ನಾಡಹಬ್ಬ ದಸರಾ ಹೊತ್ತಲ್ಲೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರೇವ್ ಪಾರ್ಟಿ: 50 ಜನರ ಬಂಧನ
ಮೈಸೂರು, ಸೆಪ್ಟೆಂಬರ್ 29: ಒಂದೆಡೆ ಸಾಂಸ್ಕೃತಿಕ ನಗರಿ ಮೈಸೂರು ನಾಡ ಹಬ್ಬ ದಸರಾಗೆ ಸಜ್ಜಾಗುತ್ತಿದ್ದರೆ ಮತ್ತೊಂದೆಡೆ ನಗರದ ಹೊರವಲಯದಲ್ಲಿ ಅನೈತಿಕ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಸಾಂಸ್ಕೃತಿಕ ನಗರಿ ಮೈಸೂರಿಗೂ ರೇವ್ ಪಾರ್ಟಿ ಬಿಸಿ ತಟ್ಟಿದ್ದು, ನಾಡಹಬ್ಬ ದಸರಾ ಸಂದರ್ಭದಲ್ಲಿಯೇ ಮೈಸೂರಿನ ಹೊರವಲಯದಲ್ಲಿ ರೇವ್ ಪಾರ್ಟಿ ಆಯೋಜಿಸಲಾಗಿದೆ.
ನಗರದ ಹೊರವಲಯದಲ್ಲಿ ರೇವ್ ಪಾರ್ಟಿ ನಡೆಸುತ್ತಿದ್ದ ಸ್ಥಳದ ಮೇಲೆ ಮೈಸೂರಿನ ಪೊಲೀಸರು ದಾಳಿ ನಡೆಸಿದ್ದು, ರೇವ್ ಪಾರ್ಟಿಯಲ್ಲಿ ಮೈ ಮರೆತ್ತಿದ್ದ 50ಕ್ಕೂ ಹೆಚ್ಚು ಯುವಕ- ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ 30ಕ್ಕೂ ಹೆಚ್ಚು ಕಾರುಗಳನ್ನು ಹಾಗೂ ಇತರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕೆ.ಆರ್.ಎಸ್ ಬ್ಯಾಕ್ ವಾಟರ್ ಬಳಿ ಇರುವ ಖಾಸಗಿ ಜಮೀನಿನಲ್ಲಿ ತಂಡವೊಂದು ರೇವ್ ಪಾರ್ಟಿ ಆಯೋಜಿಸಿದೆ ಎನ್ನಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಪ್ರಚಾರ ಮಾಡಿದ್ದಾನೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಸುಮಾರು 25ಕ್ಕೂ ಹೆಚ್ಚು ಜೋಡಿಗಳು ಪಾರ್ಟಿಗೆ ನೊಂದಾಯಿಸಿಕೊಂಡಿದ್ದರು. ಹಾಗೂ ದಿನಾಂಕ ನಿಗದಿಯಂತೆ ಎಲ್ಲರೂ ನಿನ್ನೆ ರಾತ್ರಿ ರೇವ್ ಪಾರ್ಟಿಗಾಗಿ ಸೇರಿದ್ದರು.
ನಿನ್ನೆ ತಡರಾತ್ರಿ ಪಾರ್ಟಿ ಆರಂಭವಾಗಿತ್ತು. ಡಿಜೆ ಮೂಲಕ ಅಬ್ಬರದ ಸಂಗೀತ ಏರ್ಪಡಿಸಲಾಗಿತ್ತೆಂದು ಹೇಳಲಾಗಿದೆ. ಇದರಿಂದ ಸ್ಥಳೀಯ ಕೆಲವರಿಗೆ ಕಿರಿಕಿರಿ ಉಂಟಾಗಿದೆ. ಡಿಜೆ ಸದ್ದು ಹಾಗೂ ಪಾರ್ಟಿ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಎಸ್ಪಿ ವಿಷ್ಣುವರ್ಧನ್ ಅವರ ನೇತೃತ್ವದಲ್ಲಿ ಅಡಿಷನಲ್ ಎಸ್ಪಿ ನಾಗೇಶ್ ಹಾಗೂ ಡಿವೈಎಸ್ಪಿ ಕರೀಂ ರಾವತರ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಸದ್ಯ 50ಕ್ಕೂ ಹೆಚ್ಚು ಯುವಕ- ಯುವತಿಯರನ್ನು ಪೊಲೀಸರು ಬಂಧಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಮುಂದಾಗಿದ್ದಾರೆ. ಇನ್ನು ಪಾರ್ಟಿಗಾಗಿ ಬಳಸಲಾದ ಸಂಗೀತ ಉಪಕರಣಗಳನ್ನೂ ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ಹೊರವಲಯದಲ್ಲಿ ನಡೆದಿರುವ ರೇವ್ ಪಾರ್ಟಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ' ಈ ಬಗ್ಗೆ ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ. ಎಸ್ಪಿ ಮಾಹಿತಿ ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುತ್ತಾರೆ' ಎಂದು ಹೇಳಿದರು.












Click it and Unblock the Notifications