಸಿಂಚನ]

ಮತ್ತೊಂದೆಡೆ ಚಾಮುಂಡಿ ಬೆಟ್ಟದಿಂದ ತರಲಾಗಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಮರಳಿ ಸ್ವಸ್ಥಾನಕ್ಕೆ ಕೊಂಡೊಯ್ಯಲಾಯಿತು. ಇನ್ನೊಂದೆಡೆ ಅರಮನೆ ಆವರಣದಲ್ಲಿ ಹಾಕಿದ್ದ ಶಾಮಿಯಾನ, ಆಸನಗಳ ತೆರವುಗೊಳಿಸುವ ಕಾರ್ಯಗಳಾದರೆ, ಮಾವುತರು ಮತ್ತು ಕಾವಾಡಿಗಳು ಮೀನು ಸಾರು ಮಾಡಿ ಊಟ ಮಾಡುವ ಮೂಲಕ ಎಂಜಾಯ್ ಮಾಡಿದರು.












Click it and Unblock the Notifications